ಹಿಜ್ಬಲ್ ಮುಜಾಹಿದೀನ್ ಉಗ್ರ ಕೆಲವೇ ಗಂಟೆಯಲ್ಲಿ ಸಿಕ್ಕಿ ಬಿದ್ದಿದ್ದು ಹೇಗೆ?

Public TV
2 Min Read

ಶ್ರೀನಗರ: ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೇಡ್ ಸ್ಫೋಟ ಮಾಡಿ ಒಬ್ಬ ಹುಡುಗನ ಸಾವಿನ ಕಾರಣನಾಗಿ, 33 ಮಂದಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಯಾಸಿನ್ ಭಟ್‍ನನ್ನು ಪೊಲೀಸರು ಕೆಲವೇ ಗಂಟೆಯಲ್ಲಿ ಬಂಧಿಸಿದ್ದಾರೆ.

ಆರೋಪಿ ಗ್ರೆನೇಡ್ ದಾಳಿ ನಡೆಸಲು ಇಂದು ಬೆಳಗ್ಗೆಯೇ ಜಮ್ಮುವಿನ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ. ಪೂರ್ವ ನಿಯೋಜಿತ ಪ್ಲಾನ್‍ನಂತೆ 10.30ರ ವೇಳೆಗೆ ಹೊರಟು ನಿಂತಿದ್ದ ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಬಸ್ ಕೆಳಗೆ ಗ್ರೆನೇಡ್ ಎಸೆದು ಸ್ಥಳದಿಂದ ಪರಾರಿಯಾಗಿದ್ದ. ಆದರೆ ಈತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಸಿಸಿಟಿವಿ ದೃಶ್ಯ ಹಾಗೂ ಘಟನಾ ಸ್ಥಳದಲ್ಲಿ ಸಾರ್ವಜನಿಕರು ನೀಡಿದ ಮಾಹಿತಿಯಂತೆ 11.45ರ ವೇಳೆಗೆ ಎಲ್ಲಾ ಪೊಲೀಸ್ ಠಾಣೆ ಮತ್ತು ಚೆಕ್ ಪೋಸ್ಟ್ ಗಳಿಗೆ ಮಾಹಿತಿ ತಿಳಿಸಲಾಗಿತ್ತು. ಕೆಂಪು ಬಣ್ಣದ ಬ್ಯಾಗ್ ಮತ್ತು ಜೀನ್ಸ್ ಧರಿಸಿದ ವ್ಯಕ್ತಿ ಕಂಡು ಬಂದರೆ ವಶಕ್ಕೆ ಪಡೆದುಕೊಳ್ಳಿ ಎಂದು ಉತ್ತರದ ಎಸ್‍ಪಿ ಅಮೃತ್‍ಪಾಲ್ ಸಿಂಗ್ ಹಾಗೂ ಎಸ್‍ಡಿಪಿಒ ಜಸ್ವಂತ್ ಸಿಂಗ್ ಎಲ್ಲಾ ಪೊಲೀಸ್ ಠಾಣೆಗೆ ಸಂದೇಶ ಕಳುಹಿಸಿದ್ದರು.

ಈ ಸಂದೇಶ ಬಂದ ಬಳಿಕ ನಗೊರ್ಟಾ ಎಸ್‍ಡಿಪಿಒ ಮೋಹನ್ ಶರ್ಮಾ ಹಾಗೂ ನಗೊರ್ಟಾ ಎಸ್‍ಎಚ್‍ಒ ದೀಪಕ್ ಪಥಾನಿಯ ಅವರು ಬಾನ್ ಟೋಲ್ ಪ್ಲಾಜಾ ಬಳಿ ತಪಾಸಣೆ ನಡೆಸುತ್ತಿದ್ದಾಗ ಶಂಕೆಯ ಆಧಾರದಲ್ಲಿ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

ವಿಚಾರಣೆ ನಡೆಸಿದ ವೇಳೆ ಆತ ತನ್ನ ಹೆಸರು ಯಾಸಿರ್ ಜಾವೇದ್ ಭಟ್, ಕುಲ್ಗಮ್‍ನ ಜವೇದ್ ಭಟ್ ಪುತ್ರ ಎಂಬ ಮಾಹಿತಿಯನ್ನು ನೀಡಿದ್ದಾನೆ. ಮತ್ತಷ್ಟು ವಿಚಾರಣೆ ನಡೆಸಿದಾಗ ನಾನೇ ಜಮ್ಮು ನಿಲ್ದಾಣದಲ್ಲಿ ಈ ಕೃತ್ಯವನ್ನು ನಡೆಸಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.

ಸದ್ಯ ಉಗ್ರನನ್ನು ಬಂಧಿಸಿರುವ ಪೊಲೀಸರು ಕೃತ್ಯದ ಹಿಂದೆ ಸಂಚು ರೂಪಿಸಿದ್ದರ ಬಗ್ಗೆ ಮಾಹಿತಿ ಪಡೆಯಲು ತನಿಖೆ ಮುಂದುವರಿಸಿದ್ದಾರೆ. ಜೈಶ್ ಎ ಮೊಹಮ್ಮದ್ ಸಂಘಟನೆಗೆ ಭಾರತೀಯ ಯೋಧರು ಗುರಿಯಾದರೆ, ಹಿಜ್ಬುಲ್ ಮುಜಾಹಿದೀನ್ ಉಗ್ರರಿಗೆ ಸಾಮಾನ್ಯ ಜನರೇ ಟಾರ್ಗೆಟ್ ಎನ್ನಲಾಗಿದೆ. ಕುಲ್ಗಾಂ ಜಿಲ್ಲೆಯ ಹಿಜ್ಬುಲ್ ಮುಜಾಹಿದೀನ್ ಜಿಲ್ಲಾ ಕಮಾಂಡರ್ ಫಾರೂಕ್ ಅಹ್ಮದ್ ಭಟ್ ಅಲಿಯಾಸ್ ಒಮರ್ ಗ್ರೆನೇಡ್ ದಾಳಿ ನಡೆಸಲು ಸೂಚನೆ ನೀಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *