ಗದಗ: ಉದ್ಯಮಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
35 ವರ್ಷದ ವಿಕಾಸ್ ಸಾಹುಕಾರ್ ಆತ್ಮಹತ್ಯೆ ಶರಣಾದ ಯುವ ಉದ್ಯಮಿ. ವಿಕಾಸ್ ನಗರದ ಪ್ರತಿಷ್ಠಿತ ‘ಕ್ಲರ್ಕ್ ಇನ್ ಹೋಟೆಲ್’ ಪಾಲುದಾರಾಗಿದ್ದರು. ಆದರೆ ಅದೇ ಹೋಟೆಲ್ ನ ಮೂರನೇ ಮಹಡಿ ರೂಂ ನಂಬರ್ 310 ರಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ವಿಕಾಸಗೆ 20 ದಿನಗಳಲ್ಲಿ ಮದುವೆ ನಿಶ್ಚಯವಾಗಿತ್ತು. ತಾನೆ ಮದುವೆ ಕಾರ್ಡ್ ಪ್ರಿಂಟ್ ಹಾಕಿಸಿ ಫ್ರೆಂಡ್ಸ್ ಗಳಿಗೆ ಆಹ್ವಾನ ನೀಡಿದ್ದರು. ಆದರೆ ಏಕಾಏಕಿ ನೇಣಿಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಮಾತ್ರ ಇದುವರೆಗೂ ತಿಳಿದು ಬಂದಿಲ್ಲ.
ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೂಮಿನಲ್ಲಿ ಡೆತ್ ನೋಟ್ ಸೇರಿದಂತೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಮರಣೋತ್ತರ ವರದಿ ನಂತರ ವಿಕಾಸ್ ಸಾವಿನ ಬಗ್ಗೆ ತಿಳಿಯಲಿದೆ. ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ಗದಗ ಎಸ್ಪಿ ಸಂತೋಷ್ ಬಾಬು ಹೇಳಿಕೆ ನೀಡಿದ್ದಾರೆ.