ಹೂ ಖರೀದಿ ವೇಳೆ ಲಾರಿ ಡಿಕ್ಕಿ- ಪಾದಯಾತ್ರೆಗೆ ಹೊರಟಿದ್ದ ಸ್ವಾಮೀಜಿ, ವ್ಯಾಪಾರಿ ದುರ್ಮರಣ

Public TV
1 Min Read

ದಾವಣಗೆರೆ: ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಹೂವಿನ ವ್ಯಾಪಾರಿ ಮತ್ತು ಸ್ವಾಮೀಜಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 4 ರ ಕಲಪನಹಳ್ಳಿ ಬಳಿ ನಡೆದಿದೆ.

ಗುಜರಾತಿನ ಗಾಂಧೀನಗರ ಜಿಲ್ಲೆಯ ಸ್ವಾಮೀಜಿ ಸುರಂನಾಥ್ (55) ದಾವಣಗೆರೆ ನಿಟ್ಟುವಳ್ಳಿ ನಿವಾಸಿ ಹೂವಿನ ವ್ಯಾಪಾರಿ ಗಂಗಾಧರ್ (50) ಮೃತ ದುರ್ದೈವಿಗಳು. ಲಾರಿ ಚಾಲಕ ನಾಸೀರ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ಗುಜರಾತಿನ ನಿವಾಸಿಗಳಾದ ಐದು ಮಂದಿ ಸ್ವಾಮೀಜಿಗಳು ಸುಮಾರು 15 ದಿನಗಳ ಹಿಂದೆ ಮೈಸೂರಿನ ಚಾಮುಂಡಿಬೆಟ್ಟವನ್ನು ನೋಡಲು ಪಾದಯಾತ್ರೆ ಹೊರಟಿದ್ದರು. ಇಂದು ದಾವಣಗೆರೆ ತಲುಪಿದ್ದ ಸ್ವಾಮೀಜಿಗಳು ಮುಂದೆ ಯಾವುದಾದರೂ ದೇವಾಲಯ ಸಿಗಬಹುದು ಎಂದು ಭಾವಿಸಿ ಹೂ ತೆಗೆದುಕೊಳ್ಳಲು ಮುಂದಾಗಿದ್ದರು. ಹೀಗಾಗಿ ಐವರಲ್ಲಿ ಹಿರಿಯ ಸ್ವಾಮೀಜಿಯಾದ ಸುರಂನಾಥ್ ಕಲಪನಹಳ್ಳಿದ್ದ ಹೂವಿನ ಅಂಗಡಿ ಬಳಿ ಹೋಗಿದ್ದಾರೆ.

ಈ ವೇಳೆ ಚಾಲಕನ ಅಜಾಗರೂಕತೆಯಿಂದ ವೇಗವಾಗಿ ಲಾರಿ ಬಂದು ಸ್ವಾಮೀಜಿ ಮತ್ತು ಹೂವಿನ ವ್ಯಾಪಾರಿಗೆ ಡಿಕ್ಕಿ ಹೊಡೆದು ಅವರ  ಮೇಲೆ ಹರಿದಿದೆ. ಲಾರಿ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಅಪಘಾತ ನಡೆದ ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಪೊಲೀಸರು ಬಂದು ಪ್ರಕರಣವನ್ನು ದಾಖಲಿಸಿಕೊಂಡು ಚಾಲಕನನ್ನು ಬಂಧಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *