ಬೆಂಗ್ಳೂರಲ್ಲಿ ನಟಿ ದೀಪಿಕಾ ಪಡುಕೋಣೆ ಕುಟುಂಬಕ್ಕೆ ಬಿಗಿ ಪೊಲೀಸ್ ಭದ್ರತೆ

Public TV
2 Min Read

ಬೆಂಗಳೂರು: ನಗರದಲ್ಲಿ ಬಾಲಿವುಡ್ ದೀಪಿಕಾ ಪಡುಕೋಣೆ ಕುಟುಂಬಸ್ಥರಿಗೆ ಭಾರೀ ಪೊಲೀಸ್ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ದೀಪಿಕಾ ಅಭಿನಯದ `ಪದ್ಮಾವತಿ’ ಸಿನಿಮಾ ವಿವಾದಗಳಿಂದಾಗಿ ದೀಪಿಕಾ ಮನೆಗೆ ಭದ್ರತೆ ನೀಡಲಾಗಿದೆ.

ಹರಿಯಾಣ ಬಿಜೆಪಿ ಮುಖಂಡ ದೀಪಿಕಾರ ಶಿರಚ್ಛೇದ ಮಾಡಿದ್ರೆ 10 ಕೋಟಿ ರೂ. ಬಹುಮಾನ ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವರು ಪೊಲೀಸ್ ಅಧಿಕಾರಿಗಳಿಗೆ ದೀಪಿಕಾ ಮನೆಗೆ ಭದ್ರತೆ ನೀಡುವಂತೆ ಆದೇಶ ನೀಡಿದ್ದಾರೆ. ಜೆ.ಸಿನಗರದ ನಂದಿದುರ್ಗ ಬಳಿ ಇರುವ ವುಡ್ಸ್ ವೇಲ್ ಅಪಾರ್ಟ್ ಮೆಂಟ್ ನಲ್ಲಿ ದೀಪಿಕಾ ಪೋಷಕರು ವಾಸವಾಗಿದ್ದಾರೆ. ಕಮಿಷನರ್ ಆದೇಶದಂತೆ ಅಪಾರ್ಟ್ ಮೆಂಟ್ ಬಳಿ 4 ಕಾನ್ಸ್ ಟೇಬಲ್, ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಭದ್ರತೆ ನೀಡಿದೆ.

ವುಡ್ಸ್ ವೇಲ್ ಅಪಾರ್ಟ್ ಮೆಂಟ್ ನಲ್ಲಿ ದೀಪಿಕಾರ ತಂದೆ, ತಾಯಿ ಮತ್ತು ಸಹೋದರಿ ವಾಸವಾಗಿದ್ದಾರೆ. ಇತ್ತ ಮಲ್ಲೇಶ್ವರಂನ 18ನೇ ಕ್ರಾಸ್ ನಲ್ಲಿರುವ ದೀಪಿಕಾರ ಅಜ್ಜಿ ಮನೆಗೂ ಸ್ಥಳೀಯ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಹರಿಯಾಣದ ಬಿಜೆಪಿ ಮಾಧ್ಯಮ ಘಟಕದ ಮುಖ್ಯಸ್ಥ ಸೂರಜ್ ಪಾಲ್ ಅಮು, ನಟಿ ದೀಪಿಕಾ ಹಾಗೂ ನಿರ್ದೇಶಕ ಬನ್ಸಾಲಿ ಅವರ ಶಿರಚ್ಛೇದ ಮಾಡಿದವರಿಗೆ 10 ಕೋಟಿ ರೂ. ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಚಿತ್ರದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಪಾತ್ರವನ್ನು ಮಾಡಿರುವ ರಣವೀರ್ ಸಿಂಗ್ ನ ಕಾಲುಗಳನ್ನು ಮುರಿಯುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: ದೀಪಿಕಾ ಪಡುಕೋಣೆ, ಪದ್ಮಾವತಿ ನಿರ್ದೇಶಕರ ಶಿರಚ್ಛೇದ ಮಾಡಿದ್ರೆ 10 ಕೋಟಿ ರೂ.- ಬಿಜೆಪಿ ನಾಯಕ

ದೀಪಿಕಾ ಪಡುಕೋಣೆ ಪರವಾದ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ಸುವರ್ಣಸೌಧದಲ್ಲಿ ಪ್ರತಿಕ್ರಿಯಿಸಿದ ಸಚಿವ ಡಿ ಕೆ ಶಿವಕುಮಾರ್, ಆಕೆ ನಮ್ಮ ನೆಲದ ಹೆಣ್ಣು ಮಗಳು. ಅವರ ತಂದೆ ಅಂತರಾಷ್ಷ್ರೀಯ ಕ್ರೀಡಾಪಟು ನಮ್ಮ ರಾಜ್ಯದವರು. ಅಂತಹ ಹೆಣ್ಣು ಮಗಳನ್ನು ಕೊಲ್ಲುವ ಮಾತನಾಡಿದ್ದಾರೆ. ಇದು ಅಕ್ಷಮ್ಯ ಅಪರಾಧ. ಭೂಮಿಯನ್ನೆ ತಾಯಿ ಅನ್ನೋ ಸಂಸ್ಕಾರ ನಮ್ಮದು. ಇವರು ತಲೆ ಕಡಿರಿ ಮೂಗು ಕುಯ್ರಿ ಎನ್ನುತ್ತಿದ್ದಾರೆ. ಕೂಡಲೆ ಕೇಂದ್ರ ಸರ್ಕಾರ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಬೇಕು. ಈ ಕುರಿತು ರಾಜ್ಯದಲ್ಲಿ ಸಿಎಂ ಹಾಗೂ ಗೃಹ ಸಚುವರಿಗೂ ಮನವಿ ಮಾಡಿದ್ದೇನೆ ಅಂತಾ ಅಂದಿದ್ದರು.

ಇದನ್ನೂ ಓದಿ: ವಿವಾದಗಳ ನಡುವೆ ಪದ್ಮಾವತಿ ರಿಲೀಸ್ ದಿನಾಂಕ ಬದಲಾಯ್ತು-ಸೆನ್ಸಾರ್ ಮಂಡಳಿಯಲ್ಲಿ ಅರ್ಜಿ ರಿಜೆಕ್ಟ್

ನಟಿ ದೀಪಿಕಾ ಪಡುಕೋಣೆಗೆ ರಕ್ಷಣೆ ನೀಡುವಂತೆ ಕೋರಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕೂಡ ದೀಪಿಕಾ ಪಡುಕೋಣೆ ಪರ ಬ್ಯಾಟಿಂಗ್ ಮಾಡಿದ್ದರು. ಹರಿಯಾಣ ಸಿಎಂ ಮನೋಹರಲಾಲ್ ಖಟ್ಟರ್ ಅವರಿಗೆ ದೂರವಾಣಿ ಕರೆ ಮಾಡಿದ ಸಿಎಂ ಸಿದ್ದರಾಮಯ್ಯ ದೀಪಿಕಾ ಪಡುಕೋಣೆಗೆ ರಕ್ಷಣೆ ನೀಡುವಂತೆ ಕೋರಿದ್ದಾರೆ. ದೀಪಿಕಾ ಕನ್ನಡದ ಮನೆಮಗಳು. ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ನಟಿಯಾಗಿದ್ದಾರೆ. ದೀಪಿಕಾ ಜೊತೆ ಇಡೀ ಕರ್ನಾಟಕವೇ ಜೊತೆಗಿದೆ ಅಂತ ಸಿಎಂ ಬ್ಯಾಟಿಂಗ್ ಮಾಡಿದ್ದರು.

ಇದನ್ನೂ ಓದಿ: ಪದ್ಮಾವತಿ ಫಿಲ್ಮ ರಿಲೀಸ್ ಆದ್ರೆ, ದೀಪಿಕಾ ಮೂಗನ್ನು ಕಟ್ ಮಾಡ್ತೀವಿ

 

Share This Article
Leave a Comment

Leave a Reply

Your email address will not be published. Required fields are marked *