ಉಡುಪಿ: ನಿರೂಪಕಿ ಅನುಶ್ರೀಗೆ ಮದುವೆ!

Public TV
2 Min Read

ಉಡುಪಿ: ಕಿರುತೆರೆಯ ನಂಬರ್ ಒನ್ ನಿರೂಪಕಿ ಅನುಶ್ರೀಗೆ ಲವ್ವಾಗಿದ್ದು ಹಳೇ ಸುದ್ದಿ. ಉಡುಪಿಯಲ್ಲಿ ಮದುವೆಯಾಗಿದ್ದು ಬಿಸಿ ಬಿಸಿ ಸುದ್ದಿ. ಆ್ಯಂಕರ್ ಅನುಶ್ರೀ ತಾಳಿ ಕಟ್ಟಿಸಿಕೊಂಡಿದ್ದಾರೆ. ಸಪ್ತಪದಿ ತುಳಿದಿದ್ದಾರೆ. ಅನುಶ್ರಿಗೆ ಮದುವೆಯಾಗೇ ಹೋಯ್ತಾ ಅಂತ ಪಡ್ಡೆ ಹುಡುಗ್ರೆಲ್ಲ ಶಾಕ್ ಆದ್ರೆ ನಾವ್ ಜವಾಬ್ದಾರರಲ್ಲ.

ಬಾಯಿ ತೆಗೆದ್ರೆ ಪಟಾಕಿ ತರ ಸಿಡಿಯೋ ಅನುಶ್ರೀ ಮ್ಯಾರೇಜ್ ಸ್ಟೋರಿ ಇದು. ಶಂಕರಪುರ ಮಲ್ಲಿಗೆ ಮುಡಿಗಿಟ್ಟು ಜರತಾರಿ ಸೀರೆ ಉಟ್ಟು- ಬಾಸಿಂಗ ಕಟ್ಟಿಕೊಂಡು ಅನುಶ್ರೀ ಪಕ್ಕಾ ಮದುಮಗಳ ಲುಕ್ ನಲ್ಲಿ ಕಾಣಿಸಿಕೊಂಡರು. ಆದ್ರೆ ಇದು ರಿಯಲ್ ಮದುವೆಯಲ್ಲ, ರೀಲ್ ಮದುವೆ.

ಉಡುಪಿಯ ಮಣಿಪಾಲದ ಆರ್‍ಎಸ್‍ಬಿ ಸಭಾ ಭವನದಲ್ಲಿ ಮದುವೆ ಮನೆಯ ಸೆಟ್ ಹಾಕಲಾಗಿತ್ತು. ಮದುವೆಗೆ ಗಣ್ಯರ ಆಗಮನ, ಹೂವಿನಿಂದ ಸಿಂಗರಿಸಿದ್ದ ಸೆಟ್, ಓಲಗ ಎಲ್ಲಾ ಇತ್ತು. ಕೋಸ್ಟಲ್‍ವುಡ್‍ನ ಬಹು ಬಜೆಟ್ ಚಿತ್ರ `ಕೋರಿ ರೊಟ್ಟಿ’ಯಲ್ಲಿ ಅನುಶ್ರೀ ಅಭಿನಯಿಸುತ್ತಿದ್ದಾರೆ. ಉಡುಪಿಯ ರಜನೀಶ್ ನಾಯಕನಾಗಿ ನಟಿಸಿ- ನಿರ್ದೇಶನ ಮಾಡುತ್ತಿದ್ದಾರೆ. ದುಬೈ ಉದ್ಯಮಿಗಳು ಚಿತ್ರಕ್ಕೆ ದುಡ್ಡು ಹಾಕಿದ್ದಾರೆ. ಒಂದು ತಿಂಗಳ ಕಾಲ ನಿರಂತರ ಚಿತ್ರೀಕರಣ ಉಡುಪಿ- ಮಂಗಳೂರಿನಲ್ಲಿ ನಡೆಯಲಿದೆ. ಚಿತ್ರದ ಕ್ಲೈಮ್ಯಾಕ್ಸ್‍ನ ಚಿತ್ರೀಕರಣ ನಡೆಯಿತು.

ಮದುವೆ ಮನೆಯ ದೃಶ್ಯಾವಳಿಗಳನ್ನು ಚಿತ್ರೀಕರಣ ಮಾಡಲಾಯ್ತು. ಮೂಲತಃ ಕರಾವಳಿಯವರಾಗಿದ್ರೂ ಅನುಶ್ರೀ ಇದೇ ಮೊದಲ ಬಾರಿಗೆ ತುಳು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರೀಲ್ ಮದುವೆಯಾಯ್ತು, ರಿಯಲ್ ಮದುವೆ ಯಾವಾಗ? ಅನ್ನೋ ಪ್ರಶ್ನೆಗೆ ಉತ್ತರಿಸಿದ ಅನುಶ್ರೀ, ನಾನು ಸಿಕ್ಕಾಪಟ್ಟೆ ಯಂಗ್. ಮನೆ ಕಟ್ಟಿಯಾಯ್ತು. ಮದುವೆಗೆ ಕಾಲ ಕೂಡಿ ಬಂದಾಗ ಒಳ್ಳೆ ಹುಡುಗ ಸಿಕ್ಕಿದ ಕೂಡಲೇ ಮದುವೆಯಾಗ್ತೇನೆ. ನನ್ ಮದುವೆ ಫಿಕ್ಸಾದ ಕೂಡಲೇ ಮೊದಲು ಪಬ್ಲಿಕ್ ಟಿವಿಗೆ ಇನ್ಫರ್ಮೇಷನ್ ಕೊಡ್ತೇನೆ ಅಂತ ಹೇಳಿದ್ರು.

ತುಳು ಚಿತ್ರರಂಗದ ಪ್ರಸಿದ್ಧ ನಟರಾದ ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ ಬೋಳಾರ್, ಕನ್ನಡದ ಹಿರಿಯ ನಟ ಹರೀಶ್ ರಾಯ್, ಇಳಾ ವಿಟ್ಲ- ಸ್ಥಳೀಯ ರಂಗಭೂಮಿ ನಟ, ನಟಿಯರು ಕೋರಿ ರೊಟ್ಟಿಯಲ್ಲಿ ಬಣ್ಣಹಚ್ಚಿದ್ದಾರೆ. ಕೋರಿ ರೊಟ್ಟಿ ಚಿತ್ರದಲ್ಲಿ ಸ್ಥಳೀಯ ಪ್ರತಿಭೆಗಳ ದಂಡೇ ಇದೆ.

ಈ ಹಿಂದಿನ ಎಲ್ಲಾ ತುಳು ಚಿತ್ರಗಳಿಗೆ ಹೋಲಿಸಿದ್ರೆ ಇದು ದೊಡ್ಡ ಬಜೆಟ್‍ನ ಚಿತ್ರ. ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಚಿತ್ರ ಮೂಡಿ ಬರಲಿದೆ. ಇಲ್ಲಿನ ಜನ ಕಾಮಿಡಿಯನ್ನು ಹೆಚ್ಚು ಇಷ್ಟಪಡುವುದರಿಂದ ಇಲ್ಲೂ ಆ ಫ್ಲೇವರ್ ಜಾಸ್ತಿ ಇರುತ್ತದೆ ಅಂತ ಚಿತ್ರದ ನಾಯಕ ನಟ, ನಿರ್ದೇಶಕ ರಜನೀಶ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ರು.

ಇನ್ನೂ ಮೂರು ದಿನ ಇದೇ ರೀತಿ ಶೃಂಗಾರ ಮಾಡಿಕೊಂಡು ಅನುಶ್ರೀ ಇರ್ತಾರಂತೆ. ಮದುವೆ ಮನೆಗೆ ರೌಡಿಗಳು ಎಂಟ್ರಿ ಕೊಟ್ಟು ಮದುವೆ ಗಂಡಿನ ಜೊತೆ ಹೊಡೆದಾಟ ಮಾಡುವ ಸೀಕ್ವೆನ್ಸ್ ಶೂಟ್ ನಡೆಯಲಿದ್ಯಂತೆ. ಕೋರಿ ರೊಟ್ಟಿಗೂ ಮೊದಲು ಸದ್ಯ ಶೂಟ್ ನಡೆಯುತ್ತಿರುವ ಸಂದರ್ಭದಲ್ಲೂ ತುಳು ಚಿತ್ರಗಳಲ್ಲಿ ನಟಿಸುವಂತೆ ಸುಮಾರು ಆಫರ್‍ಗಳು ಅನುಶ್ರೀಗೆ ಬಂದಿದೆ. ಆದ್ರೆ ಅದ್ಯಾವುದನ್ನೂ ಅವರು ಒಪ್ಪಿಕೊಂಡಿಲ್ಲವಂತೆ. ಒಳ್ಳೆ ಕಥೆ, ಒಳ್ಳೆ ಡೈರೆಕ್ಟರ್ ಸಿಕ್ಕರೆ ತುಳುವಿನಲ್ಲಿ ಇನ್ನಷ್ಟು ಚಿತ್ರಗಳಲ್ಲಿ ನಟಿಸುತ್ತೇನೆ ಅಂತಾರೆ ಚಟ್ ಪಟ್ ಪಟಾಕಿ ಅನುಶ್ರೀ. 

Share This Article
Leave a Comment

Leave a Reply

Your email address will not be published. Required fields are marked *