ಬಸವಲಿಂಗ ಶ್ರೀ ಆಪ್ತ ಚಾಲಕ ಸೇರಿ ನಾಲ್ವರ ವಿಚಾರಣೆ, ಮೊಬೈಲ್ ವಶಕ್ಕೆ

Public TV
2 Min Read

ರಾಮನಗರ: ಮಾಗಡಿ (Magadi) ತಾಲೂಕಿನ ಬಂಡೆಮಠದ ಶ್ರೀಗಳ (Kanchugal Bande Mutt) ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣ ಸಂಬಂಧ ಪೊಲೀಸ್ ತನಿಖೆ ಚುರುಕುಗೊಂಡಿದ್ದು, ಶ್ರೀಗಳ ಆಪ್ತ ಚಾಲಕ, ಮಠದ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗಿದೆ. ಈ ನಡುವೆ ಶ್ರೀಗಳ ಬಳಿ 10 ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಲಾಗಿತ್ತು ಎನ್ನುವ ಮಾಹಿತಿ ಬಹಿರಂಗವಾಗ್ತಿದ್ದು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.

ಕಂಚುಗಲ್ ಬಂಡೆಮಠದ ಶ್ರೀಗಳು ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ನಾಲ್ಕು ದಿನ ಕಳೆದಿದೆ. ಶ್ರೀಗಳ ಆತ್ಮಹತ್ಯೆ ಪ್ರಕರಣದ ತನಿಖೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವುದು ಮತ್ತಷ್ಟು ಅನುಮಾನಗಳನ್ನು ಹೆಚ್ಚಿಸಿದೆ. ಇದರ ಜೊತೆಗೆ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಶ್ರೀಗಳ ಆಪ್ತವಲಯದಲ್ಲೇ ಗುರುತಿಸಿಕೊಂಡಿದ್ದ ಪ್ರಭಾವಿಗಳೇ ಸಂಚು ರೂಪಿಸಿ ಖೆಡ್ಡಾಕ್ಕೆ ಕೆಡವಿದ್ದಾರೆ ಎನ್ನಲಾಗುತ್ತಿದೆ. ಶ್ರೀಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಕೆಲ ವ್ಯಕ್ತಿಗಳೇ ಮಹಿಳೆಯನ್ನು ಶ್ರೀಗಳಿಗೆ ಪರಿಚಯ ಮಾಡಿಕೊಟ್ಟಿದ್ದರು ಎನ್ನಲಾಗ್ತಿದೆ. ಈ ಕುರಿತಾಗಿ ಈಗಾಗಲೇ 7 ಜನರ ವಿಚಾರಣೆ ನಡೆಸಿರುವ ಬಗ್ಗೆ ಪೊಲೀಸ್ ಮೂಲಗಳು ತಿಳಿಸಿವೆ.

ಬಸವಲಿಂಗ ಶ್ರೀಗಳ (Basavalinga Swamiji) ವೀಡಿಯೋವೊಂದು (Video) ವೈರಲ್ ಆಗಿರುವ ಹಿನ್ನೆಲೆಯಲ್ಲಿ ವೀಡಿಯೋ ವೈರಲ್ ಮಾಡಿರುವ ಬಗ್ಗೆಯೂ ಪೊಲೀಸರು ತನಿಖೆ ಮಾಡ್ತಿದ್ದಾರೆ. ಅಲ್ಲದೇ ವೀಡಿಯೋ ಮಾಡಿಕೊಂಡಿದ್ದ ಟೀಮ್ ಶ್ರೀಗಳ ಬಳಿ 10 ಕೋಟಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗುತ್ತಿದೆ. ವೀಡಿಯೋವನ್ನು ಸ್ವಾಮೀಜಿ ಮೊಬೈಲ್‍ಗೆ ಕಳುಹಿಸಿ ಬೆದರಿಕೆ ಹಾಕಿ ಅವರಿಗೆ ಮಾನಸಿಕ ಕಿರುಕುಳ ನೀಡಲಾಗಿದೆ. ಹತ್ತು ದಿನದ ಹಿಂದೆಯೇ ಬಸವಲಿಂಗ ಸ್ವಾಮೀಜಿ ಮೊಬೈಲ್‍ಗೆ ಮಠದ ಆಪ್ತನೇ ವೀಡಿಯೋ ಕಳುಹಿಸಿರುವ ಶಂಕೆ ವ್ಯಕ್ತವಾಗಿದೆ. ದೊಡ್ಡ ಮೊತ್ತದ ಹಣವನ್ನು ಹೊಂದಿಸುವಲ್ಲಿ ಸ್ವಾಮೀಜಿ ವಿಫಲರಾಗಿ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.

ಇನ್ನೂ ಬಸವಲಿಂಗ ಸ್ವಾಮೀಜಿಯ ಆಪ್ತ ಚಾಲಕ ಸೇರಿದಂತೆ ನಾಲ್ವರ ಮೊಬೈಲ್ ಫೋನನ್ನು ವಶಕ್ಕೆ ಪಡೆದಿರುವ ಪೊಲೀಸರು ಮೊಬೈಲ್‍ಗಳ ಪರಿಶೀಲನೆ ನಡೆಸಿದ್ದಾರೆ. ಮತ್ತೆ ವಿಚಾರಣೆಗೆ ಕರೆದಾಗ ಬರುವಂತೆ ಸೂಚನೆ ನೀಡಿ ಊರು ಬಿಟ್ಟು ಹೋಗದಂತೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಆಪ್ತಚಾಲಕ ಮತ್ತು ಸಿಬ್ಬಂದಿಯಿಂದ ಸ್ವಾಮೀಜಿಯ ಚಲನಾವಲನದ ಬಗ್ಗೆ ಮಾಹಿತಿ ಸಂಗ್ರಹಿಸಿ ಮಠಕ್ಕೆ ಬಂದು ಹೋಗ್ತಿದ್ದವರ ಬಗ್ಗೆಯೂ ಸಂಪೂರ್ಣ ಮಾಹಿತಿ ಕಲೆಹಾಕಲಾಗ್ತಿದೆ. ಇದನ್ನೂ ಓದಿ: ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ – 10 ಕೋಟಿಗೆ ಬೇಡಿಕೆ ಇಟ್ಟಿತ್ತಾ ಮಹಿಳೆ ಆ್ಯಂಡ್ ಟೀಂ?

ಒಟ್ಟಾರೆ ದಿನ ಕಳೆದಂತೆ ಶ್ರೀಗಳ ಆತ್ಮಹತ್ಯೆ ಪ್ರಕರಣಕ್ಕೆ ರೆಕ್ಕೆಪುಕ್ಕಗಳು ಹೆಚ್ಚಾಗುತ್ತಿವೆ. ತನಿಖೆ ಬಗ್ಗೆ ಸಾಕಷ್ಟು ಊಹಾಪೋಹಗಳು ವ್ಯಕ್ತವಾಗುತ್ತಿರುವ ಹಿನ್ನೆಲೆ ಮಠದ ಕೆಲ ಮುಖಂಡರು ಸಿಎಂ ಭೇಟಿಯಾಗಿ ಪ್ರಕರಣವನ್ನು ಶೀಘ್ರವಾಗಿ ತನಿಖೆ ಮುಗಿಸುವಂತೆ ಮನವಿ ಮಾಡುವ ಬಗ್ಗೆ ಮಾಹಿತಿ ದೊರೆತಿದೆ. ಇನ್ನಾದರೂ ತನಿಖೆ ಮತ್ತಷ್ಟು ತೀವ್ರಗೊಳ್ಳಲಿದ್ಯಾ ಎಂದು ಕಾದುನೋಡಬೇಕಿದೆ. ಇದನ್ನೂ ಓದಿ: ಬಸವಲಿಂಗ ಶ್ರೀ ವೀಡಿಯೋ ಕಾಲ್ ವೈರಲ್- ಮೂವರು ಮಹಿಳೆಯರ ಪ್ರತ್ಯೇಕ ವಿಚಾರಣೆ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *