ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆ ರದ್ದು

Public TV
2 Min Read

ಬೆಂಗಳೂರು: ಕೋವಿಡ್‌ 19 ನಿರ್ಬಂಧ ಇದ್ದರೂ ಸರ್ಕಾರದ ನಿರ್ಧಾರಕ್ಕೆ ಸಡ್ಡು ಹೊಡೆದ ಆರಂಭಿಸಿದ್ದ ಮೇಕೆದಾಟು ಪಾದಯಾತ್ರೆಯನ್ನು ಕಾಂಗ್ರೆಸ್‌ ನಾಯಕರು ಕೊನೆಗೊಳಿಸಿದ್ದಾರೆ.

ಸರ್ಕಾರದ ಆದೇಶ ಮತ್ತು ಹೈಕೋರ್ಟ್‌ ನೋಟಿಸ್‌ ನೀಡಿದ ಹಿನ್ನೆಲೆಯಲ್ಲಿ ಇಂದು ರಾಮನಗರ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಪಾದಯಾತ್ರೆಯನ್ನು ಕೊನೆಗೊಳಿಸುವ ಬಗ್ಗೆಯೇ ಹೆಚ್ಚಿನ ನಾಯಕರು ಒಲವು ವ್ಯಕ್ತಪಡಿಸಿದ್ದರಿಂದ ಇಂದಿಗೆ ಪಾದಯಾತ್ರೆ ಕೊನೆಯಾಗಿದೆ.  12 ದಿನಗಳ ಪಾದಯಾತ್ರೆಯನ್ನು 5 ದಿನಕ್ಕೆ ಮೊಟಕುಗೊಳಿಸಿದ್ದು, ಕೊರೊನಾ ಸೋಂಕು ಕಡಿಮೆಯಾದ ನಂತರ ರಾಮನಗರದಿಂದಲೇ ಮತ್ತೆ ಪಾದಯಾತ್ರೆಯನ್ನು ಪ್ರಾರಂಭಿಸಲು ನಾಯಕರು ನಿರ್ಧರಿಸಿದ್ದಾರೆ.

ಸಭೆಯಲ್ಲಿ ಏನಾಯ್ತು?:
ಹೇಗಿದ್ದರೂ ನ್ಯಾಯಾಲಯ ನಾಳೆ ಪಾದಯಾತ್ರೆ ರದ್ದು ಮಾಡುವ ಬಗ್ಗೆ ಸೂಚನೆ ನೀಡಲಿದೆ. ಆ ಕಾರಣಕ್ಕೆ ಸರ್ಕಾರ ಈಗ ನಿರ್ಬಂಧ ವಿಧಿಸಿದೆ. ನಾವು ಅದನ್ನು ಮೀರಿದರೆ ಕೋರ್ಟ್ ಅಸಮಾಧಾನ ಹೊರ ಹಾಕಿ ಕಟು ಪದಗಳಿಂದ ತರಾಟೆಗೆ ತೆಗೆದುಕೊಳ್ಳಬಹುದು.

ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡು ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸಿತು ಎನ್ನಿಸಿಕೊಳ್ಳುವುದು ಒಂದು ರೀತಿಯ ಹಿನ್ನಡೆ ಆದಂತೆ. ಅದೇ ಸರ್ಕಾರ ಪಾದಯಾತ್ರೆ ಮೇಲೆ ನಿರ್ಬಂಧ ಹೇರಿದ ಕಾರಣಕ್ಕೆ ಪಾದಯಾತ್ರೆ ಕೊನೆಯಾದರೆ ಪಕ್ಷಕ್ಕೆ ಇದರಿಂದ ಲಾಭ. ನಮ್ಮ ನೀರಿನ ಹೋರಾಟಕ್ಕೆ ಬಿಜೆಪಿ ತಡೆ ಹಾಕಿತು ಎಂದು ಬಿಂಬಿಸಿದರೆ ಲಾಭ ಹೆಚ್ಚು. ಇದನ್ನೂ ಓದಿ: ನಿಮ್ದು ದುರ್ಯೋಧನನ ರೀತಿ ಕೆಟ್ಟ ಹಠ: ಸಿದ್ದು, ಡಿಕೆಶಿಗೆ ಅಶೋಕ್ ಗುದ್ದು

ಇಂದೇ ಪಾದಯಾತ್ರೆಯನ್ನ ಕೊನೆಗೊಳಿಸಿ ಘೋಷಣೆ ಮಾಡೋಣ. ಕೊರೊನಾ ಕಡಿಮೆಯಾದ ನಂತರ ಇಲ್ಲಿಂದಲೇ ಪಾದಯಾತ್ರೆ ಮುಂದುವರಿಸೋಣ. ಈಗ ಪಾದಯಾತ್ರೆಯನ್ನು ಜನರ ಮತ್ತು ನಮ್ಮ ಆರೋಗ್ಯದ ದೃಷ್ಟಿಯಿಂದ ಕೈ ಬಿಡುವುದು ಸೂಕ್ತ ಎಂದು ಹಿರಿಯರ ಸಲಹೆ ನೀಡಿದ್ದರು. ಇದನ್ನೂ ಓದಿ: ಅನಿವಾರ್ಯತೆ ಬಂದ್ರೆ ಮೇಕೆದಾಟು ಪಾದಯಾತ್ರೆ ನಿಲ್ಲಿಸಿ: ಕೈ ಹೈಕಮಾಂಡ್‌ ಸೂಚನೆ

ಪ್ರತಿಭಟನೆ ಮುಂದುವರಿಸಬೇಕೇ? ಬೇಡವೇ ಎಂಬುದರ ಬಗ್ಗೆ ಕಾಂಗ್ರೆಸ್‌ನಲ್ಲೇ ಗೊಂದಲ ಇತ್ತು. ಕೆಲ ನಾಯಕರು ಕೋವಿಡ್‌ ಇರುವ ಕಾರಣ ಸ್ಥಗಿತ ಮಾಡುವುದು ಉತ್ತಮ ಎಂದು ಸಲಹೆ ನೀಡಿದರೆ ಕೆಲ ನಾಯಕರು ಮುಂದುವರಿಸುವುದು ಉತ್ತಮ ಎಂದಿದ್ದರು.

ರೈತರ ಹೋರಾಟದ ವಿಚಾರದಲ್ಲಿ ಪ್ರತಿಭಟಿಸುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಹೀಗಾಗಿ ಈ ವಿಚಾರವನ್ನು ಕೋರ್ಟ್‌ನಲ್ಲಿ ಪ್ರಸ್ತಾಪ ಮಾಡಿ ಪ್ರತಿಭಟನೆಯನ್ನು ಮುಂದುವರಿಸುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *