ಏರ್ ಇಂಡಿಯಾದ ಬಿಸಿನೆಸ್ ಕ್ಲಾಸ್ ನಲ್ಲಿ ತಿಗಣೆ ಕಾಟ!

Public TV
1 Min Read

ಮುಂಬೈ: ತಿಗಣೆಗಳ ಕಾಟದಿಂದಾಗಿ ಬೇಸತ್ತು ಹೋದ ಏರ್ ಇಂಡಿಯಾ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ತಿಗಣೆ ಕಚ್ಚಿಸಿಕೊಂಡಿರುವ ಫೋಟೋಗಳನ್ನು ಪ್ರಕಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೌಮ್ಯ ಶೆಟ್ಟಿ ಎಂಬ ಪ್ರಯಾಣಿಕರು ತನ್ನ ಮೂವರು ಮಕ್ಕಳೊಂದಿಗೆ ಅಮೆರಿಕದಿಂದ ಮುಂಬೈಗೆ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣ ಬೆಳೆಸಿದ್ದರು. ಈ ಪ್ರಯಾಣದಲ್ಲಿ ಅವರು ಎದುರಿಸಿದ ತಿಗಣೆ ಕಾಟವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ನನ್ನ ಪುಟ್ಟ ಮಕ್ಕಳಿಗೆ ಆರಾಮದಾಯಕವಾಗಿರುತ್ತದೆ ಎಂದು ಅವರನ್ನು ಬಿಸಿನೆಸ್ ಕ್ಲಾಸ್ ನಲ್ಲಿ ಕರೆದೊಯ್ಯಲು ನಿಶ್ಚಯಿಸಿದೆ. ಆದರೆ ಏರ್ ಇಂಡಿಯಾ ಇಷ್ಟು ನೋವಿನ ಪ್ರಯಾಣ ನೀಡುತ್ತದೆ ಎಂದು ಊಹಿಸಿರಲಿಲ್ಲ. ತಿಗಣೆಗಳು ನಮ್ಮ ಕೈ, ಕಾಲು, ಕುತ್ತಿಗೆ ಹಾಗೂ ದೇಹದ ಅನೇಕ ಭಾಗಗಳಲ್ಲಿ ಕಚ್ಚಿ ಗಾಯಗೊಳಿಸಿವೆ ಎಂದು ದೂರಿದ್ದಾರೆ.

ವಿಮಾನದಲ್ಲಿರುವಾಗಲೇ ತಿಗಣೆ ಸಮಸ್ಯೆ ಬಗ್ಗೆ ಸಿಬ್ಬಂದಿಗೆ ಹೇಳಿದರೂ, ಅದೇ ಸೀಟ್ ನಲ್ಲೇ ಮಲಗುವಂತೆ ಸೂಚಿಸಿದ್ದರು. ಇನ್ನೇನು ಮುಂಬೈಗೆ ಬಂದಿಳಿಯಬೇಕು ಎನ್ನುವಾಗ ಮಾತ್ರ ಸೀಟ್ ಬದಲಾವಣೆ ಮಾಡಿಕೊಟ್ಟರು ಎಂದು ಆರೋಪಿಸಿದ್ದಾರೆ.

ಏರ್ ಇಂಡಿಯಾ ಬಿಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸಿದ ಮತ್ತೊಬ್ಬ ಪ್ರಯಾಣಿಕರು ತಿಗಣೆ ಕಾಟದ ಬಗ್ಗೆ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರವೀಣ್ ಟಾನ್ಸೆಕರ್ ಎಂಬವರು ಟ್ವೀಟ್ ನಲ್ಲಿ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರನ್ನು ಟ್ಯಾಗ್ ಮಾಡಿ, ಈಗಷ್ಟೇ ನನ್ನ ಕುಟುಂಬದ ಜತೆ ನ್ಯೂಯಾರ್ಕ್ ನಿಂದ ಏರ್ ಇಂಡಿಯಾ 144 ಬಿಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣ ಮುಗಿಸಿದೆ. ನಮ್ಮ ಎಲ್ಲಾ ಸೀಟುಗಳು ತಿಗಣೆಗಳಿಂದ ಮುತ್ತಿಕೊಂಡಿದ್ದವು. ನಾನು ರೈಲಿನಲ್ಲಿ ತಿಗಣೆಗಳಿರುವುದನ್ನು ಕೇಳಿದ್ದೆನೆ. ಆದರೆ ಸರ್, ನಮ್ಮ ಮಹಾರಾಜ (ಬಿಸಿನೆಸ್) ಕ್ಲಾಸ್ ನಲ್ಲಿಯೂ ತಿಗಣೆಯಿರುವುದು ನೋಡಿ ನನಗೆ ಆಶ್ಚರ್ಯವಾಯಿತು ಎಂದು ಬರೆದು ಅಸಮಾಧಾನವನ್ನು ಹೊರಹಾಕಿದ್ದಾರೆ.

ಪ್ರವೀಣ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ, ತೊಂದರೆಯಿಂದಾಗಿ ಕ್ಷಮೆಯಿರಲಿ, ಮಾಹಿತಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಈ ತಪ್ಪನ್ನು ಸರಿಪಡಿಸಲಾಗುತ್ತದೆ ಎಂದು ರೀ ಟ್ವೀಟ್ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *