ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar), ನಟ ಸುದೀಪ್ (Actor Sudeep) ಹಾಗೂ ಸಚಿವ ಶಾಸಕರ ದಂಡೇ ಭಾಗವಹಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಸ್ಪಲ್ಪದರಲ್ಲೇ ಭಾರೀ ಅನಾಹುತ ತಪ್ಪಿದೆ.

ಸಿಂಧನೂರಿನ ತಾಲೂಕು ಕ್ರೀಡಾಂಗಣದಲ್ಲಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಫೌಂಡೇಷನ್ ಆಯೋಜಿಸಿದ್ದ 151 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್ (Short circuit) ನಿಂದ ವೇದಿಕೆ ಬಳಿ ಬೆಂಕಿ ಹೊತ್ತಿಕೊಂಡಿದ್ದು ವೈಯರ್, ಸ್ಪೀಕರ್, ಬಟ್ಟೆಗಳಿಗೆ ಬೆಂಕಿ ಕಿಡಿ ತಾಕಿದೆ. ಡಿ.ಕೆ ಶಿವಕುಮಾರ್ ಹಾಗೂ ಗಣ್ಯರು ವೇದಿಕೆ ಬಳಿ ಇದ್ದಾಗಲೇ ಬೆಂಕಿ ಕಾಣಿಸಿಕೊಂಡಿತ್ತು.

ಅರಣ್ಯ ಸಚಿವ ಈಶ್ವರ ಖಂಡ್ರೆ ಮಾಧ್ಯಮಗಳೊಂದಿಗೆ ಮಾತನಾಡಲು ಆಗಮಿಸುತ್ತಿದ್ದಂತೆ ವೇದಿಕೆ ಬಳಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ. ಸ್ಥಳದಲ್ಲಿದ್ದ ಪೊಲೀಸ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಕೂಡಲೇ ಬೆಂಕಿ ನಂದಿಸಿದ್ದಾರೆ. ಯಾವುದೇ ಅನಾಹುತ ಸಂಭವಿಸಿಲ್ಲ, ಅಗ್ನಿಶಾಮಕ ದಳ ಅಲರ್ಟ್ ಆಗಿದ್ದರಿಂದ ಬೆಂಕಿ ಅವಘಡ ತಪ್ಪಿದೆ.

