ಸೋತವರಿಂದಲೇ ಸಚಿವ ಸ್ಥಾನಕ್ಕಾಗಿ ಸಿಎಂಗೆ ಬ್ಲಾಕ್ ಮೇಲ್: ಶಿವಶಂಕರ ರೆಡ್ಡಿ

Public TV
1 Min Read

ಚಿಕ್ಕಬಳ್ಳಾಪುರ: ರಾಜ್ಯ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಸೋತವರು ಹಾಗೂ ಗೆದ್ದವರು ಎಲ್ಲರೂ ಸೇರಿ, ಮಂತ್ರಿ ಸ್ಥಾನಕ್ಕಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಅವರೆಲ್ಲರೂ ಬ್ಲಾಕ್ ಮೇಲ್ ಗಿರಾಕಿಗಳು, ಅವರು ಎಲ್ಲೆ ಹೋದರೂ ಬ್ಲಾಕ್ ಮೇಲ್ ಮಾಡೋದೆ ಅವರ ಕೆಲಸ ಎಂದು ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಆರೋಪಿಸಿದ್ದಾರೆ.

ಚಿಕ್ಕಬಳ್ಳಾಪುರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಮತದಾರರ ಕೃತಜ್ಞತಾ ಸಮಾವೇಶದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗಾಗಲೇ ಬಿಜೆಪಿಯಲ್ಲಿ ಬಹಳ ಜನ ಹಿರಿಯ ಶಾಸಕರಿದ್ದು, ಮಂತ್ರಿಯಾಗುವ ಅರ್ಹತೆಯಿದೆ. ಈ ಬೆಳವಣಿಗೆಯಿಂದ ಬಿಜೆಪಿ ಹಿರಿಯರು ಮೂಲೆ ಗುಂಪಾಗುವ ಲಕ್ಷಣಗಳಿವೆ. ಹೀಗಾಗಿ ಈ ಸರ್ಕಾರ ಬಹಳ ದಿನ ಆಡಳಿತ ನಡೆಸಲ್ಲ ಎಂದು ಭವಿಷ್ಯ ನುಡಿದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ 45 ಕೋಟಿ ರೂಪಾಯಿ ಅಲ್ಲಾ 60-70 ಕೋಟಿ ರೂಪಾಯಿ ವಹಿವಾಟು ಆಗಿದೆ. ಕ್ಷೇತ್ರದ ಬಡ ಜನತೆ ಹಣಕ್ಕೆ ಬಲಿಯಾಗಿದ್ದಾರೆ. ಇದರಿಂದ ಬಿಜೆಪಿ ಅಭ್ಯರ್ಥಿ ಬಹುಮತದಿಂದ ಗೆದ್ದಿದ್ದಾರೆ ಎಂದರು. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರಿದ್ದು, ಯಾರು ಎದೆಗುಂದಬೇಡಿ. ಚುನಾವಣಾ ತಂತ್ರಗಾರಿಕೆಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗಿರಬಹುದು ಎಂದು ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬುವ ಕಾಯಕ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *