ಮಂಗಳೂರು: ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿ ರಚನಾ ಆತ್ಮಹತ್ಯೆ ಪ್ರಕರಣ ಹೆತ್ತವರಲ್ಲಿ ಅನುಮಾನ ಮೂಡಿಸಿದೆ.
ಗುರುವಾರ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಚಿತ್ರದುರ್ಗ ಮೂಲದ ರಚನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಕಾಲೇಜು ತಿಳಿಸಿತ್ತು. ಹಾಸ್ಟೆಲ್ ಐದನೇ ಮಹಡಿಗೆ ತೆರಳಿ ಬ್ಯಾಗ್, ನೀರಿನ ಬಾಟಲಿ, ಚಪ್ಪಲಿಯನ್ನು ಅಲ್ಲೇ ಬಿಟ್ಟು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಾಲೇಜು ರಚನಾ ಪೋಷಕರಿಗೆ ತಿಳಿಸಿತ್ತು.
ರಚನಾ ತಂದೆ ಮಂಜುನಾಥ್ ಹೇಳಿದ್ದು ಹೇಗೆ:
ನಾವು ಮೂಲತಃ ಚಿತ್ರದುರ್ಗದವರಾಗಿದ್ದು, ರಚನಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಪ್ರಾಂಶುಪಾಲರು ಕರೆ ಮಾಡಿ ತಿಳಿಸಿದ್ದರು. ನಮ್ಮ ಮಗಳನ್ನು ಕಳೆದ ವರ್ಷದಿಂದ ಈ ಸಂಸ್ಥೆಯಲ್ಲಿ ಓದಲು ಬಿಟ್ಟಿದ್ದೇವು. ಬೆಳಗ್ಗೆ ನಾನು ಕೆಲಸಕ್ಕೆ ಹೋಗಲು ತಯಾರಾಗಿದ್ದೆ. ಆಗ ಪ್ರಾಂಶುಪಾಲರು ಕರೆ ಮಾಡಿ ನಿಮ್ಮ ಮಗಳು 5ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ನಿಮ್ಮ ಮಗಳ ಸ್ಥಿತಿ ತುಂಬಾನೇ ಚಿಂತಾಜನಕವಾಗಿದೆ ಎಂದು ಅವರು ತಿಳಿಸಿದ್ದರು.
ವಿಷಯ ತಿಳಿದ ತಕ್ಷಣ ನಾವು ಕೂಡಲೇ ಚಿತ್ರದುರ್ಗದಿಂದ ಹೊರಟೆವು. ಆಗ ಪ್ರಾಂಶುಪಾಲರು ಮತ್ತೆ ಕರೆ ಮಾಡಿ ನಿಮ್ಮ ಮಗಳಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಎಜೆ ಆಸ್ಪತ್ರೆಗೆ ದಾಖಲಿಸುತ್ತಿದ್ದೇವೆ ಹಾಗೂ ವೆಂಟಿಲೇಶನ್ ನಲ್ಲಿ ಹಾಕಿದ್ದಾರೆ ಎಂದು ತಿಳಿಸಿದ್ದರು. ನಂತರ ಮತ್ತೆ ಕರೆ ಮಾಡಿ ನಿಮ್ಮ ಮಗಳು ಮೃತಪಟ್ಟಿದ್ದಾರೆ ಎಂದು ಹೇಳಿದ್ದರು.
ಕಾಲೇಜಿಗೆ ಭೇಟಿ ನೀಡಿದ ಬಳಿಕ ನಾನು ಪೊಲೀಸರ ಜೊತೆಗೆ ರಚನಾ ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ಭೇಟಿ ನೀಡಿದೆ. ಆಕೆ ಬಿದ್ದಿರುವ ಜಾಗ ನೋಡಿ ನಾನು ಆಶ್ಚರ್ಯಪಟ್ಟೆ. ಆಕೆ ಅಲ್ಲಿಂದ ಹೇಗೆ ಬಿದ್ದಳೋ ಗೊತ್ತಿಲ್ಲ. ಆತ್ಮಹತ್ಯೆ ಮಾಡಿಕೊಂಡ ಸ್ಥಳದ ಪಕ್ಕದಲ್ಲಿ ಚಪ್ಪಲಿವಿತ್ತು. ಡೆಸ್ಕ್ ಮೇಲೆ ಬ್ಯಾಗ್, ಊಟದ ತಟ್ಟೆ, ನೀರಿನ ಬಾಟಲಿ ಎಲ್ಲ ಇತ್ತು. ಇದನ್ನು ನೋಡಿದ್ದರೆ ಆಕೆ ಆತ್ಮಹತ್ಯೆಗೆ ಯತ್ನಿಸಿಲ್ಲ ಎನ್ನುವುದು ತಿಳಿಯುತ್ತದೆ.
ರಚನಾ 5 ಅಂತಸ್ತಿನಿಂದ ಬಿದ್ದಿದ್ದರೆ ಆಕೆಯ ದೇಹದ ಮೇಲೆ ಗಾಯವಾಗಬೇಕಿತ್ತು. ಇಲ್ಲವೆಂದರೆ ದೇಹದ ಮೂಳೆ ಮುರಿದು, ಊದಿಕೊಳ್ಳುಬೇಕಿತ್ತು. ಆದರೆ ಇಲ್ಲಿ ನೋಡಿದ್ದರೆ ರಕ್ತ ಬರುವಂತಹ ಗಾಯಗಳು ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಇದು ನಮಗೆ ಅನುಮಾನ ಹುಟ್ಟಿಸಿದೆ. ಜೊತೆಗೆ ಡೆತ್ ನೋಟನ್ನು ಆಕೆ ಬರೆದಿಲ್ಲ. ಡೆತ್ ನೋಟ್ ನಲ್ಲಿರುವುದು ಆಕೆಯ ಕೈಬರಹ ಅಲ್ಲ. ರಚನಾ ಸಾವಿನ ಹಿಂದೆ ಅನುಮಾನವಿದ್ದು, ಆಕೆ ಆತ್ಮಹತ್ಯೆಗೈಯಲು ಸಾಧ್ಯವಿಲ್ಲ. ಇದನ್ನೂ ಓದಿ: ಆಳ್ವಾಸ್ ಕಾಲೇಜಿನ 5ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ