ʻನೀನು ಹೊರಡೋ ಸಮಯ, ಎಲ್ಲರನ್ನೂ ಕ್ಷಮಿಸುʼ – ಹರೀಶ್ ರಾಣಾಗೆ ಕುಟುಂಬಸ್ಥರಿಂದ ಭಾವನಾತ್ಮಕ ವಿದಾಯ

2 Min Read

ನವದೆಹಲಿ: 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾ (31) (Harish Rana) ಅವರಿಗೆ ಕುಟುಂಬಸ್ಥರು ಭಾವನಾತ್ಮಕ ವಿದಾಯ ಹೇಳಿದ್ದಾರೆ. ಚಲನರಹಿತವಾಗಿ ಏಮ್ಸ್‌ ಆಸ್ಪತ್ರೆಯಲ್ಲಿ ಮಲಗಿದ್ದ ಅವರ ಬೆಡ್‌ ಸುತ್ತ ನಿಂತ ಕುಟುಂಬಸ್ಥರು ʻನೀನು ಹೊರಡೋ ಸಮಯ, ಎಲ್ಲರನ್ನೂ ಕ್ಷಮಿಸುʼಎಂದು ಮನವಿ ಮಾಡಿಕೊಂಡಿದ್ದಾರೆ.

ರಾಣಾ ಅವರ ಕುಟುಂಬವು ಅವರೊಂದಿಗೆ ತಮ್ಮ ಕೊನೆಯ ಕ್ಷಣಗಳನ್ನು ಕಳೆಯುತ್ತಿರುವ 22 ಸೆಕೆಂಡ್‌ಗಳ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೀಡಿಯೋದಲ್ಲಿ ರಾಣಾ ಅವರ ತಾಯಿ ಪಕ್ಕದಲ್ಲಿ ಭಾವುಕರಾಗಿ ಕುಳಿತಿದ್ದರು. ಬ್ರಹ್ಮ ಕುಮಾರಿ ಸಹೋದರಿಯೊಬ್ಬರು ಅವರ ಹಣೆಯ ಮೇಲೆ ತಿಲಕ ಹಚ್ಚಿ, ಎಲ್ಲರನ್ನೂ ಕ್ಷಮಿಸಿ, ಈಗ ಹೊರಡುವ ಸಮಯ ಎಂದು ತಲೆಯನ್ನು ಸವರುತ್ತಾ ಹೇಳಿರುವುದು ಸೆರೆಯಾಗಿದೆ. ಇದನ್ನೂ ಓದಿ: 13 ವರ್ಷಗಳಿಂದ ಕೋಮಾದಲ್ಲಿದ್ದ ವ್ಯಕ್ತಿಗೆ ದಯಾಮರಣ – ಸುಪ್ರೀಂ ಐತಿಹಾಸಿಕ ತೀರ್ಪು

ಕುಟುಂಬಸ್ಥರ ಅಂತಿಮ ವಿದಾಯದ ಬಳಿಕ ವೈದ್ಯರು ಕ್ರಮೇಣ ಅವರ ಜೀವರಕ್ಷಕ ಸಾಧನಗಳನ್ನು ಹಿಂತೆಗೆದುಕೊಂಡಿದ್ದಾರೆ. ಮಾ. 11 ರಂದು 2013ರಿಂದ ಕೋಮಾದಲ್ಲಿದ್ದ (Coma) ರಾಣಾ ಅವರ ದಯಾಮರಣಕ್ಕೆ ಸುಪ್ರೀಂ ಕೋರ್ಟ್‌ (Supreme Court) ಒಪ್ಪಿಗೆ ಸೂಚಿಸಿತ್ತು. ಇದು ದೇಶದಲ್ಲಿ ಮೊದಲನೆಯ ದಯಾಮರಣ ಪ್ರಕರಣವಾಗಿದೆ.

2013 ರಲ್ಲಿ ನಾಲ್ಕನೇ ಮಹಡಿಯಿಂದ ಬಿದ್ದ ನಂತರ ರಾಣಾ ಅವರ ಮೆದುಳಿಗೆ ಹಾನಿಯಾಗಿತ್ತು. ಅಂದಿನಿಂದ, ಅವರು ಜೀವ ರಕ್ಷಕಗಳ ಬೆಂಬಲದಲ್ಲಿದ್ದರು. ಉಸಿರಾಟಕ್ಕಾಗಿ ಟ್ರಾಕಿಯೊಸ್ಟೊಮಿ ಟ್ಯೂಬ್ ಮತ್ತು ಆಹಾರಕ್ಕಾಗಿ ಗ್ಯಾಸ್ಟ್ರೋಜೆಜುನೊಸ್ಟೊಮಿ ಟ್ಯೂಬ್ ಬಳಸಲಾಗುತ್ತಿತ್ತು. ಬಳಿಕ ರಾಣಾ ಅವರ ಪೋಷಕರು ಅವರಿಗೆ ದಯಾಮರಣ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಅಂತಿಮವಾಗಿ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು.

ರಾಣಾ ಕುಟುಂಬವು ಬ್ರಹ್ಮ ಕುಮಾರಿ ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದೆ. ಇದು ಹರೀಶ್‌ ಅವರ ದಯಾಮರಣಕ್ಕಾಗಿ ಹೋರಾಡಲು ವಕೀಲರನ್ನು ಹುಡುಕಲು ಸಹಾಯವಾಗಿತ್ತು ಎಂದು ವರದಿಯಾಗಿದೆ. ಇದನ್ನೂ ಓದಿ: ಆಸ್ತಿ ಕಲಹ – ಸಂಬಂಧಿ ಜೊತೆ ಸೇರಿ ಅಣ್ಣನನ್ನೇ ಕೊಂದ ತಮ್ಮ

Share This Article