ಗೋಕರ್ಣ ದೇಗುಲದ ಆಡಳಿತ ನಡೆಸ್ತಿದ್ದ ರಾಮಚಂದ್ರಾಪುರ ಮಠಕ್ಕೆ ಹೈಕೋರ್ಟ್ ನಿಂದ ಬ್ರೇಕ್

Public TV
1 Min Read

ಬೆಂಗಳೂರು: ಕಳೆದ 10 ವರ್ಷಗಳಿಂದ ಗೋಕರ್ಣ ದೇಗುಲದ ಆಡಳಿತ ನಡೆಸುತ್ತಿದ್ದ ರಾಮಚಂದ್ರಾಪುರ ಮಠಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದ್ದು, ಸೆಪ್ಟೆಂಬರ್ 10ರಿಂದ ಉಸ್ತುವಾರಿ ಸಮಿತಿ ಅಸ್ಥಿತ್ವಕ್ಕೆ ಬರಬೇಕು ಅಂತಾ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಅರವಿಂದ್ ಕುಮಾರ್ ಅವರ ಜಂಟಿ ಪೀಠವು, ಸರ್ಕಾರದ ದೇಗುಲ ಹಸ್ತಾಂತರದ ಆದೇಶವನ್ನು ರದ್ದು ಮಾಡಿದ್ದು, ದೇಗುಲದ ಸ್ಥಿರಾಸ್ಥಿ ಚರಾಸ್ಥಿ ಬ್ಯಾಂಕ್ ಅಕೌಂಟ್ ಸೇರಿದಂತೆ ಎಲ್ಲಾ ಆಸ್ತಿಯ ವಿವರವನ್ನು 2 ವಾರದೊಳಗೆ ಹೈಕೋರ್ಟ್ ಗೆ ಸಲ್ಲಿಸಬೇಕು ಎಂದು ನ್ಯಾಯಾಧೀಶರು ಉತ್ತರ ಕನ್ನಡದ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

2008ರ ಆಗಸ್ಟ್ 12ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಗೋಕರ್ಣದ ಐತಿಹಾಸಿಕ ಗೋಕರ್ಣ ದೇವಾಲಯವನ್ನು ರಾಮಚಂದ್ರಾಪುರ ಮಠದ ಸುಪರ್ದಿಗೆ ನೀಡಿತ್ತು. ಸರ್ಕಾರದ ಆದೇಶವನ್ನು ಪ್ರಶ್ನಿಸಿ ಬಾಲಚಂದರ್ ದೀಕ್ಷಿತ್ ಮತ್ತು ನರಹರಿ ಕೃಷ್ಣ ಹೆಗ್ಡೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದನ್ನು ಓದಿ: ಗೋಕರ್ಣ ದೇವಸ್ಥಾನ ವಿವಾದ: ಪೂಜಾ ಕಾರ್ಯಕ್ಕಾಗಿ 2 ಗುಂಪಿನ ಅರ್ಚಕರ ನಡುವೆ ವಾಗ್ವಾದ

ಮಹಾಬಲೇಶ್ವರ ದೇವಾಲಯವನ್ನು ಮುಜರಾಯಿ ಇಲಾಖೆಯ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಜಂಟಿ ಪೀಠವು ರದ್ದುಗೊಳಿಸಿದೆ. ಆದರೆ ಇತ್ತ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ರಾಮಚಂದ್ರಾಪುರ ಮಠದ ವಕೀಲರು ಕೋರಿಕೆ ವ್ಯಕ್ತಪಡಿಸಿದ್ದು, ಅದಕ್ಕೆ ಅರ್ಜಿದಾರರ ಪರ ವಕೀಲರಿಂದ ವಿರೋಧ ವ್ಯಕ್ತವಾಗಿದೆ.

ಕಾರವಾರ ವರದಿ: ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಹಸ್ತಾಂತರ ಮಾಡಿದ ಹಿನ್ನಲೆಯಲ್ಲಿ ದೇವಸ್ಥಾನದ ಮುಂದೆ ಗೋಕರ್ಣ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಹಾಗೂ ಸ್ಥಳೀಯರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಬಿ.ಎಸ್.ಯಡಿಯೂರಪ್ಪ ಸರ್ಕಾರ ಶಿವಮೊಗ್ಗ ಜಿಲ್ಲೆಯ ಹೊಸನಗರ ರಾಮಚಂದ್ರಾಪುರ ಮಠಕ್ಕೆ ದೇವಸ್ಥಾನದ ಆಡಳಿತನ್ನು ಹಸ್ತಾಂತರಿಸಿತ್ತು. ಮಠದಿಂದ ಮುಜರಾಯಿ ಇಲಾಖೆಗೆ ಪುನಃ ಹಸ್ತಾಂತರಿಸಲು ಆದೇಶ ಬಂದಿದ್ದು ಸಂತಸ ತಂದಿದೆ. ಮಠದವರು ಅಪೀಲ್ ಹೋಗುವುದಾಗಿ ಹೇಳುತ್ತಿದ್ದಾರೆ. ಅವರು ಮುಂದೆ ಅಪೀಲ್ ಹೋದಲ್ಲಿ ನಾವು ಕೂಡ ಹೋರಾಟ ಮಾಡುತ್ತೇವೆ ಎಂದು ಬಾಲಚಂದ್ರ ದೀಕ್ಷಿತ್ ಪಬ್ಲಿಕ್ ಟಿ.ವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *