ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರನ್ನ ಹುಡುಕಿ ಕೊಡಿ – ಬಿಜೆಪಿ ರಾಜ್ಯಾಧ್ಯಕ್ಷೆ ಮಂಜುಳಾ ಲೇವಡಿ

Public TV
2 Min Read

ಬೆಂಗಳೂರು: ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಮೇಲ್ಛಾವಣಿ ಕುಸಿದು ಅಂಗನವಾಡಿ (Anganavadi) ಮಕ್ಕಳಿಗೆ ಗಾಯವಾಗಿರೋ ಪ್ರಕರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವರು ರಾಜೀನಾಮೆ ನೀಡಬೇಕು ಅಂತ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಮಂಜುಳಾ (Manjula) ಆಗ್ರಹಿಸಿದ್ದಾರೆ‌.

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಚಿವರನ್ನ ಹುಡುಕಿಕೊಂಡಿ ಅಂತ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಂಗಾರಪೇಟೆಯಲ್ಲಿ ಅಂಗನವಾಡಿ ಮೇಲ್ಛಾವಣಿ ಬಿದ್ದು 7 ಮಕ್ಕಳು ಆಸ್ಪತ್ರೆಗೆ ಸೇರಿದ್ದಾರೆ. 4 ಮಕ್ಕಳಿಗೆ ಗಂಭೀರ ಗಾಯಗಳಾಗಿವೆ. ಇದೇನಾ ಮುಖ್ಯಮಂತ್ರಿಗಳ ಬಡವರ ಪರ ಕಾಳಜಿ ಕಿಡಿಕಾರಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಎಲ್ಲಿದ್ದಾರೆ? ಅವರನ್ನು ಹುಡುಕಿಕೊಡಿ ಮುಖ್ಯಮಂತ್ರಿಗಳೇ (Chief Minister) ಎಂದು ಕೇಳಿದ್ದಾರೆ.

ಇಲ್ಲಿಗೆ ಬಡವರ- ಕೂಲಿಕಾರರ ಮಕ್ಕಳು ಬರುತ್ತಾರೆ. ಅವರಿಗೆ ಯಾವ ರಕ್ಷಣೆ ಇದೆ? ಈ ಸರಕಾರವು ಯಾವ ನೈತಿಕತೆ ಮೇಲೆ ಸದಾ ವಿಪಕ್ಷವನ್ನು ಟೀಕೆ ಮಾಡುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ತಮ್ಮ ಮನೆ ಮತ್ತು ಕಚೇರಿಯಿಂದ ಹೊರಕ್ಕೆ ಬಂದು ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂದು ಗಮನಿಸಿ ಸರಿಪಡಿಸಲಿ. ಇಲ್ಲವಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಸಚಿನ್ ಆತ್ಮಹತ್ಯೆ ಕೇಸ್ – ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಬಿಜೆಪಿ ನಾಯಕರು ಮುತ್ತಿಗೆಗೆ ಯತ್ನ

ರಾಜ್ಯದಲ್ಲಿ ಬಾಣಂತಿಯರ ಸಾವು ನಿತ್ಯೋತ್ಸವವಾಗಿ ರಾಜ್ಯ ತಲ್ಲಣಗೊಂಡ ಸಂದರ್ಭದಲ್ಲೂ ಕೂಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಮನೆ ಮತ್ತು ಕಚೇರಿಯಿಂದ ಹೊರಗೆ ಬಂದು ಕೆಲಸ ಮಾಡುತ್ತಿಲ್ಲ. ಕಳೆದ ಒಂದೂವರೆ ವರ್ಷದಿಂದ ಅವರು ಸಚಿವೆಯಾಗಿದ್ದಾರೆ. ಇದೇನಾ ಈ ಸರ್ಕಾರ ಮಹಿಳೆಯರಿಗೆ ಕೊಡುವ ಗೌರವ ಮತ್ತು ನ್ಯಾಯ ಅಂತ ಕಿಡಿಕಾರಿದರು. ಇದನ್ನೂ ಓದಿ: ಬೆಂಬಲ ಬೆಲೆಗಿಂತಲೂ ಕಡಿಮೆ ದರಕ್ಕೆ ದಲ್ಲಾಳಿಗಳಿಗೆ ಭತ್ತ ಮಾರಾಟ – ಖರೀದಿ ಕೇಂದ್ರ ತೆರೆಯದ್ದಕ್ಕೆ ಅಶೋಕ್‌ ಆಕ್ರೋಶ

ಗೃಹ ಸಚಿವರ ತವರು ಜಿಲ್ಲೆ ಮಧುಗಿರಿಯಲ್ಲಿ ಡಿವೈಎಸ್ಪಿಯೊಬ್ಬರು ಠಾಣೆಗೆ ಬಂದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವನ್ನು ಠಾಣೆಯಲ್ಲೇ ಮಾಡಿದ್ದಾರೆ. ಇದು ರಾಜ್ಯದಲ್ಲಿ ಮಹಿಳೆಯರಿಗೆ ಪೊಲೀಸ್ ಠಾಣೆಯಲ್ಲೇ ರಕ್ಷಣೆ ಇಲ್ಲ ಎಂಬುದನ್ನು ಸಾಬೀತುಪಡಿಸಿದೆ. ಗೃಹ ಇಲಾಖೆಯಲ್ಲಿ ಹೊಕ್ಕಿರುವ ಹೆಗ್ಗಣಗಳನ್ನು ಹೊರಹಾಕಿ ಪೊಲೀಸ್ ಇಲಾಖೆಗೆ ಬರುವ ಮತ್ತು ರಾಜ್ಯದಲ್ಲಿ ಬದುಕುವ ಮಹಿಳೆಯರಿಗೆ ಈ ಸರ್ಕಾರ, ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಸುರಕ್ಷತೆ ಕೊಡಬೇಕೆಂದು ಅವರು ಆಗ್ರಹಿಸಿದರು. ಇದನ್ನೂ ಓದಿ: ಪ್ರೀತಿಸಿದ ಯುವತಿ-ಕುಟುಂಬಸ್ಥರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ, ರೈಲಿಗೆ ತಲೆಕೊಟ್ಟು ಭಗ್ನ ಪ್ರೇಮಿ ಆತ್ಮಹತ್ಯೆ

Share This Article