ಇಂದೇ ಎಂಇಎಸ್‍ಗೆ ನಿಷೇಧ ಹೇರಿ ಇಲ್ಲದಿದ್ದರೆ ಕರ್ನಾಟಕ ಬಂದ್‍ಗೆ ಕರೆ: ವಾಟಾಳ್ ನಾಗರಾಜ್

Public TV
1 Min Read

ಬೆಂಗಳೂರು: ಎಂಇಎಸ್ ಪುಂಡಾಟಿಕೆ ವಿರುದ್ಧ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ನಾಡಿನೆಲ್ಲಡೆ ಪ್ರತಿಭಟನೆಗಳು ನಡೆದಿವೆ. ಬೆಂಗಳೂರಿನ ಕನ್ನಡ ಒಕ್ಕೂಟ ಸಂಘಟನೆಗಳಿಂದ ಎಂಇಎಸ್ ಪುಂಡಾಟ ಖಂಡಿಸಿ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಎಂಇಎಸ್‍ಗೆ ಇವತ್ತೆ ನಿಷೇಧ ಹೇರಿ ಇಲ್ಲದಿದ್ದರೆ ಕರ್ನಾಟಕ ಬಂದ್‍ಗೆ ಕರೆ ನೀಡಲಾಗುವುದಾಗಿ ವಾಟಾಳ್,  ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ನಡೆದ ಪ್ರತಿಭಟನೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ  ಉದ್ಧವ್ ಠಾಕ್ರೆ ಭಾವಚಿತ್ರಕ್ಕೆ ಬೆಂಕಿ ಹಾಕುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಎಂಇಎಸ್ ಪುಂಡಾಟಿಕೆ ಹಿಂದೆ ಕಾಂಗ್ರೆಸ್ ಇದೆ – ಡಿಕೆಶಿ ವಿರುದ್ಧ ಸಿ.ಟಿ.ರವಿ ಆಕ್ರೋಶ

ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಕರ್ನಾಟಕದಲ್ಲಿ ಇದು ಕಣ್ಣೀರ ಕಥೆ. ನಿಜಕ್ಕೂ ನಾವು ಇದನ್ನು ಗಂಭೀರವಾಗಿ ಯೋಜನೆ ಮಾಡಬೇಕು. ಎಂಇಎಸ್‍ನವರ ಪುಂಡಾಟವನ್ನು ಕೊನೆಗೊಳಿಸಬೇಕು. ಈ ಕಾರಣಕ್ಕಾಗಿ ಎಂಇಎಸ್ ನಿಷೇಧ ಆಗಲೇಬೇಕು. ಇವತ್ತೇ ಕಲಾಪದಲ್ಲಿ ತೀರ್ಮಾನ ಮಾಡಿ ರಾತ್ರಿ ಎಷ್ಟು ಹೊತ್ತು ಆದರೂ ನಿಷೇಧ ಆಗಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಗ್ಗೆ ನಮಗೆ ಗೌರವ ಇದೆ. ಆದರೆ ಅವರು ಧೈರ್ಯ ತೆಗೆದುಕೊಳ್ಳಬೇಕು ಎಂದರು. ಇದನ್ನೂ ಓದಿ: ಕರವೇ ಪ್ರತಿಭಟನೆ- ಬೆಂಗಳೂರು, ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್

ಬಿಜೆಪಿ, ಆರ್‌ಎಸ್‌ಎಸ್‌ನವರಿಗೆ ಮರಾಠರನ್ನು ಕಂಡರೆ ಪ್ರೀತಿ. ನಮ್ಮ ಕೆಲ ಶಾಸಕರು ಮಂತ್ರಿಗಳೇ ಮರಾಠರ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಗೌರವ ಅಲ್ಲ. ಇವತ್ತು ಎಂಇಎಸ್ ನಿಷೇಧ ಆಗಲಿಲ್ಲ ಅಂದರೆ ನಾಡಿದ್ದು ಕನ್ನಡ ಒಕ್ಕೂಟ ಎಲ್ಲಾ ವರ್ಗದ ಸಂಘಟನೆಗಳನ್ನು ಕರೆದು ಸಭೆ ಮಾಡಿ ಕರ್ನಾಟಕ ಬಂದ್‍ಗೆ ಕರೆ ನೀಡುತ್ತೇವೆ. ಆ ದಿನ 1 ಲಕ್ಷಕ್ಕೂ ಹೆಚ್ಚು ಜನ ಸೇರಿ ತೀವ್ರ ಹೋರಾಟಕ್ಕೆ ಕರೆ ಕೊಡುವುದಾಗಿ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಗಲಾಟೆ ಮಾಡಿದವರೆಲ್ಲಾ ಕಾಂಗ್ರೆಸಿಗರು: ಶ್ರೀರಾಮುಲು

 

Share This Article
Leave a Comment

Leave a Reply

Your email address will not be published. Required fields are marked *