ಈ ಬದುಕು ಶಾಶ್ವತವಲ್ಲ, ನಾವು ಎಷ್ಟು ದಿನ ಇರ್ತೇವೆ ಅದು ಗೊತ್ತಿಲ್ಲ: ಸಿಎಂ ವೈರಾಗ್ಯದ ಮಾತು

Public TV
3 Min Read

ಹಾವೇರಿ: ಈ ಬದುಕು ಶಾಶ್ವತವಲ್ಲ. ನಾವು ಎಷ್ಟು ದಿನ ಇರ್ತೇವೆ ಅದು ಗೊತ್ತಿಲ್ಲ ಹೇಳಿ ಸಿಎಂ ಬಸವರಾಜ ಬೊಮ್ಮಾಯಿ ಭಾವುಕರಾದರು.

ಶಿಗ್ಗಾಂವಿ ಪಟ್ಟಣದ ಸಂತೆ ಮೈದಾನದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಪುತ್ಥಳಿ ಲೋಕಾರ್ಪಣೆ ಹಾಗೂ ಸಮುದಾಯ ಭವನದ ಅಡಿಗಲ್ಲು ಸಮಾರಂಭಕ್ಕೆ ಸಿಎಂ ಆಗಮಿಸಿದ್ದರು.

ಎರಡು ಪೀಠದ ಸ್ವಾಮೀಜಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ. ಇದು ಸಂತರ ನಾಡು, ಇಲ್ಲಿ ವೈಚಾರಿಕ ಕ್ರಾಂತಿಯನ್ನ ಮಾಡಿದ ಗುರುಗಳಿದ್ದಾರೆ. ಕನಕದಾಸರು, ಸಂತ ಶಿಶುನಾಳ ಶರೀಫರು ಇದ್ದ ತಾಲೂಕು. ಯಾವುದು ಶಾಶ್ವತವಲ್ಲ, ಈ ಬದುಕು ಶಾಶ್ವತವಲ್ಲ. ನಾವು ಎಷ್ಟು ದಿನ ಇರ್ತೇವೆ ಅದು ಗೊತ್ತಿಲ್ಲ. ಸ್ಥಾನಮಾನಗಳು ಶಾಶ್ವತವಲ್ಲ ಎಂದು ಹೇಳಿ ಭಾವುಕರಾದರು. ಇದನ್ನೂ ಓದಿ: ಸಾವರ್ಕರ್‌ರನ್ನು ಭಾರತದಲ್ಲಿ ಬಿಟ್ಟರೆ ನಾವು ದೇಶ ಬಿಡಬೇಕಾಗುತ್ತೆ ಅನ್ನೋದು ಬ್ರಿಟಿಷರಿಗೆ ಗೊತ್ತಿತ್ತು: ಬೊಮ್ಮಾಯಿ

ನಿಮ್ಮೆಲ್ಲರ ಆಶೀರ್ವಾದದಿಂದ ಈ ರಾಜ್ಯದ ಮುಖ್ಯಮಂತ್ರಿಯಾಗಿ ನಿಂತಿದ್ದೇನೆ. ಕ್ಷೇತ್ರದ ಹೊರಗಡೆ ಇದ್ದಾಗ ನಾನು ಸಿಎಂ, ಗೃಹ ಸಚಿವ. ಆದರೆ ಕ್ಷೇತ್ರದ ಒಳಗಡೆ ಬಂದಾಗ ನಾನು ಬಸವರಾಜ ಬೊಮ್ಮಾಯಿ ಆಗಿ ಉಳಿಯುತ್ತೇನೆ. ಬಸವರಾಜ ಬೊಮ್ಮಾಯಿ ಅನ್ನೋದು ಶಾಶ್ವತ. ಅದರ ಹಿಂದಿರೋ ಪದನಾಮಗಳು ಶಾಶ್ವತವಲ್ಲ. ನಾನು ನಿಮ್ಮೂರಿಗೆ ಬಂದಾಗ ರೊಟ್ಟಿ ತಿನ್ನಿಸಿದ್ದೀರಿ, ನವಣಿ ಅಕ್ಕಿ ಅನ್ನ ಮಾಡಿ ಹಾಕಿದ್ದೀರಿ. ನಾನೇನು ಕೆಲಸ ಮಾಡಿದ್ರೂ ಆ ಋಣ ತೀರಿಸಲು ಆಗೋದಿಲ್ಲ ಎಂದು ಭಾವುಕರಾದರು.

ಶಾಶ್ವತವಾಗಿ ನಿಮ್ಮ ಪ್ರೀತಿ ವಿಶ್ವಾಸ ಉಳಿಸಿಕೊಂಡು ಹೋಗಬೇಕೆಂಬ ಆಸೆಯಿದೆ. ನಾನು ಭಾವನಾತ್ಮಕವಾಗಿ ಮಾತನಾಡಬಾರ್ದು ಅಂದ್ಕೊಂಡಿದ್ದೆ. ನಿಮ್ಮನ್ನೆಲ್ಲ ನೋಡಿದಾಗ ಭಾವನೆಗಳು ಬರುತ್ತವೆ. ಎಲ್ಲ ಸಮುದಾಯಗಳ ಭಾವನೆಗೆ ಸ್ಪಂದಿಸೋದು ಸೇರಿದಂತೆ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ಸರ್ಕಾರಕ್ಕೆ ಸವಾಲುಗಳಿವೆ, ಅವುಗಳನ್ನ ಎದುರಿಸಿಕೊಂಡು ಹೋಗಬೇಕಿದೆ ಎಂದರು.

ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದು, ಯಾವುದೋ ಒಂದು ರಾಜ್ಯ ಪಡೆದುಕೊಳ್ಳಲು ಅಲ್ಲ. ವಿಸ್ತರಣೆಗಾಗಿ ಹೋರಾಟ ಮಾಡಲಿಲ್ಲ. ತನ್ನ ರಾಜ್ಯದ ಜನರ ರಕ್ಷಣೆ ಮತ್ತು ಸ್ವಾಭಿಮಾನಕ್ಕಾಗಿ ಹೋರಾಟ ಮಾಡಿದಳು. ಎಲ್ಲ ಸಮುದಾಯದವರನ್ನ ಸೇರಿಸಿಕೊಂಡು ಚೆನ್ನಮ್ಮ ರಾಜ್ಯವನ್ನ ಉಳಿಸೋ ಕೆಲಸ ಮಾಡಿದಳು. ಸಂಗೊಳ್ಳಿ ರಾಯಣ್ಣ ಸೆರೆಯಾದಾಗ ಕಿತ್ತೂರು ಚೆನ್ನಮ್ಮ ಕುಸಿದು ಹೋದಳು. ಅಲ್ಲಿಯವರೆಗೂ ಕಿತ್ತೂರು ಚೆನ್ನಮ್ಮ ಬ್ರಿಟಿಷರ ಯಾವುದಕ್ಕೂ ಕುಸಿದಿರಲಿಲ್ಲ. ಸಾಧಕರಿಗೆ ಸಾವು ಅಂತ್ಯವಲ್ಲ ಎಂದು ಸ್ಪೂರ್ತಿ ಮಾತುಗಳನ್ನು ಆಡಿದರು.

ಕಿತ್ತೂರು ಚೆನ್ನಮ್ಮ ಅಂದು ಯುದ್ಧ ಮಾಡಿದ್ದನ್ನ ಇಂದು ನಾವು ನೆನಪಿಸಿಕೊಳ್ತಿದ್ದೇವೆ. ಈಗಾಗಲೇ ಅಂಬೇಡ್ಕರ್ ಮೂರ್ತಿ ಕೂಡ ತಯಾರಾಗಿದೆ. ಏಪ್ರಿಲ್ ಒಳಗಾಗಿ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ ಮಾಡ್ತೇವೆ. ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನೂ ಪ್ರತಿಷ್ಠಾಪನೆ ಮಾಡ್ತೇವೆ. ಪಂಚಮಸಾಲಿ ಸಮಾಜಕ್ಕೆ 2ಎ ಕೊಡೋ ಬಗ್ಗೆ ಈಗಾಗಲೇ ಸಭೆಯಲ್ಲಿ ಹೇಳಿದ್ದೇನೆ. ಹಿಂದುಳಿದ ವರ್ಗದ ಆಯೋಗಕ್ಕೆ ಸಹಕಾರ ಕೊಡಿ. ಈ ನಾಡಿದ ಬಹುತೇಕ ಜನರಿಗಾಗಿ ಒಳ್ಳೆಯ ದಿನಗಳು, ನ್ಯಾಯ ಕೊಡಲು ನಿರ್ಣಯ ತೆಗೆದುಕೊಳ್ಳುತ್ತೇವೆ. ನನಗೆ ಶಿಗ್ಗಾಂವಿ-ಸವಣೂರು ಏತ ನೀರಾವರಿ ಯೋಜನೆಯ ಕೆರೆ ತುಂಬಿಸೋ ಕೆಲಸ ಮಾಡಬೇಕು ಅಂತಾ ಇತ್ತು. ಅದು ಪೂರ್ಣವಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಅಕ್ಕ-ಪಕ್ಕದಲ್ಲಿ ಓಮಿಕ್ರಾನ್ ಹಾವಳಿ ಇದ್ದರೂ ಕೊಡಗಿನಲ್ಲಿ ಪ್ರವಾಸಿಗರದ್ದೇ ದರ್ಬಾರ್

ನೂರಕ್ಕಿಂತ ಹೆಚ್ಚು ಕೆರೆಗಳು ತುಂಬಿವೆ. ನಿಮ್ಮ ಬೆಂಬಲ, ಆರ್ಶೀವಾದಕ್ಕೆ ಶ್ರೇಯಸ್ಸು ತರೋ ಕೆಲಸ ಮಾಡ್ತೇನೆ. ಎಲ್ಲರೂ ಬಹಳ ಚೆನ್ನಾಗಿ ಮಾತನಾಡಿದ್ದೀರಿ. ಇವತ್ತು ನನಗೆ ಬಹಳ ಸಂತೋಷ ಆಗಿದೆ. ಸಮುದಾಯದ ಅಭಿವೃದ್ಧಿ ಬಗ್ಗೆ ಇಬ್ಬರು ಪರಮಪೂಜ್ಯರು ಹೇಳಿದ ವಿಚಾರಗಳನ್ನ ಶಿರಸಾ ವಹಿಸಿ ಮಾಡ್ತೇನೆ. ಇವತ್ತಿನಿಂದ ಕಿತ್ತೂರು ಚೆನ್ನಮ್ಮ ನಾವು ಮಾಡೋದನ್ನ ನೋಡ್ತಿದ್ದಾಳೆ ಅನ್ನೋ ಅರಿವಿನಿಂದ ಕೆಲಸ ಮಾಡೋಣ. ಹರಜಾತ್ರೆ ಮತ್ತು ಕೂಡಲಸಂಗಮ ಸಂಕ್ರಮಣ ಕಾರ್ಯಕ್ರಮ ಎರಡಕ್ಕೂ ಕರೆದಿದ್ದಾರೆ. ಸಮಯ ನಿಗದಿ ಮಾಡಿಕೊಂಡು ಎರಡೂ ಕಡೆ ಬರೋ ಕೆಲಸವನ್ನ ಮಾಡ್ತೇನೆ. ಈ ಕ್ಷೇತ್ರದ ಅಭಿವೃದ್ಧಿಯಲ್ಲಿ ಯಾವುದೇ ಸಮುದಾಯ ಕಡೆಗಣಿಸದೆ ಎಲ್ಲರಿಗೂ ನ್ಯಾಯ ಕೊಡೋ ಕೆಲಸವನ್ನ ಮಾಡ್ತೇವೆ ಎಂದು ಭರವಸೆಯ ಮಾತುಗಳನ್ನು ಆಡಿದರು.

Share This Article
Leave a Comment

Leave a Reply

Your email address will not be published. Required fields are marked *