ಬೀದರ್‌ನಲ್ಲಿ ATM ಹಣ ದರೋಡೆ – ಮೃತ ಸಿಬ್ಬಂದಿ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಣೆ

Public TV
3 Min Read

– ಸಮಾಜ ಕಲ್ಯಾಣ ಇಲಾಖೆಯಿಂದ 8 ಲಕ್ಷ ರೂ. ಪರಿಹಾರ
– ಮೃತನ ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ಭರವಸೆ

ಬೀದರ್: ಹಾಡಹಗಲೇ ಬೀದರ್‌ನಲ್ಲಿ ಬ್ಯಾಂಕ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ 83 ಲಕ್ಷ ರೂ. ಹಣ ದೋಚಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಸಿಬ್ಬಂದಿಯ ಕುಟುಂಬಕ್ಕೆ ಸರ್ಕಾರ ವಿಶೇಷ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ಈ ಬೆನ್ನಲ್ಲೇ ಸಮಾಜಕಲ್ಯಾಣ ಇಲಾಖೆಯು ಪ್ರತ್ಯೇಕವಾಗಿ 8 ಲಕ್ಷ ರೂ. ಪರಿಹಾರ ಘೋಷಿಸಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರಿಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈಶ್ವರ್ ಖಂಡ್ರೆಗೆ ಎಡಿಜಿಪಿ ಹರಿಶೇಖರನ್, ಸಚಿವ ರಹೀಂ ಖಾನ್ ಸೇರಿದಂತೆ ಡಿಐಜಿ ಸಾಥ್ ನೀಡಿದರು. ಬಳಿಕ ಗುಂಡೇಟಿಗೆ ಬಲಿಯಾದ ಸಿಬ್ಬಂದಿ ಗಿರಿ ವೆಂಕಟೇಶ್ ಮನೆಗೆ ಭೇಟಿ ನೀಡಿದ ಅವರು, ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ವೇಳೆ ಕುಟುಂಬಸ್ಥರು ಈಶ್ವರ್ ಖಂಡ್ರೆ ಮುಂದೆ ನ್ಯಾಯಕ್ಕಾಗಿ ಕಣ್ಣೀರು ಹಾಕಿದರು. ಖಂಡ್ರೆ ಮುಂದೆ ಮಗನನ್ನು ನೆನೆದು ತಾಯಿ ಭಾವುಕರಾದರು. ಇದನ್ನೂ ಓದಿ: ವಿಜಯಪುರದಲ್ಲಿ ಮುಸುಕುಧಾರಿ ಗ್ಯಾಂಗ್‌ ಅಟ್ಟಹಾಸ – ದರೋಡೆಕೋರರ ಬೆನ್ನತ್ತಿ ಗುಂಡಿಟ್ಟ ಖಾಕಿ ಪಡೆ

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಖಂಡ್ರೆ, ಬೀದರ್‌ನಲ್ಲಿ ನಡೆದ ಘಟನೆ ಅತ್ಯಂತ ಆತಂಕಕಾರಿ ಪ್ರಕರಣ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಮಾಹಿತಿ ಸಿಕ್ಕ ತಕ್ಷಣ, ಡಿಐಜಿ, ಎಡಿಜಿಪಿ, ಗೃಹ ಸಚಿವರ ಗಮನಕ್ಕೆ ತಂದಿದ್ದೇನೆ. ಗಾಯಾಳು ಶಿವಕುಮಾರ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೇವೆ. ಸರ್ಕಾರ ಚಿಕಿತ್ಸೆಯ ಖರ್ಚು ವೆಚ್ಚ ಭರಿಸುತ್ತದೆ. ಯುವ ಜೀವ ಕಳೆದುಕೊಂಡಿದ್ದು ನೋವು ತಂದಿದೆ. ಖದೀಮರು 83 ಲಕ್ಷ ರೂ. ದೋಚಿದ್ದಾರೆ. ಪೊಲೀಸರ ತಂಡ ಹೈದರಾಬಾದ್ ಸೇರಿ ಬೇರೆಬೇರೆ ರಾಜ್ಯಕ್ಕೆ ತೆರಳಿದ್ದಾರೆ. ಅವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಇದನ್ನೂ ಓದಿ: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು ಅರಾಜಕತೆ ಉಂಟಾಗಿರೋದನ್ನ ಸಾಕ್ಷೀಕರಿಸುತ್ತಿದೆ: ವಿಜಯೇಂದ್ರ ಕಿಡಿ

ಇಂತಹ ಘಟನೆ ಬಿಹಾರದಲ್ಲೇ ಆದ್ರೂ, ಬೀದರ್‌ನಲ್ಲೇ ಆದ್ರೂ ಖಂಡಿಸುತ್ತೇನೆ. ಐಜಿ ಇಲ್ಲಿಯೇ ಇದ್ದಾರೆ, ಅವರೊಂದಿಗೆ ಚರ್ಚಿಸಿದ್ದೇನೆ. ತನಿಖೆಯಲ್ಲಿ ಯಾರ ವೈಫಲ್ಯ ಇದೆ ಎಂಬುವುದು ಗೊತ್ತಾಗುತ್ತದೆ. ದುಷ್ಕರ್ಮಿಗಳು ಪ್ರೊಫೆಷನಲ್ ದರೋಡೆಕೋರರು ಅಂತಾ ಅನಿಸುತ್ತೆ. ಸೆಕ್ಯೂರಿಟಿ ಗಾರ್ಡ್ ಇರಬೇಕಿತ್ತು. ಬ್ಯಾಂಕಿನವರದ್ದೂ ತಪ್ಪಿದೆ. ಸೆಕ್ಯೂರಿಟಿ ಗಾರ್ಡ್ಗೆ ಆರೋಗ್ಯ ಸರಿ ಇಲ್ಲ ಎಂದು ಹೇಳಿದ್ದಾರೆ. ಕಣ್ಣಿಗೆ ನಿದ್ರೆ ಮಾಡದೇ ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಮೃತನ ಕುಟುಂಬದವರ ಜೊತೆಗೆ ನಾನು, ಸರ್ಕಾರ ಇದೆ. ಮುಖ್ಯಮಂತ್ರಿಗಳ ಜೊತೆಗೂ ವಿಶೇಷ ಪರಿಹಾರದ ಕುರಿತು ಮಾತನಾಡಿದ್ದೇನೆ. ಸಮಾಜ ಕಲ್ಯಾಣ ಇಲಾಖೆಯಿಂದಲೂ ಪರಿಹಾರ ಕೊಡಲು ಸೂಚಿಸಿದ್ದೇನೆ. ಮೃತನ ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: Budget 2025 | ಜ.31 ರಿಂದ ಬಜೆಟ್‌ ಅಧಿವೇಶನ

ಬ್ಯಾಂಕ್ ದರೋಡೆ ವೇಳೆ ಗಿರಿ ವೆಂಕಟೇಶ್ ಸಾವು ದುರಾದೃಷ್ಟಕರ. ಸರ್ಕಾರದಿಂದ, ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ಕೊಡುತ್ತೇವೆ. ಪ್ರಕರಣದ ಕುರಿತು ಮುಖ್ಯಮಂತ್ರಿ ಅವರಿಗೆ ತಿಳಿಸಿದಾಗ ಸರ್ಕಾರದಿಂದ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಸಮಾಜ ಕಲ್ಯಾಣದಿಂದ 8 ಲಕ್ಷ ರೂ. ಪರಿಹಾರ ನೀಡುತ್ತೇವೆ. ಪರಿವಾರದ ಜೊತೆ ನಾವು ಇರುತ್ತೇವೆ. ಸರ್ಕಾರದ ಹಣ ರಕ್ಷಿಸಲು ಹೋಗಿ ಗಿರಿ ಪ್ರಾಣ ಕಳೆದುಕೊಂಡಿದ್ದಾರೆ. ಗಿರಿ ಬಗ್ಗೆ ಅಭಿಮಾನ ಮೂಡಿಸುವಂತ ಕೆಲಸ ಅವರು ಮಾಡಿದ್ದಾರೆ. ದುಷ್ಕರ್ಮಿಗಳನ್ನು ಆದಷ್ಟು ಬೇಗ ಬಂಧಿಸಿ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದೇವೆ. ಆರೋಪಿಗಳಿಗೆ ಕಾನೂನು ರೀತಿಯಲ್ಲಿ ಕಠಿಣ ಶಿಕ್ಷೆ ನೀಡಲಾಗುವುದು. ಗಾಯಗೊಂಡ ಶಿವ ಅವರ ಚಿಕಿತ್ಸೆಯ ಸಂಪೂರ್ಣ ಹಣ ಸರ್ಕಾರ ಭರಿಸುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸೈಫ್ ಅಲಿ ಖಾನ್ ಮೇಲಿನ ಹಲ್ಲೆಯಿಂದ ಶಾಕ್ ಆಗಿದೆ – ರಾಯಚೂರಿನಲ್ಲಿ ನಟಿ ಶಿಲ್ಪಾ ಶೆಟ್ಟಿ ಹೇಳಿಕೆ

Share This Article