ಪಾಕಿಸ್ತಾನದ ವಿರುದ್ಧ ಗೆಲುವಿಗೆ 50 ವರ್ಷ- ಕಾರವಾರಕ್ಕೆ ಬಂದ ಪ್ರಧಾನಿ ಬೆಳಗಿಸಿದ್ದ ವಿಜಯ ಜ್ಯೋತಿ

Public TV
1 Min Read

ಕಾರವಾರ: 1971 ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಸಶಸ್ತ್ರ ದಳವು ಗೆಲುವು ಸಾಧಿಸಿದ 50 ವರ್ಷಗಳು ಸಂದ ಹಿನ್ನೆಲೆಯಲ್ಲಿ ಇಂದು ಕಾರವಾರದ ಕದಂಬಾ ನೌಕಾನೆಲೆಯಲ್ಲಿ ವಿಜಯ ದಿನವನ್ನು ಆಚರಿಸಲಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ಬೆಳಗಿಸಿದ್ದ ವಿಜಯ ಜ್ಯೋತಿಯು ಇಂದು ಕಾರವಾರದ ಕದಂಬ ನೆಲೆಗೆ ಆಗಮಿಸಿದ್ದು ವಿಶೇಷವಾಗಿತ್ತು.

ಕಾರವಾರಕ್ಕೆ ಬಂದ ವಿಜಯ್ ಜ್ಯೋತಿಯನ್ನು ನೌಕಾಪಡೆಯ ಅಧಿಕಾರಿಗಳ ಸಮ್ಮುಖದಲ್ಲಿ ಕದಂಬಾ ನೌಕಾ ನೆಲೆಯಲ್ಲಿ ನಿರ್ಮಿಸಿರುವ ಯುದ್ಧ ಸ್ಮಾರಕದಲ್ಲಿ ನೌಕಾ ನೆಲೆಯ ಕಮಾಂಡಿಂಗ್ ಪ್ಲಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್‍ರವರು ಜ್ಯೋತಿಯನ್ನು ಬರಮಾಡಿಕೊಂಡು ಗೌರವ ಸಲ್ಲಿಸಿದರು. ಇದನ್ನೂ ಓದಿ: ರಾಷ್ಟ್ರೀಯ ನಿರುದ್ಯೋಗ ದಿನ ಆಚರಿಸಿದ ಯುವ ಕಾಂಗ್ರೆಸ್

ಸ್ವರ್ಣಿಮ್ ವಿಜಯ ವರ್ಷ:
1971ರಲ್ಲಿ ಭಾರತೀಯ ಶಸ್ತ್ರ ಪಡೆಯು ಪಾಕಿಸ್ತಾನದ ಸೈನ್ಯದ ಮೇಲೆ ನಿರ್ಣಾಯಕ ಹಾಗೂ ಐತಿಹಾಸಿಕ ವಿಜಯವನ್ನು ಪಡೆದಿತ್ತು. ಇದು ಬಾಂಗ್ಲಾ ದೇಶದ ಸೃಷ್ಟಿಗೆ ಸಹ ಕಾರಣವಾಗಿತ್ತು. ಅದಲ್ಲದೆ ಎರಡನೇ ಮಹಾಯುದ್ಧದ ನಂತರ ಅತಿದೊಡ್ಡ ಮಿಲಿಟರಿ ಶರಣಾಗತಿಗೆ ಈ ಯುದ್ದ ಕಾರಣೀಭೂತವಾಗಿತ್ತು. 2020ರ ಡಿಸೆಂಬರ್ 16 ರಿಂದ ರಾಷ್ಟ್ರವು ಭಾರತ -ಪಾಕ್ ಯುದ್ಧದ ಗೆಲುವಿನ 50 ವರ್ಷದ ಸಂಭ್ರಮಾಚರಣೆಯನ್ನು ಈ ಬಾರಿ ಸ್ವರ್ಣಿಮ್ ವಿಜಯ ವರ್ಷ ಎಂಬ ಹೆಸರಿನಲ್ಲಿ ದೇಶದ್ಯಾಂತ ಆಚರಿಸಲಾಗುತ್ತಿದೆ.

ಯುದ್ಧದಲ್ಲಿ ಹುತಾತ್ಮರಾದವರನ್ನು ಸ್ಮರಿಸಲು, ವಿಜಯಕ್ಕೆ ಕಾರಣರಾದವರನ್ನು ಗೌರವಿಸಲು ಮತ್ತು ವಿಜಯದ ಆಚರಣೆಯ ಸಾಂಕೇತಿಕವಾಗಿ ಭಾರತೀಯ ರಕ್ಷಣಾಪಡೆಗಳಿಂದ ಸ್ವರ್ಣಿಮ್ ವಿಜಯ ವರ್ಷ ವೆಂದು ಆಚರಿಸಲು ಪ್ರಧಾನಿ ಮೋದಿಯವರು ಕರೆ ನೀಡಿ, ಒಂದು ವರ್ಷದ ಕಾರ್ಯಕ್ರಮಗಳಿಗೆ ಡಿಸೆಂಬರ್ 16 ರಂದು ಮೋದಿಯವರು ವಿಜಯ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದ್ದರು. ಈ ವಿಜಯಜ್ಯೋತಿಯು ಭಾರತದಾದ್ಯಂತ ಸಂಚರಿಸುತಿದ್ದು, ಡಿಸೆಂಬರ್ 15 ರಂದು ಈ ಜ್ಯೋತಿ ನವದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ತಲುಪಲಿದೆ. ಇಂದು ಬಂದ ಜ್ಯೋತಿಯು ಸೆಪ್ಟೆಂಬರ್ 24ರ ವರೆಗೆ ಕಾರವಾರದ ಕದಂಬ ನೌಕಾನೆಲೆಯಲ್ಲಿ ಇರಲಿದೆ. ಇದನ್ನೂ ಓದಿ: ವ್ಯಾಕ್ಸಿನ್‌ ಭಾರತ ಮಹಾನ್‌ – 9 ಗಂಟೆಯಲ್ಲಿ 2 ಕೋಟಿಗೂ ಅಧಿಕ ಮಂದಿಗೆ ಲಸಿಕೆ!

Share This Article
Leave a Comment

Leave a Reply

Your email address will not be published. Required fields are marked *