ಮಂತ್ರಾಲಯದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ ಗುರುವೈಭವೋತ್ಸವ

Public TV
2 Min Read

-ಅಯೋಧ್ಯ ರಾಮ ಮಂದಿರದ ಕುರಿತು ಸುಬುಧೇಂದ್ರ ತೀರ್ಥ ಶ್ರೀಗಳ ಮಾತು
-ಯೋಧರಿಗಾಗಿ ರುದ್ರಯಾಗ

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುವೈಭೋತ್ಸವ ಕಾರ್ಯಕ್ರಮಕ್ಕೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಗಳು ಚಾಲನೆ ನೀಡಿದ್ದು, ಇಂದಿನಿಂದ ಆರು ದಿನಗಳ ಕಾಲ ವಿಜೃಂಭಣೆಯಿಂದ ಕಾರ್ಯಕ್ರಮಗಳು ನಡೆಯಲಿದೆ.

ಗುರು ರಾಯರ 424ನೇ ವರ್ಧಂತೋತ್ಸವ ಹಾಗು 398ನೇ ಪಟ್ಟಾಭಿಷೇಕ ಮಹೋತ್ಸವ ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರಕಿದೆ. ಈ ಕಾರ್ಯಕ್ರಮಗಳು ಮಾರ್ಚ್ 13ರ ವರೆಗೆ ನಡೆಯಲಿದೆ. ಇಂದು ಬೆಳಗ್ಗೆಯಿಂದಲೂ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ಈ ಆರು ದಿನಗಳ ಕಾಲ ವಿಶೇಷ ಪೂಜೆಗಳು ನಡೆಯುತ್ತವೆ. ಹಾಗೆಯೇ ಪ್ರತಿದಿನ ಸಂಜೆ ಅನುಗ್ರಹ ಪ್ರಶಸ್ತಿ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಅಲ್ಲದೆ ಕೊನೆಯ ದಿನ ನಾದಹಾರ ಕಾರ್ಯಕ್ರಮ ನಡೆಯಲಿದ್ದು, ಭಜನಾ ಮಂಡಳಿಗಳ ನೂರಾರು ಸಂಗೀತಗಾರರು ಒಟ್ಟಿಗೆ ರಾಯರ ಕೀರ್ತನೆ ಹಾಡಲಿದ್ದಾರೆ.

ಈ ವೈಭವೋಪೇತ ಕಾರ್ಯಕ್ರಮವನ್ನು ವೀಕ್ಷಿಸಲು ಹಾಗೂ ರಾಯರ ಆಶೀರ್ವಾದ ಪಡೆಯಲು ಗುರುವೈಭವೋತ್ಸವಕ್ಕೆ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.

ಅಲ್ಲದೆ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ಬಳಿಕ, ಸುಬುಧೇಂದ್ರ ತೀರ್ಥ ಶ್ರೀಗಳು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ಪ್ರತಿಕ್ರಿಯಿಸಿದರು. ಅಯೋಧ್ಯ ಸಂಧಾನಕ್ಕೆ ಸಂಧಾನಕಾರರನ್ನ ನೇಮಿಸಿರುವುದು ಸ್ವಾಗತರ್ಹ ಎಂದಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು. ರಾಮ ಜನಿಸಿದ ನಾಡಿನಲ್ಲಿ ಮಂದಿರ ನಿರ್ಮಾಣವಾಗಬೇಕು. ಆದ್ರೆ ಶಾಂತಿ ಮತ್ತು ಸೌಹಾರ್ದತೆಯಿಂದ ಮಂದಿರ ನಿರ್ಮಾಣವಾಗಬೇಕು. ನ್ಯಾಯಾಲಯ ಈ ನಿಟ್ಟಿನಲ್ಲಿ ಸಂಧಾನ ಸಮಿತಿ ರಚಿಸಿರುವುದನ್ನ ಸ್ವಾಗತಿಸುತ್ತೇವೆ ಎಂದರು. ಇದನ್ನೂ ಓದಿ:ಸಂಧಾನದ ಮೂಲಕವೇ ಅಯೋಧ್ಯೆ ವಿವಾದ ಬಗೆಹರಿಸಿಕೊಳ್ಳಿ- ಸುಪ್ರೀಂ ಕೋರ್ಟ್

ನಿವೃತ್ತ ನ್ಯಾಯಮೂರ್ತಿ ಎಫ್.ಎಂ ಇಬ್ರಾಹಿಂ ಖಲೀಫುಲ್ಲಾ, ಶ್ರೀ ರವಿಶಂಕರ್ ಗುರೂಜಿ, ಸಂಧಾನ ತಜ್ಞ ವಕೀಲ ಶ್ರೀರಾಮ್ ಪಾಂಚುರನ್ನ ಸಂಧಾನಕಾರರಾಗಿ ಆಯ್ಕೆ ಮಾಡಿರುವುದಕ್ಕೆ ಸಹಮತ ಸೂಚಿಸಿದರು. ಹಾಗೆಯೇ ದೇಶದಲ್ಲಿ ಶಾಂತಿ ನೆಲಸಲು, ಯೋಧರ ರಕ್ಷಣೆಗಾಗಿ ಶ್ರೀ ಮಠದಲ್ಲಿ ಮಾರ್ಚ್ 12 ರಂದು ಮಹಾರುದ್ರ ಯಾಗವನ್ನು ನಡೆಸಲಾಗುವುದು. ದೇಶದ ನಾನಾ ಕಡೆಯಿಂದ 200 ಜನ ರುದ್ರಯಾಗ ಮಾಡುವವರು ಆಗಮಿಸಲಿದ್ದಾರೆ ಅಂತ ಸುಬುಧೇಂದ್ರ ತೀರ್ಥ ಶ್ರೀಗಳು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *