ಗದಗದಲ್ಲಿ ನಿಂತಿಲ್ಲ ಪ್ರವಾಹ ಸಂತ್ರಸ್ತರ ಕಣ್ಣೀರು – ಪರಿಹಾರ ಹಂಚಿಕೆಯಲ್ಲಿ ವಿಳಂಬಕ್ಕೆ ಆಕ್ರೋಶ

Public TV
2 Min Read

ಗದಗ: ನೆರೆಹಾವಳಿಯಿಂದ ಮನೆ-ಮಠ ಕಳೆದುಕೊಂಡ ಸಾವಿರಾರು ಮಂದಿ ಬೀದಿಗೆ ಬಿದ್ದಿದ್ದಾರೆ. ನೆರೆಬಂದು ಹೋಗಿ ಒಂದೂವರೆ ತಿಂಗಳಾದರೂ ನೆರೆಸಂತ್ರಸ್ತರ ಕಣ್ಣಿರು ಮಾತ್ರ ಇನ್ನೂ ನಿಲ್ಲುತ್ತಿಲ್ಲ. ಕಾರಣ ಇನ್ನೂ ಸಂತ್ರಸ್ತರಿಗೆ 10 ಸಾವಿರ ಪರಿಹಾರ ಕೂಡುವಲ್ಲಿ ಸರ್ಕಾರ ವಿಫಲವಾಗಿದೆ.

ಹೌದು. ಜಲಪ್ರಳಯಕ್ಕೆ ಉತ್ತರ ಕರ್ನಾಟಕ ಅಕ್ಷರಶಃ ನಲುಗಿ ಹೋಗಿತ್ತು. ಅಗತ್ಯ ವಸ್ತುಗಳ ಖರೀದಿಗೆ 10 ಸಾವಿರ ರೂಪಾಯಿ ನೀಡಿತ್ತು. ಆದರೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ವಾಸನ ಗ್ರಾಮದ ಇನ್ನೂ ನೂರಾರು ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಸಿಕ್ಕಿಲ್ಲ. ಕೆಲವರಿಗೆ ಚೆಕ್ ನೀಡಿದ್ದಾರೆ. ಇನ್ನೂ ಕೆಲವರಿಗೆ ಪರಿಹಾರ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಸಂತ್ರಸ್ತರು ಕಿಡಿಕಾರಿದ್ದಾರೆ. ಸರ್ಕಾರದ 10 ಸಾವಿರ ಕೊಟ್ಟರೆ ಕೊನೆಪಕ್ಷ ಅಗತ್ಯ ವಸ್ತುಗಳು ಖರೀದಿ ಮಾಡಬೇಕು ಅಂದುಕೊಂಡ ಸಂತ್ರಸ್ತರು ಪರಿಹಾರ ಸಿಗದೇ ಪರದಾಡುತ್ತಿದ್ದಾರೆ. ಪರಿಹಾರ ಚೆಕ್ ನಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ನೊಂದ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕ್ಷೇತ್ರದ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್ ಕಾಟಾಚಾರಕ್ಕೆ ಬಂದು ಹೋಗುತ್ತಾರೆ. ಕಾರಿನಿಂದ ಇಳಿದು ಜನರ ಕಷ್ಟ ಆಲಿಸಲ್ಲ ಅನ್ನೋದು ಸ್ಥಳೀಯರ ಆರೋಪವಾಗಿದೆ. ವಾಸನ ಗ್ರಾಮದಲ್ಲಿ 480 ಮನೆಗಳಿದ್ದು, 2,500 ಕ್ಕೂ ಅಧಿಕ ಜನ ಸಂಖ್ಯೆಯಿದೆ. ಇನ್ನೂ 180 ಜನರಿಗೆ 10 ಸಾವಿರ ಪರಿಹಾರ ಚೆಕ್ ಬಂದಿಲ್ಲ ಎಂದು ಸಂತ್ರಸ್ತರು ಕಿಡಿಕಾರಿದ್ದಾರೆ. ರಾಜ್ಯ ಸರ್ಕಾರ ಎಲ್ಲವೂ ಜನರ ಕಣ್ಣೊರೆಸುವ ತಂತ್ರ ಅನುಸರಿಸುತ್ತದೆ. ಸಿ.ಎಂ ಯಡಿಯೂರಪ್ಪ ಮಾತ್ರ ಎಲ್ಲರಿಗೂ ಮೊದಲ ಹಂತದ ಪರಿಹಾರ ನೀಡಿದ್ದೇವೆ ಅಂತಾರೆ. ಆದರೆ ಇಲ್ಲಿ ಇನ್ನೂ ನೂರಾರು ಜನರು ಚೆಕ್ ನೀಡದ್ದಕ್ಕೆ ಕಣ್ಣೀರಿಡುತ್ತಿದ್ದಾರೆ. ಸಂಬಂಧಿಸಿದ ಗ್ರಾಮ ಪಂಚಾಯತ್ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ ಕೇಳಿದರೆ ನಿಮ್ಮ ಲಿಸ್ಟ್ ಕಳುಹಿಸಲಾಗಿದೆ ತಹಶೀಲ್ದಾರ್ ಕೇಳ್ರಿ ಅಂತಾರೆ. ಮೇಲಾಧಿಕಾರಿ ಕೇಳಿದರೆ, ನಿಮ್ಮ ಲೋಕಲ್ ಅಧಿಕಾರಿಗಳನ್ನ ಕೇಳ್ರಿ ಅಂತಾರೆ. ಹೀಗೆ ಒಬ್ಬರನ್ನೊಬ್ಬರು ಬೆರಳು ತೋರಿಸಿ ಸಾಗು ಹಾಕುತ್ತಿದ್ದಾರೆ. ಅಧಿಕಾರಿಗಳೇ ನಾವು ಬದುಕು ನಡೆಸುವುದಾದರೂ ಹೇಗೆ ಎಂದು ಸಂತ್ರಸ್ತರು ಕಿಡಿಕಾರಿದ್ದಾರೆ.

ಬಿದ್ದ ಮನೆಗಳ ಪರಿಹಾರ ನೀಡುವಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಕೆಲವರ ಸಂಪೂರ್ಣ ಮನೆ ಬಿದ್ರೂ “ಬಿ”-“ಸಿ” ಗ್ರೇಡ್ ಹಾಕಿದ್ದಾರೆ. ಅಲ್ಪಸ್ವಲ್ಪ ಬಿದ್ದ ಮನೆಗಳಿಗೆ “ಎ” ಅಂತ ನಮೂದನೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬರುತ್ತಿದೆ. ಅದೇನೇ ಇರಲಿ ಎಲ್ಲವನ್ನೂ ಕಳೆದುಕೊಂಡ ಸಂತ್ರಸ್ತರು ಮಾತ್ರ ನಮ್ಮ ಪರಿಹಾರ ಇವತ್ತು ಬಂದಿತ್ತು ನಾಳೆ ಬಂದಿತು ಎಂದು ಆಸೆ ಕಣ್ಣಲ್ಲಿ ಕಾಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *