ಪಂಥಾಹ್ವಾನ ನೀಡಿದ್ರೂ `ಪವರ್’ಫುಲ್ ಸಚಿವರು ಸೈಲೆಂಟ್ ಆಗಿರೋದಕ್ಕೆ ಅಜ್ಜಯ್ಯ ಕಾರಣನಾ?

Public TV
2 Min Read

ಬೆಂಗಳೂರು, ರಾಮನಗರ: ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಚನ್ನಪಟ್ಟಣದ ಶಾಸಕ ಸಿ.ಪಿ.ಯೋಗೇಶ್ವರ್ ತಿರುಗಿಬಿದ್ದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸ್ತಿದ್ದಾರೆ. ಆದ್ರೆ ಪವರ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಮಾತ್ರ ಫುಲ್ ಸೈಲೆಂಟ್ ಆಗಿದ್ದಾರೆ. ಯಾಕಂದ್ರೆ ಡಿಕೆ ಶಿವಕುಮಾರ್ ನಂಬಿರುವ ನೊಣವನಕೆರೆಯ ಕಾಡು ಸಿದ್ದೇಶ್ವರ ಮಠದ ಅಜ್ಜಯ್ಯ ಜನವರಿ ಅಂತ್ಯದವರೆಗೆ ಸುಮ್ಮನಿರುವಂತೆ ಹೇಳಿದ್ದಾರಂತೆ.

ಇದೇ ಕಾರಣಕ್ಕೆ ಡಿಕೆ ಶಿವಕುಮಾರ್ ರಾಜಕೀಯ ವಿರೋಧಿಗಳ ಬಗ್ಗೆ ಮಾತನಾಡದೆ ಸುಮ್ಮನಿದ್ದಾರೆ ಎನ್ನಲಾಗ್ತಿದೆ. ಡಿಕೆ ಶಿವಕುಮಾರ್‍ಗೆ ಮಹಿಳೆಯರ ಕೈಯಲ್ಲಿ ಪೊರಕೆಯಲ್ಲಿ ಹೊಡೆಸುತ್ತೇನೆ. ತಾಕತ್ತಿದ್ದರೆ ಡಿಕೆಶಿ ನನ್ನ ವಿರುದ್ಧ ಚನ್ನಪಟ್ಟಣದಲ್ಲಿ ಸ್ಪರ್ಧಿಸಲಿ ಎಂದು ಸಿ.ಪಿ.ಯೋಗೇಶ್ವರ್ ನೇರವಾಗಿ ಸವಾಲು ಹಾಕಿದ್ರು. ಈವರೆಗೆ ತಮ್ಮ ವಿರುದ್ಧ ಮಾತನಾಡಿದ ಎದುರಾಳಿಗಳ ಮೇಲೆ ಸವಾರಿ ಮಾಡ್ತಿದ್ದ ಡಿಕೆ ಶಿವಕುಮಾರ್ ಸೈಲೆಂಟ್ ಆಗಿದ್ದಾರೆ. ಅಲ್ಲದೆ ಪೊರಕೆಯಲ್ಲಿ ಹೊಡೆಯಲಿ ಯೋಗೇಶ್ವರ್, ಗ್ರೇಟ್ ಪರ್ಸನ್. ಅವರು ತುಂಬ ದೊಡ್ಡ ನಾಯಕರು ಅಂತ ಕೈ ಮುಗಿಯುತ್ತಿದ್ದಾರೆ. ಇದಕ್ಕೆಲ್ಲಾ ಅಜ್ಜಯ್ಯನ ಮಾತು ಕಾರಣವಾಗಿದ್ದು, ಜನವರಿ ನಂತರ ಇದೆ ಅಸಲಿ ಆಟ ಅಂತ ಡಿಕೆ ಶಿವಕುಮಾರ್ ಅಪ್ತರು ಮಾತನಾಡಿಕೊಳ್ತಿದ್ದಾರೆ. ಇದನ್ನೂ ಓದಿ: ಅಭ್ಯರ್ಥಿ ಇಲ್ಲಿ ನೆಪ ಮಾತ್ರ, ನಾನು-ಡಿ.ಕೆ.ಸುರೇಶ್ ಇಲ್ಲಿನ ನಿಜವಾದ ಅಭ್ಯರ್ಥಿಗಳು ನೆನಪಿರಲಿ: ಚನ್ನಪಟ್ಟಣದಲ್ಲಿ ಡಿಕೆಶಿ ಅಬ್ಬರ

 

ಇನ್ನು ಬೊಂಬೆನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಘೋಷಣೆಯ ಮುನ್ನವೇ ಚುನಾವಣಾ ಕಣ ರಂಗೇರಿದೆ. ಸಿಎಂ ಸಾಧನ ಸಮಾವೇಶದ ನಂತರ ಹಠಕ್ಕೆ ಬಿದ್ದಿರೋ ಶಾಸಕ ಯೋಗೇಶ್ವರ್, ಕ್ಷೇತ್ರದಲ್ಲಿ ಠಿಕಾಣಿ ಹೂಡಿ ಬೂತ್ ಮಟ್ಟದಲ್ಲಿ ಪಕ್ಷ ಬಲವರ್ಧನೆ ಮಾಡ್ತಿದ್ದಾರೆ. ಜೊತೆಗೆ ಕಾರ್ಯಕರ್ತರ ಸಭೆ ನಡೆಸುತ್ತಿರುವ ಯೋಗೇಶ್ವರ್ ಭರ್ಜರಿ ಬಾಡೂಟ ಹಾಕಿಸ್ತಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಸಿಎಂ ಶಕ್ತಿಪ್ರದರ್ಶನ- ಸಾಧನಾ ಸಮಾವೇಶಕ್ಕೆ ಶಾಸಕ ಸಿಪಿ ಯೋಗೇಶ್ವರ್ ಗೈರಾಗಲು ನಿರ್ಧಾರ

ಶುಕ್ರವಾರ ಚನ್ನಪಟ್ಟಣ ತಾಲೂಕಿನ ಮಳೂರು ಹಾಗೂ ಚಕ್ಕೆರೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ರು. ಮುದುಗೆರೆ ಸಮೀಪದ ಅರಣ್ಯ ಪ್ರದೇಶದಲ್ಲಿ ನಡೆದ ಸಭೆಯಲ್ಲಿ ಭಾಗಿಯಾದವರಿಗೆ 200 ಕೆಜಿ ಚಿಕನ್ ಮತ್ತು 200 ಕೆಜಿ ಮಟನ್‍ನ ಭರ್ಜರಿ ಮಾಂಸದೂಟವನ್ನು ಉಣಬಡಿಸಿದ್ದಾರೆ. ಜೊತೆಗೆ ಚನ್ನಪಟ್ಟಣದಲ್ಲಿ ನಡೆಯುವ ಬಿಜೆಪಿಯ ಪರಿವರ್ತನಾ ಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *