‘ಕಾಂತಾರ’ ನೋಡಿ ಗೂಸ್ ಬಂಪ್ಸ್ ಬಂತು : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹೊಗಳಿಕೆ

By
2 Min Read

ಭಾರತೀಯ ಸಿನಿಮಾ ರಂಗದ ಅನೇಕ ಕಲಾವಿದರು ಕಾಂತಾರ (Kantara) ಸಿನಿಮಾ ಮೆಚ್ಚಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆಯನ್ನು ಬರೆಯುತ್ತಿದ್ದಾರೆ. ಈಗಾಗಲೇ ಧನುಷ್, ಪ್ರಭಾಸ್, ಕಾರ್ತಿ, ಅನುಷ್ಕಾ ಶೆಟ್ಟಿ ಸೇರಿದಂತೆ ಸಾಕಷ್ಟು ಕಲಾವಿದರು ಚಿತ್ರದ ಬಗ್ಗೆ ಹೊಗಳಿದ್ದಾರೆ. ರಿಷಬ್ ನಟನೆಯನ್ನು ಕೊಂಡಾಡಿದ್ದರು. ಇದೀಗ ಶಿಲ್ಪಾ ಶೆಟ್ಟಿ ಅವರ ಸರದಿ. ಮೂಲತಃ ಕರಾವಳಿಯ ಹುಡುಗಿಯಾಗಿರುವ ಶಿಲ್ಪಾ (Shilpa Shetty) ಕಾಂತಾರ ಚಿತ್ರಕ್ಕೆ ತಮ್ಮದೇ ಆದ ರೀತಿಯಲ್ಲಿ ಬಣ್ಣಿಸಿದ್ದಾರೆ.

ಓ ಮೈ ಗಾಡ್ ಎಂದು ಅಚ್ಚರಿಯ ಮೂಲಕವೇ ಸಿನಿಮಾದ ಬಗ್ಗೆ ಅನಿಸಿಕೆಗಳನ್ನು ಬರೆದಿರುವ ಶಿಲ್ಪಾ, ‘ಕಾಂತಾರ ಚಿತ್ರವನ್ನು ಇದೀಗ ಚಿತ್ರಮಂದಿರದಲ್ಲಿ ನೋಡಿದೆ. ನರೇಟಿವ್ ಅದ್ಭುತವಾಗಿದೆ. ಕ್ಲೈಮ್ಯಾಕ್ಸ್ ನೋಡಿದ ನಂತರ ಗೂಸ್ ಬಂಪ್ಸ್ ಬಂತು. ಈ ಸಿನಿಮಾ ಪ್ರೇಕ್ಷಕರನ್ನು ಬೇರೆ ಜಗತ್ತಿಗೆ ಕರೆದುಕೊಂಡು ಹೋಗುತ್ತದೆ. ನಾನು ಮೂಲತಃ ಅದೇ ನಾಡಿನವಳು ಆಗಿದ್ದರಿಂದ, ವಾಪಸ್ಸು ನನ್ನ ತಾಯಿ ನೆಲಕ್ಕೆ ನನ್ನನ್ನು ಸಿನಿಮಾ ಕರೆದುಕೊಂಡು ಹೋಯಿತು ಎಂದು ಬರೆದುಕೊಂಡಿದ್ದಾರೆ. ರಿಷಬ್ ಶೆಟ್ಟಿ (Rishabh Shetty) ಪ್ರತಿಭೆಯನ್ನೂ ಕೊಂಡಾಡಿದ್ದಾರೆ.  ಇದನ್ನೂ ಓದಿ: ‘ಬಿಗ್ ಬಾಸ್ ಸೀಸನ್ 9’ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ

ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದ ಕಾಂತಾರ

ಹೊಂಬಾಳೆ ಫಿಲಂಸ್ ನಿರ್ಮಾಣದ ‘ಕಾಂತಾರ’ ಶನಿವಾರ (ಅ. 15) ಹೊಸ ದಾಖಲೆ ಸೃಷ್ಟಿ ಮಾಡಿದೆ. ಬಿಡುಗಡೆಯಾದ 16ನೇ ದಿನಕ್ಕೆ 15 ಕೋಟಿ ರೂ. ಸಂಗ್ರಹಿಸುವ ಮೂಲಕ ಅತೀ ಹೆಚ್ಚು ಗಳಿಕೆ ಮಾಡಿದೆ. ಇಡೀ ಜಗತ್ತೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ‘ಕೆಜಿಎಫ್’ ನಿರ್ಮಾಪಕರಾದ ವಿಜಯ್ ಕುಮಾರ್ ಕಿರಗಂದೂರು ನಿರ್ಮಾಣದ ‘ಕಾಂತಾರ’ ಚಿತ್ರದ ಕನ್ನಡ ಅವತರಣಿಕೆಯು ಸೆಪ್ಟೆಂಬರ್ 30ರಂದು ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲೂ ಬಿಡುಗಡೆಯಾಯಿತು. ಚಿತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಕ್ಟೋಬರ್ 14,15 ಮತ್ತು 16ರಂದು ಕ್ರಮವಾಗಿ ತೆಲುಗು, ಹಿಂದಿ ಮತ್ತು ತಮಿಳಿನಲ್ಲಿ ಬಿಡುಗಡೆ ಮಾಡಲಾಯಿತು.

ಈ ಪೈಕಿ ಶನಿವಾರದಂದು ಚಿತ್ರದ ಹಿಂದಿ ಅವತರಣಿಕೆಯು ಉತ್ತರ ಭಾರತದಲ್ಲಿ 2.75 ಕೋಟಿ ರೂ. ಸಂಗ್ರಹಿಸಿದೆ. ಹಿಂದಿ ಅವತರಣಿಕೆಯು ಶುಕ್ರವಾರವಷ್ಟೇ (ಅ. 14) ಬಿಡುಗಡೆಯಾಗಿತ್ತು. ಮೊದಲ ದಿನದ ಕಲೆಕ್ಷನ್ಗೆ ಹೋಲಿಸಿದರೆ, ಎರಡನೆಯ ದಿನ ದ್ವಿಗುಣ ಕಲೆಕ್ಷನ್ ಆಗಿರುವುದು ವಿಶೇಷ. ಇನ್ನು, ಕನ್ನಡ, ತೆಲುಗು ಮತ್ತು ತಮಿಳು ಅವತರಣಿಕೆಯಿಂದ 12 ಕೋಟಿ ರೂ. ಗಳಿಕೆ ಆಗಿದೆ. ಒಟ್ಟಾರೆ, ಶನಿವಾರವೊಂದೇ ‘ಕಾಂತಾರ‘ ಚಿತ್ರವು ನಾಲ್ಕು ಭಾಷೆಗಳಿಂದ ಸೇರಿ 15 ಕೋಟಿ ರೂ. ಗಳಿಕೆ ಕಂಡಿದೆ. ‘ಕಾಂತಾರ’ ಚಿತ್ರದ ಕನ್ನಡ ಅವತರಿಣಿಕೆಯು ಸೆ. 30ರಂದು ಬಿಡುಗಡೆಯಾಗಿದ್ದು, ಶನಿವಾರಕ್ಕೆ 16 ದಿನಗಳಾಗಿವೆ. 16ನೇ ದಿನ ನಾಲ್ಕು ಭಾಷೆಗಳಿಂದ 15 ಕೋಟಿ ರೂ. ಗಳಿಕೆ ಮಾಡಿ ಹೊಸ ದಾಖಲೆ ಮಾಡಿದೆ.

‘ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದ್ದು, ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರ ದಂಡಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ. ಕನ್ನಡದ ಸಿನಿಮಾವೊಂದು ರಿಲೀಸ್ ಆಗಿ 16 ದಿನಗಳ ನಂತರವೂ ಈ ಪ್ರಮಾಣದಲ್ಲಿ ಹಣ ಹರಿದು ಬಂದಿದ್ದು, ಇದೇ ಮೊದಲು ಎಂದು ಹೇಳಲಾಗುತ್ತಿದೆ. ಅಲ್ಲದೇ, ಇದೊಂದು ಕೇಳರಿಯದಂತಹ ದಾಖಲೆ ಎಂದು ಬಣ್ಣಿಸಲಾಗುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *