7 ನಿಮಿಷದಲ್ಲಿ 6 ಕಿ.ಮೀ ಹಳ್ಳಿ ರಸ್ತೆಯನ್ನು ಕ್ರಮಿಸಿತ್ತು ಚಂದ್ರು ಕಾರು

Public TV
2 Min Read

– ತಂದೆ ರಮೇಶ್‌ರಿಂದ ದೂರು ದಾಖಲು
– ಇದು ರಾಜಕೀಯ ದ್ವೇಷದ ಕೊಲೆ ಎಂದ ರೇಣುಕಾಚಾರ್ಯ

ದಾವಣಗೆರೆ/ಬೆಂಗಳೂರು: ಶಾಸಕ ರೇಣುಕಾಚಾರ್ಯ (Renukacharya) ಸಹೋದರನ ಪುತ್ರ ಚಂದ್ರಶೇಖರ್ (Chandrashekar) ಸಾವಿನ ಕುರಿತಾಗಿ ಹಲವು ಅನುಮಾನಗಳು ಹಾಗೆಯೇ ಉಳಿದುಕೊಂಡಿವೆ. ಇದು ಸಹಜ ಸಾವಲ್ಲ, ಕೊಲೆ ಎಂದು ಶಾಸಕ ರೇಣುಕಾಚಾರ್ಯ ಮತ್ತು ಕುಟುಂಬಸ್ಥರು ಆರೋಪ ಮಾಡುತ್ತಲೇ ಇದ್ದಾರೆ.

ಚಂದ್ರು ತಂದೆ ರಮೇಶ್ ನೀಡಿರುವ ದೂರಿನಲ್ಲಿಯೂ ಇದೆ ಶಂಕೆ ವ್ಯಕ್ತವಾಗಿದೆ. ಕೊಲೆ, ಸಾಕ್ಷ್ಯನಾಶ, ವಾಹನ ಜಖಂ ಆರೋಪಗಳ ಅನ್ವಯವೇ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.

ಇದು ರಾಜಕೀಯ ದ್ವೇಷದ ಕೊಲೆ. ಕೇಸರಿ ಶಾಲು ಹಾಕಿಕೊಂಡು ಕ್ಷೇತ್ರದಲ್ಲಿ ಓಡಾಡ್ತಿದ್ದ ಚಂದ್ರು ಜನಪ್ರಿಯತೆ ಸಹಿಸದೇ ಅವರನ್ನು ಕೊಲೆ ಮಾಡಲಾಗಿದೆ ಎಂಬ ಆರೋಪಗಳನ್ನು ರೇಣುಕಾಚಾರ್ಯ ಮಾಡಿದ್ದಾರೆ. ಸಾಕಷ್ಟು ಅನುಮಾನಗಳು ಮೂಡಿರುವ ಹಿನ್ನೆಲೆಯಲ್ಲಿ ಸಮಗ್ರ ತನಿಖೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಲಹೆ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಮಗನಿಗೆ ಮಚ್ಚಿನಿಂದ ತಲೆ, ಬೆನ್ನಿಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ: ರೇಣುಕಾಚಾರ್ಯ

ಚಂದ್ರು ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕೂಡ ಒತ್ತಾಯಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಒಂದೆರಡು ದಿನಗಳಲ್ಲಿ ವರದಿ ಸಿಗುವ ಸಾಧ್ಯತೆಗಳಿವೆ. ನಂತರ ಚಂದ್ರು ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.  ಇದನ್ನೂ ಓದಿ: ಮಗ ಗೌರಿಗದ್ದೆಗೆ ಹೋಗಿದ್ದು ನನಗೆ ಗೊತ್ತಿರಲಿಲ್ಲ: ಮೃತ ಚಂದ್ರಶೇಖರ್ ತಾಯಿ

ದೂರಿನಲ್ಲಿ ಏನಿದೆ?
ಚಂದ್ರು ಮೃತದೇಹ ಹಿಂಬದಿಯ ಸೀಟಿನಲ್ಲಿ ಇತ್ತು. ಚಂದ್ರು ಕೈ-ಕಾಲುಗಳನ್ನು ಕಟ್ಟಿಹಾಕಲಾಗಿದ್ದು ಕಿವಿಗಳ ಮೇಲೆ ಗಾಯದ ಗುರುತುಗಳಿವೆ. ತಲೆಗೆ ಆಯುಧದಿಂದ ಹಲ್ಲೆ ಸಹ ಮಾಡಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ.

ಅನುಮಾನ ಏನು?
ನೀರಿಗೆ ಬಿದ್ದಾಗ ಕಾರು ಟಾಪ್ ಗೇರ್‌ನಲ್ಲಿತ್ತು. ಕಾರು 120-130 ವೇಗದಲ್ಲಿದ್ದಾಗ ಸ್ಪೀಡೋ ಮೀಟರ್ ಲಾಕ್ ಆಗಿದ್ದು ನಾಲ್ಕು ಜಾಗದಲ್ಲಿ ಗಾಡಿ ಉಜ್ಜಿಕೊಂಡು ಬಂದಿದೆ . ತಡೆಗೋಡೆಗೆ ಡಿಕ್ಕಿ ಹೊಡೆದು ಹಾರಿದ ರಭಸಕ್ಕೆ ಏರ್ ಬ್ಯಾಗ್ ಓಪನ್ ಆಗಿದೆ. ದುರಂತ ನಡೆದಾಗ ಹೊರಬರುವ ಪ್ರಯತ್ನ ಮಾಡಿದ್ದು ಒಳಗಡೆಯಿಂದ ಮುಂದಿನ ಗಾಜು ಒಡೆಯಲು ಯತ್ನಿಸಿರಬಹುದು. ಗಾಜು ಒಡೆದರೂ ನೀರು ಇದ್ದ ಕಾರಣ ಬರಲು ಸಾಧ್ಯವಾಗದೇ ಹಿಂದುಗಡೆ ದೇಹ ಬಂದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಇದನ್ನೂ ಓದಿ: ಹೊನ್ನಾಳಿ ಚಂದ್ರು ಸಾವಿನ ಸುತ್ತ 5 ಅನುಮಾನ

 

ಟೆಕ್ನಿಕಲ್‌ ಮಾಹಿತಿ ಏನು?
ದುರಂತಕ್ಕೆ ಮುನ್ನ ಕಾರು ಅತಿಯಾದ ವೇಗದಲ್ಲಿತ್ತು. 7 ನಿಮಿಷದಲ್ಲಿ 6 ಕಿ.ಮೀ ಹಳ್ಳಿ ರಸ್ತೆಯನ್ನು ಕಾರು ಕ್ರಮಿಸಿದ್ದು ಮಧ್ಯರಾತ್ರಿ 12:06 ತನಕ ವಾಟ್ಸಪ್‌ ಸಕ್ರಿಯವಾಗಿತ್ತು. ಇದಾದ 68 ಸೆಕೆಂಡ್ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿದೆ. ನೀರಿನ ಒಳಗೆ ಸ್ವಿಚ್ ಆಫ್ ಆದ ಹಿನ್ನೆಲೆಯಲ್ಲಿ ಸರಿಯಾದ ಲೊಕೇಷನ್ ಟ್ರೇಸ್ ಆಗಿಲ್ಲ ಎಂಬ ಮಾಹಿತಿ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *