ನಿತ್ಯಾನಂದನ ಆಸ್ತಿ ವಿವರ ಸಲ್ಲಿಕೆಗೆ ಕೋರ್ಟ್ ಸೂಚನೆ

Public TV
1 Min Read

ರಾಮನಗರ: ನ್ಯಾಯಾಲಯದ ವಿಚಾರಣೆಗೆ ಪದೇ ಪದೇ ಗೈರಾಗುತ್ತಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಹಾಗೂ ಶೀಲಂ ರೆಡ್ಡಿ ಆಸ್ತಿ ಮುಟ್ಟುಗೋಲಿಗೆ ರಾಮನಗರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮುಂದಾಗಿದ್ದು, ಆಸ್ತಿ ವಿವರ ಸಲ್ಲಿಸುವಂತೆ ಸಿಓಡಿ ಅಧಿಕಾರಿಗಳಿಗೆ ನ್ಯಾಯಾಲಯ ಆದೇಶಿಸಿದೆ.

ವಿವಾದಿತ ಸ್ವಾಮೀಜಿ ಬಿಡದಿಯ ನಿತ್ಯಾನಂದನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ನಿತ್ಯಾನಂದ ಹಾಗೂ ಆತನ ಹಿಂಬಾಲಕ ಗೋಪಾಲ ಶೀಲಂ ರೆಡ್ಡಿ ಅವರ ಇಡೀ ಆಸ್ತಿ ವಿವರಗಳನ್ನು ಸಲ್ಲಿಸುವಂತೆ ಸಿಒಡಿ ಅಧಿಕಾರಿಗಳಿಗೆ ರಾಮನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ಆದೇಶಿಸಿದೆ.

ಅತ್ಯಾಚಾರ ಹಾಗೂ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿತ್ಯಾನಂದನ ವಿರುದ್ಧ ಈಗಾಗಲೇ ಎಂಡ್ ಡೇಟೆಡ್ ವಾರೆಂಟ್ ಜಾರಿಯಾಗಿದೆ. ಅನೇಕ ಬಾರಿ ವಿಚಾರಣೆಗೆ ಸಹ ಗೈರಾಗಿದ ಹಿನ್ನೆಲೆಯಲ್ಲಿ ನಿತ್ಯಾನಂದ ಹಾಗೂ ಗೋಪಾಲ ಶೀಲಂ ರೆಡ್ಡಿಯ ಆಸ್ತಿ ಮುಟ್ಟುಗೊಲು ಹಾಕಿಕೊಳ್ಳಲು ನ್ಯಾಯಾಲಯ ಮುಂದಾಗಿದೆ. ಹೀಗಾಗಿ ಈ ಇಬ್ಬರು ಆರೋಪಿಗಳ ಆಸ್ತಿ ವಿವರ ಸಲ್ಲಿಸುವಂತೆ ತನಿಖಾಕಾರಿಗಳಿಗೆ 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಿದ್ದಲಿಂಗಪ್ರಭು ಅವರು ಸೂಚಿಸಿದ್ದಾರೆ.

ಪ್ರಕರಣದ 2ನೇ ಆರೋಪಿಯಾದ ಗೋಪಾಲ ಶೀಲಂ ರೆಡ್ಡಿ ವಿರುದ್ಧವೂ ಜಾಮೀನು ರಹಿತ ವಾರೆಂಟ್ ಜಾರಿಯಾಗಿರುವುದರಿಂದ ಈತನಿಗಾಗಿಯು ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ನಿತ್ಯಾನಂದನ ವಿಚಾರಣೆಯನ್ನು ಮಾರ್ಚ್ 23ಕ್ಕೆ ಮುಂದೂಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *