ಕಾಣೆಯಾಗಿದೆ ಸದಾ ಶ್ರೀಗಳ ಜೊತೆ ಓಡಾಡುತ್ತಿದ್ದ ನಾಯಿ!

Public TV
1 Min Read

ತುಮಕೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರನ್ನು ಮನುಷ್ಯ ಕುಲ ಮಾತ್ರವಲ್ಲದೇ ಮೂಕ ಪ್ರಾಣಿಗಳು ಕೂಡ ಹಚ್ಚಿಕೊಂಡಿತ್ತು. ಭೈರ ಹೆಸರಿನ ಶ್ವಾನ ಮಠದಲ್ಲಿ ಸದಾ ಶ್ರೀಗಳೊಂದಿಗೆ ಓಡಾಡುತ್ತಿತ್ತು. ಸಿದ್ದಗಂಗಾ ಸ್ವಾಮೀಜಿಗಳು ಲಿಂಗೈಕ್ಯರಾದ ಬಳಿಕ ಭೈರ ಕಾಣೆಯಾಗಿದ್ದಾನೆ.

ಇತ್ತೀಚಿಗೆ ಸ್ವಾಮೀಜಿ ಆಸ್ಪತ್ರೆಗೆ ದಾಖಲಾದಾಗ ಭೈರ ಶ್ರೀಗಳನ್ನು ಕಾಣದೇ ಅಳುತ್ತಾ ಊಳಿಡಲಾರಂಭಿಸಿತ್ತು. ಶ್ರೀಗಳು ಆಸ್ಪತ್ರೆಯಲ್ಲಿದ್ದಾಗಲೂ ಭೈರನ ಬಗ್ಗೆ ಕಿರಿಯ ಶ್ರೀಗಳಲ್ಲಿ ವಿಚಾರಿಸುತ್ತಿದ್ದರು. ಆಸ್ಪತ್ರೆಯಿಂದ ಮತ್ತೆ ಮಠಕ್ಕೆ ಬಂದಾಗ ಅವರನ್ನು ಕಾಣದೇ ಭೈರ ಶ್ರೀಗಳ ದೇಹಾಂತ್ಯಕ್ಕೂ ಮೂರು ದಿನಗಳ ಮುನ್ನವೇ ನೀರು ಆಹಾರ ತ್ಯಜಿಸಿತ್ತು ಎನ್ನುವ ವಿಚಾರ ತಿಳಿದು ಬಂದಿದೆ. ಇದನ್ನೂ ಓದಿ: ನಿಮಗೆ ದೇವರ ದರ್ಶನ ಆಗಿದ್ಯಾ – ಶ್ರೀಗಳು ನೀಡಿದ ಉತ್ತರಕ್ಕೆ ಅಚ್ಚರಿಗೊಂಡ ಡಾ. ರೇಲಾ

ಈ ಬಗ್ಗೆ ಸ್ಥಳೀಯರಾದ ಸೋಮನಾಥ್ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, “ಶ್ರೀಗಳು ಲಿಂಗೈಕ್ಯ ಆಗುವ ಮೂರು ದಿನ ಹಿಂದೆ ಭೈರ ನೀರು ಆಹಾರವನ್ನು ತ್ಯಜಿಸಿತ್ತು. ಶ್ರೀಗಳು ಲಿಂಗೈಕ್ಯರಾದ ದಿನದಿಂದ ಭೈರ ನಾಪತ್ತೆ ಆಗಿದ್ದಾನೆ. ಬಹುಶಃ ಈ ನಾಯಿ ಕೂಡ ಸಾವನ್ನಪ್ಪಿರುತ್ತದೆ. ಶ್ರೀಗಳು ಹೊರಗೆ ಹೋಗಿದ್ದಾಗ, ಭಕ್ತಾದಿಗಳಿಗೆ ದರ್ಶನ ನೀಡದಾಗ ಭೈರ ಶ್ರೀಗಳ ಜಾಗದಲ್ಲಿ ಹೋಗಿ ಅಲ್ಲಿ ಕುಳಿತು ಅಳುತ್ತಿತ್ತು ಎಂದು ಮಠದ ಸಿಬ್ಬಂದಿ ಹೇಳಿದ್ದರು. ಅಲ್ಲದೇ ಶ್ರೀಗಳು ಎಲ್ಲಾದರೂ ಪರಿಶೀಲನೆ ಮಾಡಲು ಹೋಗುವಾಗ ಭೈರ ಕೂಡ ಅವರ ಜೊತೆ ಹೋಗುತಿತ್ತು” ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *