ರಾತ್ರಿ ಜೆಡಿಎಸ್ ಶಾಸಕರ ಮನೆಗೆ ಹೋಗಿ ಚಿಕಿತ್ಸೆ ನೀಡದ ವೈದ್ಯೆಗೆ ವರ್ಗಾವಣೆ ಭಾಗ್ಯ!

Public TV
2 Min Read

– ಶಾಸಕ ಮಹದೇವ್‍ಗೆ ಚಿಕಿತ್ಸೆ ನೀಡದ್ದಕ್ಕೆ ಶಿಕ್ಷೆ
– ಸರ್ಕಾರದ ನಡೆಗೆ ಸಾರ್ವಜನಿಕರ ಆಕ್ರೋಶ
– ಪಿರಿಯಾಪಟ್ಟಣದ ಸರ್ಕಾರಿ ವೈದ್ಯೆ ಚಿತ್ರದುರ್ಗಕ್ಕೆ ವರ್ಗಾವಣೆ

ಮೈಸೂರು: ಶಾಸಕರಿಗೆ ಮನೆಗೆ ಹೋಗಿ ಚಿಕಿತ್ಸೆ ನೀಡಲು ಒಪ್ಪದ ಸರ್ಕಾರಿ ವೈದ್ಯೆಯನ್ನು ದೂರದ ಊರಿಗೆ ವರ್ಗಾವಣೆ ಮಾಡಲಾಗಿದೆ ಎನ್ನುವ ಗಂಭೀರ ಆರೋಪವೊಂದು ಕೇಳಿಬಂದಿದೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಸರ್ಕಾರಿ ಆಸ್ಪತ್ರೆ ವೈದ್ಯೆ ಡಾ. ವೀಣಾ ಸಿಂಗ್ ಅವರನ್ನು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ. ಇದನ್ನೂ ಓದಿ: ಕರೆದಾಕ್ಷಣ `ನೈಟ್ ಡ್ಯೂಟಿ’ಗೆ ಬಾರದ ವೈದ್ಯೆ ವಿರುದ್ಧ ಜೆಡಿಎಸ್ ಶಾಸಕ ದೂರು!

ಈ ಹಿಂದೆ ಪಿರಿಯಾಪಟ್ಟಣದ ಶಾಸಕ ಮಹದೇವ್, ರಾತ್ರಿ ವೇಳೆ ತಮ್ಮ ಮನೆಗೆ ಬಂದು ತಮಗೆ ಚಿಕಿತ್ಸೆ ನೀಡುವಂತೆ ಕೇಳಿದ್ದರು. ಆದರೆ ಡಾ. ವೀಣಾ ಸಿಂಗ್ ಶಾಸಕರ ಮನೆಗೆ ಹೋಗಿ ಚಿಕಿತ್ಸೆ ನೀಡಲು ಒಪ್ಪಲಿಲ್ಲ. ಈ ವಿಚಾರದಲ್ಲಿ ವೈದ್ಯೆ ಮತ್ತು ಶಾಸಕರ ನಡುವೆ ಜಟಾಪಟಿ ನಡೆದಿತ್ತು. ಈ ಕಾರಣಕ್ಕೆ ಶಾಸಕರು ತಮ್ಮ ಪ್ರಭಾವ ಬಳಸಿ ವೈದ್ಯೆಯನ್ನು ಮೈಸೂರು ಜಿಲ್ಲೆಯಿಂದ ಚಿತ್ರದುರ್ಗದ ಚಳ್ಳಕೆರೆ ತಾಲೂಕಿಗೆ ವರ್ಗಾವಣೆ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ವೈದ್ಯೆ ಡಾ. ವೀಣಾ ಸಿಂಗ್ ಅವರು ಪಿರಿಯಾಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಏಕೈಕ ಪ್ರಸೂತಿ ಮತ್ತು ಸ್ತ್ರೀರೋಗ ವೈದ್ಯೆ ಆಗಿದ್ದರು. ಅವರಿಗೆ ಸ್ಥಾನಕ್ಕೆ ಬೇರೆ ಯಾರನ್ನು ನೇಮಕ ಮಾಡದೇ ಏಕಾಏಕಿ ವರ್ಗಾವಣೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಜೆಡಿಎಸ್ ಶಾಸಕನೊಂದಿಗೆ ಕಿರಿಕ್- ಡಾ.ವೀಣಾಸಿಂಗ್ ಪಿರಿಯಾಪಟ್ಟಣದಿಂದ ಎತ್ತಂಗಡಿ?

ಶಾಸಕರ ನಡುವಿನ ಭಿನ್ನಾಭಿಪ್ರಾಯದಿಂದ ವೀಣಾ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿದೆ. ರಾಜ್ಯದಲ್ಲಿ ಈಗಲೇ ಹಲವು ಕಡೆಗಳಲ್ಲಿ ವೈದ್ಯರ ಕೊರತೆ ಇದೆ. ಸರ್ಕಾರ ಆಫರ್ ನೀಡಿದರೂ ವೈದ್ಯರು ಸರ್ಕಾರಿ ಕೆಲಸಕ್ಕೆ ಬರುತ್ತಿಲ್ಲ. ಹೀಗಿರುವಾಗ ಉತ್ತಮ ವೈದ್ಯೆ ಎಂದು ಹೆಸರು ಪಡೆದಿದ್ದ ವೀಣಾ ಅವರನ್ನು ವರ್ಗಾವಣೆ ಮಾಡಿದ್ದು ಎಷ್ಟು ಸರಿ ಎಂದು ಜನರು ಸರ್ಕಾರವನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

https://www.youtube.com/watch?time_continue=639&v=LsbzC-2HiOA

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
Share This Article
Leave a Comment

Leave a Reply

Your email address will not be published. Required fields are marked *