ಮೇ 4 ರಂದು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ – ಎಣಿಕೆ ಕೇಂದ್ರಗಳ ಸುತ್ತ 3 ಹಂತದ ಭದ್ರತೆ, ಹೇಗಿದೆ ಕೊನೇ ಕ್ಷಣದ ಸಿದ್ಧತೆ?

2 Min Read

ಕೋಲ್ಕತ್ತಾ/ಚೆನ್ನೈ/ಗುವಾಹಟಿ: ಭಾರತದಲ್ಲಿ ಚುನಾವಣೆಗಳು (Indian Elections) ಅಂದ್ರೆ ಪ್ರಜಾತಂತ್ರದ ಹಬ್ಬ. ವಿಧಾನಸಭೆ ಮತ್ತು ಲೋಕಸಭೆಗೆ ಕಾಲಕಾಲಕ್ಕೆ ನಡೆಯುವ ಚುನಾವಣೆಗಳು, ರಾಜಕೀಯ ಪಕ್ಷಗಳ ಭವಿಷ್ಯ ಮತ್ತು ಮತದಾರರ (Voters) ಒಲವನ್ನು ನಿರ್ಧರಿಸುತ್ತವೆ. ಅದರಲ್ಲೂ ವಿವಿಧ ರಾಜ್ಯಗಳಲ್ಲಿ ಏಕಕಾಲಕ್ಕೆ ನಡೆಯುವ ಚುನಾವಣೆಗಳು, ದೇಶದ ರಾಜಕೀಯ ದಿಕ್ಕನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿರುತ್ತವೆ. ಅದೇ ರೀತಿ ನಾಳೆ (ಮೇ 4-ಸೋಮವಾರ) 4 ರಾಜ್ಯಗಳ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿದೆ.

ಚುನಾವಣೆ ನಡೆದ ಎಲ್ಲಾ ರಾಜ್ಯಗಳು ಭಾರತದ ರಾಜಕೀಯ ಭೂಪಟದಲ್ಲಿ ಅತ್ಯಂತ ಮಹತ್ವದ ಸ್ಥಾನ ಹೊಂದಿವೆ. ಪಶ್ಚಿಮ ಬಂಗಾಳ, ತಮಿಳುನಾಡು (Tamil Nadu), ಕೇರಳ, ಅಸ್ಸಾಂ ರಾಜ್ಯಗಳ ಚುನಾವಣಾ ಫಲಿತಾಂಶ, ದೇಶದ ರಾಜಕಾರಣದ ದಿಕ್ಸೂಚಿಯಾಗಬಲ್ಲವು. ಅದೇ ರೀತಿ ಪುದುಚೇರಿ ಕೇಂದ್ರಾಡಳಿತ ಪ್ರದೇಶ ಕೂಡ ನಾಳೆ ತನ್ನ ರಾಜಕೀಯ ಭವಿಷ್ಯ ನಿರ್ಧರಿಸಲಿದೆ. ಸೋಮವಾರ ಮಹಾ ತೀರ್ಪು ಹೊರಬೀಳಲಿರುವ ಹಿನ್ನೆಲೆ ಆಯಾ ರಾಜ್ಯಗಳಲ್ಲಿ ಕೊನೇ ಕ್ಷಣದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಅಸ್ಸಾಂನಲ್ಲಿ 3 ಹಂತದ ಭದ್ರತೆ
ಅಸ್ಸಾಂ ನಲ್ಲಿ (Assam) ಮತ ಎಣಿಕೆ ಹಿನ್ನೆಲೆ ಮೂರು ಹಂತದ ಭದ್ರತೆ ನಿಯೋಜಿಸಲಾಗಿದೆ. 5 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಪ್ರಕ್ರಿಯೆಗೆ ಲಖಿಂಪುರ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ವ್ಯವಸ್ಥೆ ಮಾಡಿರುವುದಾಗಿ ಡಿಸಿ ಆದಿತ್ಯ ವಿಕ್ರಮ್ ಯಾದವ್ ಹೇಳಿದ್ದಾರೆ. ನ್ಯಾಯಯುತ ಮತ್ತು ಪಾರದರ್ಶಕ ಪ್ರಕ್ರಿಯೆ ಗುರಿಯಾಗಿಟ್ಟುಕೊಂಡು 1,079 ಮತಗಟ್ಟೆಗಳು ಮತ್ತು ಸುಮಾರು 3,500 ಅಂಚೆ ಮತಪತ್ರಗಳ ಎಣಿಕೆ ಕಾರ್ಯವೂ ಇದರಲ್ಲಿ ಸೇರಿದೆ. ಎಲ್ಲವೂ ಸುಸೂತ್ರವಾಗಿ ನಡೆಯಲಿ ಎಂಬ ಉದ್ದೇಶದಿಂದ ಸಿಎಪಿಎಫ್, ರಾಜ್ಯ ಸಶಸ್ತ್ರ ಪೊಲೀಸ್, ರಾಜ್ಯ ಪೊಲೀಸ್ ಮತ್ತು ನಾಗರಿಕ ರಕ್ಷಣಾ ಇಲಾಖೆಯಿಂದ ಸುಮಾರು 400 ಸಿಬ್ಬಂದಿಯನ್ನ ಭದ್ರತೆಗೆ ನಿಯೋಜಿಸಲಾಗಿದೆ.

ಬಂಗಾಳದಲ್ಲಿ 432 ಎಣಿಕ ವೀಕ್ಷಕರ ನೇಮಕ
ಇನ್ನೂ ಬಂಗಾಳದಲ್ಲಿ ಇವಿಎಂ ಟ್ಯಾಂಪರಿಂಗ್‌ ಆರೋಪ ಕೇಳಿಬಂದಿರುವ ಹಿನ್ನೆಲೆ ಎಣಿಕೆ ಕೇಂದ್ರಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಅದಕ್ಕಾಗಿ 294 ವಿಧಾನಸಭಾ ಕ್ಷೇತ್ರಗಳಲ್ಲಿ 432 ಮತ ಎಣಿಕೆ ವೀಕ್ಷಕರನ್ನ ನೇಮಕ ಮಾಡಲಾಗಿದೆ.

ಈ ಕುರಿತು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಮಾತನಾಡಿ, 3 ಹಂತದ ಭದ್ರತಾ ವ್ಯವಸ್ಥೆಯನ್ನ ನಿಯೋಜನೆ ಮಾಡಲಾಗಿದೆ. ರಾಜ್ಯ ಪೊಲೀಸ್‌ ಇಲಾಖೆ, ರಾಜ್ಯ ಸಶಸ್ತ್ರ ಮೀಸಲು ಪಡೆ, ಸಿಎಪಿಎಫ್ ಅನ್ನು ಭದ್ರತೆಗೆ ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರಗಳ ಒಳಗೆ ಮತ್ತು ಹೊರಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಎಲ್ಲರಿಗೂ ಜವಾಬ್ದಾರಿ ಹಂಚಿಕೆ ಮಾಡಿದ್ದು, ಯಾವುದೇ ಲೋಕ ಪಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಸಕಲ ಸಿದ್ಧತೆ
ತಮಿಳುನಾಡಿನಾದ್ಯಂತ ಗೊತ್ತುಪಡಿಸಿದ 62 ಮತ ಎಣಿಕೆ ಕೇಂದ್ರಗಳಲ್ಲಿ 3 ಹಂತದ ಭದ್ರತೆ ನಿಯೋಜಿಸಲಾಗಿದೆ. ಬೆಳಗ್ಗೆ 8 ಗಂಟೆಗೆ ಅಂಚೆ ಮತಗಳ ಎಣಿಕೆ ಶುರುವಾಗಲಿದ್ದು, 8:30 ರಿಂದ ಇವಿಎಂ ಮತ ಎಣಿಕೆ ಕಾರ್ಯ ನಡೆಯಲಿದೆ. ಎಲ್ಲವೂ ಸಿಸಿಟಿವಿ ಕಣ್ಗಾವಲಿನಲ್ಲಿ ಇರಲಿದೆ ಎಂದು ತಮಿಳುನಾಡಿನ ಮುಖ್ಯ ಚುನಾವಣಾ ಅಧಿಕಾರಿ ಅರ್ಚನಾ ಪಟ್ನಾಯಕ್ ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶವು ರಾಷ್ಟ್ರ ರಾಜಕಾರಣದ ಪಥವನ್ನು ನಿರ್ಧರಿಸಲಿದ್ದು, ಈ ರಾಜ್ಯಗಳ ಮತದಾರ ಯಾರ ಕೊರಳಿಗೆ ವಿಜಯದ ಮಾಲೆ ಹಾಕಲಿದ್ದಾನೆ ಎಂಬುದನ್ನ ಕಾದುನೋಡಬೇಕಿದೆ.

Share This Article