ಸತ್ತು 7 ದಿನಗಳಾದ್ರೂ ಗುರುವಿನ ಆತ್ಮ ಜೀವಂತ, ಅನುಯಾಯಿಗಳಿಂದ ಶವವಿಟ್ಟು ಪೂಜೆ!

Public TV
3 Min Read

ಕಾರವಾರ: ಧರ್ಮಗುರುಗಳು ಸಾವನ್ನಪ್ಪಿ ಏಳು ದಿನಗಳು ಕಳೆದ್ರೂ, ಅವರ ಆತ್ಮವಿನ್ನೂ ಜಾಗೃತವಾಗಿದೆ ಎಂಬ ಕಾರಣಕ್ಕೆ ಶವ ಸಂಸ್ಕಾರ ಮಾಡದೇ ಕೊಠಡಿಯೊಂದರಲ್ಲಿಟ್ಟು ಪೂಜೆ ಮಾಡಲಾಗ್ತಿತ್ತು.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಗೆಲುಕ್ಪಾ ಪಂಗಡದ ಪ್ರಮುಖ ನಾಯಕ ಗೆಶೆ ಲೋಬ್ಸಂಗ್ ತೆಂಜಿನ್ (90) ಅವರು ಇದೇ ತಿಂಗಳು 21ರಂದು ಸಾವನ್ನಪ್ಪಿದ್ದರು. ಆದರೆ ಅವರ ಆತ್ಮ ದೇಹದಲ್ಲಿ ಜಾಗೃತವಾಗಿದೆ ಎಂಬ ಕಾರಣಕ್ಕೆ ಇಂದು ಅಂತ್ಯಸಂಸ್ಕಾರ ಮಾಡಲಾಗಿದೆ.

ಇದೇ ತಿಂಗಳ 21 ರಂದು ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ವಯೋ ಸಹಜತೆಯಿಂದ ತೆಂಜಿನ್ ಮೃತಪಟ್ಟಿದ್ದರು. ನಂತರ ದೆಹಲಿಯಿಂದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಬಳಿ ಇರುವ ಟಿಬೇಟಿಯನ್ ನಿರಾಶ್ರಿತರ ಕಾಲೋನಿಗೆ ಮೃತದೇಹವನ್ನು ತರಲಾಗಿದ್ದು, ಧಾರ್ಮಿಕ ವಿಧಿ ಪೂರೈಸಲು ಅನುಯಾಯಿಗಳು ಮುಂದಾಗಿದ್ರು. ಆದ್ರೆ ಅವರ ದೇಹದಲ್ಲಿ ಆತ್ಮ ಜಾಗೃತವಾಗಿದೆ ಎಂದು ಹಿರಿಯ ಧರ್ಮ ಗುರುಗಳು ಹೇಳಿದ್ದರಿಂದ ಅಂತ್ಯಸಂಸ್ಕಾರವನ್ನು ಮುಂದೂಡಲಾಯ್ತು. ಇನ್ನು ಅವರ ದೇಹಕ್ಕೆ ಪೂಜೆ ಸಲ್ಲಿಸುವ ಮೂಲಕ ಆತ್ಮ ದೇಹದಿಂದ ಸಂಪೂರ್ಣ ಹೋದ ನಂತರವೇ ಶವ ಸಂಸ್ಕಾರದ ವಿಧಿಯನ್ನು ಪೂರೈಸಲು ತೀರ್ಮಾನಿಸಿ ಲಾಮಾ ಕ್ಯಾಂಪ್ ನ ನಂ.2 ಲೋಸಲಿಂಗ್ ಬೌದ್ಧ ಮಂದಿರದಲ್ಲಿ ಇಟ್ಟು ಪೂಜೆಗೈಯಲಾಗುತಿದ್ದು, ಇಂದು ದೇಹದಿಂದ ಆತ್ಮ ಹೊರಹೋಗಿರುವುದು ದೃಢಪಟ್ಟಿದ್ದರಿಂದಾಗಿ ಅಂತ್ಯಸಂಸ್ಕಾರದ ವಿಧಿ ಪೂರೈಸಲಾಯ್ತು ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ

ಆತ್ಮವಿರುವುದು ತಿಳಿಯುವುದು ಹೇಗೆ?: ಟಿಬೇಟಿಯನ್‍ರಲ್ಲಿ ಯಾವುದೇ ಧರ್ಮ ಗುರುಗಳು ನಿಧನ ಹೊಂದಿದ್ರೆ ಅವರ ಮೈ ಬೆಚ್ಚಗಿದ್ದರೇ ಆಗ ಆತ್ಮ ಜಾಗೃತವಾಗಿರುತ್ತೆ ಅನ್ನೂ ನಂಬಿಕೆ ಇದೆ. ಹೀಗಾಗಿ ಯಾವುದೇ ಧರ್ಮಗುರುಗಳು ನಿಧನ ಹೊಂದಿದಾಗ ಅದನ್ನು ದೃಢಪಡಿಸಿಕೊಳ್ಳಲಾಗುತ್ತೆ. ಹೀಗೆ ದೃಢಪಡಿಸಿಕೊಳ್ಳುವ ಸಂದರ್ಭದಲ್ಲಿ ಗೆಶೆ ಲೋಬ್ಸಂಗ್ ತೆಂಜಿನ್ ರವರ ದೇಹ ಬಿಸಿಯಾಗಿತ್ತು. ಆದ್ದರಿಂದ ಕಾಲೋನಿಯ ಒಂದು ಕೋಣೆಯಲ್ಲಿ ಅವರ ಶವವನ್ನ ಮಲಗಿದ ಸ್ಥಿತಿಯಲ್ಲಿಟ್ಟು ದಿನಂಪ್ರತಿ ಪೂಜೆ ಸಲ್ಲಿಸಲಾಗುತಿತ್ತು. ಇಂದು ಅವರ ದೇಹದಲ್ಲಿ ತಣ್ಣಗಿನ ಅನುಭವವಾಗಿದ್ದು ದೇಹದಿಂದ ಆತ್ಮ ಹೊರಹೋಗಿರುವುದನ್ನ ಟಿಬೇಟಿಯನ್ ಕಾಲೋನಿಯ ದಲಾಯಿ ಲಾಮಾ ಕಚೇರಿಯ ಸ್ಥಳೀಯ ಪ್ರತಿನಿಧಿ ಕರ್ಮಾರವರು ದೃಢಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಟಿಬೇಟಿಯನ್‍ನ ಗೆಲುಕ್ಪಾ ಪಂಗಡದ ಗೆಶೆ ಲೋಬ್ಸಂಗ್‍ರವರು ಈ ಹಿಂದೆ ಇಂದಿರಾ ಗಾಂಧಿ ಸರ್ಕಾರದ ಕಾಲದಲ್ಲಿ ಟಿಬೇಟ್‍ನಿಂದ ಆಶ್ರಯ ಬಯಸಿ ಭಾರತಕ್ಕೆ ಬಂದು ಮುಂಡಗೋಡಿನ ನಿರಾಶ್ರಿತರ ಕಾಲೋನಿಯಲ್ಲಿ ವಾಸವಾಗಿದ್ದರು. ಅಪ್ಪಟ ದಲಾಯಿ ಲಾಮಾ ರವರ ಅನುಯಾಯಿಯಾಗಿರುವ ಇವರು ದೇಶ ವಿದೇಶಗಳನ್ನು ಸುತ್ತಿ ಬೌದ್ಧ ಧರ್ಮ ಪ್ರಚಾರದ ಜೊತೆಗೆ ಟಿಬೇಟಿಯನ್ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಹೀಗಾಗಿ ಟಿಬೇಟಿಯನ್‍ಗಳ ಅಚ್ಚುಮೆಚ್ಚಿನ ನಾಯಕರಾಗಿ, ಧರ್ಮಗುರುಗಳಾಗಿ ಅನೇಕ ಅನುಯಾಯಿಗಳನ್ನ ಸಂಪಾದಿಸಿದ್ದರು.

ಸಾಂದರ್ಭಿಕ ಚಿತ್ರ

ಹಿಂದೆಯೂ ನಡೆದಿತ್ತು: ಇನ್ನು ಈ ರೀತಿಯ ಘಟನೆ ಇದೇ ಮೊದಲಲ್ಲ. ಎರಡು ವರ್ಷಗಳ ಹಿಂದೆ ಲಾಮಾ ಕ್ಯಾಂಪ್ ನಂ.2 ರ ಲೋಸಲಿಂಗ ಬೌದ್ಧ ಮಠದ ಪಂಡಿತರಾದ ತಿಸುರ ರಿನಪೋಜೆ ಲೋಬಸಾಂಗ್ ನ್ಯೀಮಾ ರವರು ಮೃತಪಟ್ಟು 18 ದಿನ ಕಳೆದಿದ್ದರೂ ಸಹ ಅವರ ಮೃತದೇಹವನ್ನು ಇಡಲಾಗಿತ್ತು. ಆದರೆ ದೇಹದಿಂದ ಮಾತ್ರ ಯಾವುದೇ ವಾಸನೆ ಬಂದಿರಲಿಲ್ಲ. ನಂತರ ಹಿಮಾಚಲ ಪ್ರದೇಶದ ವೈದ್ಯರ ತಂಡ ಆಗಮಿಸಿ ಪರೀಕ್ಷೆ ನೆಡೆಸಿ 21 ದಿನದ ನಂತರ ಅಂತ್ಯ ಸಂಸ್ಕಾರ ಮಾಡಲಾಯ್ತು. ಹೀಗೆ ಬಹಳಷ್ಟು ವರ್ಷಗಳಿಂದ ಈ ರೀತಿಯ ಧರ್ಮ ಗುರುಗಳು ಸತ್ತಾಗ ಮೂರು ತಿಂಗಳವರೆಗೂ ಶವವನ್ನ ಇಟ್ಟು ಪೂಜಿಸಿದ ಘಟನೆಗಳಿವೆ ಎಂದು ಟಿಬೇಟೆಯನ್ನರು ಹೇಳುತ್ತಾರೆ.

ಇನ್ನು ಈಗ ಮೃತಪಟ್ಟ ಧರ್ಮಗುರುಗಳ ಶವ ಕೆಡದೇ ಬಿಸಿಯಾಗಿದ್ದು ಮುಖದ ಮೇಲೆ ಬೆವರು ಕಾಣಿಸಿತಿತ್ತು. ಹೀಗಾಗಿ ಆತ್ಮ ದೇಹದಿಂದ ಹೊರಹೋಗಿಲ್ಲ ಎಂಬುದು ದೃಢಪಟ್ಟಿದ್ದು ಈ ಕಾರಣದಿಂದಾಗಿ ನಾವು ಅವರ ದೇಹವನ್ನು ಇರಿಸಿ ಏಳು ದಿನಗಳಿಂದ ಪೂಜೆಗೈದು ಇಂದು ಅಂತ್ಯಸಂಸ್ಕಾರ ನೆರವೇರಿಸಿದ್ದೇವೆ ಎಂದು ಪಬ್ಲಿಕ್ ಟಿ.ವಿಗೆ ಟಿಬೇಟಿಯನ್ ಕಾಲೋನಿಯ ಬೌದ್ಧ ಸನ್ಯಾಸಿ ತುಪ್ತಿನ್ ಸಿರಿಂಗ್ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Share This Article
Leave a Comment

Leave a Reply

Your email address will not be published. Required fields are marked *