ಮೋದಿಗೆ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ : ರಾಜ್ಯಪಾಲರಿಗೆ ಮನವಿ

Public TV
2 Min Read

ಬೆಂಗಳೂರು: ನರೇಂದ್ರ ಮೋದಿ ಅವರ ಬಗ್ಗೆ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಬಿಜೆಪಿ (BJP) ತೀವ್ರವಾಗಿ ಖಂಡಿಸಿದೆ. ಭುಟ್ಟೋ ಹೇಳಿಕೆ ಖಂಡಿಸಿ ಇಂದು ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ಆಯೋಜಿಸಲಾಗಿತ್ತು. ಪಾಕಿಸ್ತಾನದ ಸಚಿವನ ಹೇಳಿಕೆ ಮತ್ತು ಕಾಂಗ್ರೆಸ್ (Congress) ಪಕ್ಷದ ವರ್ತನೆಯನ್ನು ಖಂಡಿಸಿ ನಗರದ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಇಂದು ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಭುಟ್ಟೋ, ಡಿಕೆಶಿ, ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಘೋಷಣೆ ಮೊಳಗಿಸಲಾಯಿತು.

ಪಾಕಿಸ್ತಾನದ ವಿದೇಶಾಂಗ ಮಂತ್ರಿ ಬಿಲಾವಲ್ ಭುಟ್ಟೋ (Bilawal Bhutto) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬಗ್ಗೆ ಕೀಳುಮಟ್ಟದ ಹೇಳಿಕೆಯನ್ನು ನೀಡಿರುವುದನ್ನು ಖಂಡಿಸಿ ಯುವ ಮೋರ್ಚಾ ವತಿಯಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ನಂತರ ರಾಜ್ಯ ಭವನಕ್ಕೆ ಯುವ ಮೋರ್ಚಾ ತಂಡ ತೆರಳಿ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರನ್ನು ಭೇಟಿ ಮಾಡಿ ಕ್ರಮಕ್ಕೆ ಆಗ್ರಹಿಸಿ ಮನವಿಯನ್ನು ಸಲ್ಲಿಸಿದರು. ಇದನ್ನೂ ಓದಿ: ಪಾಕಿಸ್ತಾನಕ್ಕಿಂತ ಭಾರತದಲ್ಲಿ ಮುಸ್ಲಿಮರು ಸುರಕ್ಷಿತರಾಗಿದ್ದಾರೆ – ಪಾಕ್‌ ಸಚಿವರಿಗೆ ಮುಸ್ಲಿಂ ಧರ್ಮಗುರು ತಿರುಗೇಟು

ಈ ವೇಳೆ ಮಾತಾಡಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಎ.ಸಂದೀಪ್, ಇದು ಪಾಕಿಸ್ತಾನದ ನ್ಯೂನತೆಯನ್ನು ಬಹಿರಂಗಪಡಿಸಿದೆ. ಪಾಕಿಸ್ತಾನವು ಭಯೋತ್ಪಾದಕರ ತಾಣವಾಗಿದೆ. ಜಗತ್ತಿಗೇ ಮಾರ್ಗದರ್ಶನ ಮಾಡುತ್ತಿರುವ ಮೋದಿ ಅವರ ಬಗ್ಗೆ ಅಂಥ ದೇಶದ ಸಚಿವರು ಮಾತನಾಡಿ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ ಎಂದು ಟೀಕಿಸಿದರು.

ನಮ್ಮ ಸೈನಿಕರು ಚೀನಾವನ್ನು ಹಿಮ್ಮೆಟ್ಟಿಸುತ್ತಿದ್ದಾರೆ. ಇನ್ನೊಂದೆಡೆ ರಾಹುಲ್ ಗಾಂಧಿಯವರು ನಮ್ಮ ಸೈನಿಕರ ಶೌರ್ಯವನ್ನು ಪ್ರಶ್ನಿಸುವ ಮತ್ತು ಅಣಕಿಸುವ ಮಾದರಿಯಲ್ಲಿ ವ್ಯಂಗ್ಯವಾಡಿದ್ದಾರೆ. ಇದು ಖಂಡನೀಯ ಎಂದು ತಿಳಿಸಿದರು. ಇದನ್ನೂ ಓದಿ: ಬಿನ್ ಲಾಡೆನ್ ಸತ್ತಿದ್ದರೂ ಗುಜರಾತ್‌ನ ಕಟುಕ ಜೀವಂತವಾಗಿದ್ದಾನೆ: ಮೋದಿ ವಿರುದ್ಧ ಪಾಕ್ ವಿದೇಶಾಂಗ ಸಚಿವ ವಿವಾದಿತ ಹೇಳಿಕೆ

ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ಬೆಂಗಳೂರು ದಕ್ಷಿಣ ಜಿಲ್ಲೆ ಅಧ್ಯಕ್ಷ ಎನ್.ಆರ್.ರಮೇಶ್, ಬೆಂಗಳೂರು ಕೇಂದ್ರ ಜಿಲ್ಲೆ ಅಧ್ಯಕ್ಷ ಜಿ. ಮಂಜುನಾಥ್, ಬಿಜೆಪಿ- ಯುವ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *