ಹಾಸನಾಂಬಾ ದರ್ಶನಕ್ಕೆ ಇಂದು ವಿಧ್ಯುಕ್ತ ತೆರೆ

Public TV
1 Min Read

ಹಾಸನ: ಹಾಸನಾಂಬಾ ದರ್ಶನಕ್ಕೆ ಇಂದು ವಿಧ್ಯುಕ್ತ ತೆರೆ ಬೀಳಲಿದೆ. ಇಂದು ಮಧ್ಯಾಹ್ನ 1 ಗಂಟೆಯಿಂದ 2 ಗಂಟೆ ಸುಮಾರಿಗೆ ಗರ್ಭಗುಡಿ ಬಾಗಿಲನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕ ಪ್ರೀತಂಗೌಡ, ಅಧಿಕಾರಿಗಳ ಸಮ್ಮುಖದಲ್ಲಿ ಮುಚ್ಚಲಾಗುವುದು.

ಹಾಸನಾಂಬಾ ಜಾತ್ರಾ ಮಹೋತ್ಸವದ ಕಡೇ ದಿನದ ಹಿನ್ನೆಲೆಯಲ್ಲಿ ಅರ್ಚಕರು ಗರ್ಭಗುಡಿ ಬಾಗಿಲು ಮುಚ್ಚುವ ಮುನ್ನ ದೇವರ ಮುಂದೆ ದೀಪ ಹಚ್ಚಿ, ಹೂವು, ನೈವೇದ್ಯ ಇಡಲಿದ್ದಾರೆ. ಇದರ ಇನ್ನೊಂದು ವಿಶೇಷತೆ ಎಂದರೆ ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ಅರ್ಚಕರು ಇಟ್ಟ ಹೂವು ಬಾಡುವುದಿಲ್ಲ, ದೀಪ ಆರುವುದಿಲ್ಲ. ಇದನ್ನೂ ಓದಿ: ಪುನೀತ್ ಸಾವಿನ ನಂತರ ಜಯದೇವ ಆಸ್ಪತ್ರೆ ರೋಗಿಗಳಲ್ಲಿ 30% ಹೆಚ್ಚಳ

ಗರ್ಭಗುಡಿ ಬಾಗಿಲನ್ನು ಅಕ್ಟೋಬರ್ 28 ರಂದು ತೆರೆದಿದ್ದು, ಒಂಭತ್ತು ದಿನದಲ್ಲಿ ಏಳು ದಿನ ಮಾತ್ರ ದೇವಿ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಲಕ್ಷಾಂತರ ಭಕ್ತರು ದೇವಿ ದರ್ಶನ ಪಡೆದಿದ್ದಾರೆ. 1000, 300 ರೂ. ವಿಶೇಷ ಟಿಕೆಟ್, ಲಾಡು ಹಾಗೂ ಹುಂಡಿ ಕಾಣಿಕೆಯಿಂದ ಹೆಚ್ಚು ಆದಾಯ ನಿರೀಕ್ಷೆ ಇದೆ. ಇಂದು ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಮುಚ್ಚಲಿದೆ.

ಹಾಸನದ ಎಸ್‍ಪಿ ಶ್ರೀನಿವಾಸ್ ನಿನ್ನೆ ದೇಗುಲದ ಬಳಿ ಭಕ್ತರ ನೂಕು ನುಗ್ಗಲು ಕಂಡು ಪರಿಸ್ಥಿತಿ ನಿಯಂತ್ರಿಸಿದ್ದರು. ನಂತರ ಅವರು ಮತ್ತು ಅವರ ಪತ್ನಿ ಸಿದ್ದೇಶ್ವರ ರಥೋತ್ಸವದಲ್ಲಿ ಭಾಗಿಯಾದರು. ಶ್ರೀನಿವಾಸ್ ಅವರು ಸಿದ್ದೇಶ್ವರ ದೇಗುಲದ ಒಳಭಾಗದಿಂದ ದೇಗುಲ ಹೊರಭಾಗದ ರಥದವರೆಗೆ ದೇವರ ಅಡ್ಡೆ ಹೊತ್ತು ಬಂದಿದ್ದು, ಪಕ್ಕದಲ್ಲೆ ಅವರ ಪತ್ನಿ ನಡೆದು ಬಂದು ದೇವರಿಗೆ ಭಕ್ತಿ ಅರ್ಪಿಸಿದ್ದಾರೆ. ಈ ವೇಳೆ ಶಾಸಕ ಪ್ರೀತಂಗೌಡ ಅವರು ಸಹ ಇವರ ಜೊತೆಯಲ್ಲಿಯೇ ಅಡ್ಡೆ ಹೊತ್ತಿಕೊಂಡು ಬಂದಿದ್ದಾರೆ. ಇದನ್ನೂ ಓದಿ:  ‘ಅಪ್ಪು’ ಸವಿನೆನಪು – ನ.9 ರಂದು ಅಭಿಮಾನಿಗಳಿಗೆ ಅನ್ನಸಂತರ್ಪಣೆ

ಐದು ದಿನಗಳ ಹಿಂದೆ ತಿರುಪತಿಯಲ್ಲಿ ವಿವಾಹವಾಗಿರುವ ಶ್ರೀನಿವಾಸ್ ಗೌಡ ಮತ್ತು ಅವರ ಪತ್ನಿ ಇಂದು ಹಾಸನಾಂಬಾ ಜಾತ್ರಾ ಮಹೋತ್ಸವದ ಕೊನೆಯ ದಿನವಾಗಿದ್ದರಿಂದ ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

Share This Article
Leave a Comment

Leave a Reply

Your email address will not be published. Required fields are marked *