ನೀರಿಗಾಗಿ ಕೂಡಲಸಂಗಮದಿಂದ ರಾಜಭವನಕ್ಕೆ ರೈತರ ಪಾದಯಾತ್ರೆ: ವೈಎಸ್‍ವಿ ದತ್ತಾ

Public TV
2 Min Read

– ಯುಕೆಪಿಯನ್ನ ರಾಷ್ಟ್ರಿಯ ನೀರಾವರಿ ಯೋಜನೆಯಾಗಿ ಘೋಷಿಸಲು ಆಗ್ರಹ
– ದೇವೇಗೌಡರು ಅನುಮತಿ ಕೊಟ್ಟರೆ ನೀರಾವರಿಗಾಗಿ ಪಾದಯಾತ್ರೆ

ರಾಯಚೂರು: ಸಮುದಾಯದ ಹಿತಕ್ಕಾಗಿ ಪಾದಯಾತ್ರೆ ಮಾಡುವ ಬದಲು ರೈತರ ಹಿತಕ್ಕೆ ಹೋರಾಟ ಮಾಡಬೇಕಿದೆ ದೇವೇಗೌಡರು ಅನುಮತಿ ನೀಡಿದರೆ ನೀರಾವರಿಗಾಗಿ ಪಾದಯಾತ್ರೆಗೆ ನಾವು ಸಿದ್ಧರಿದ್ದೇವೆ ಎಂದು ಜೆಡಿಎಸ್ ಮುಖಂಡ ವೈಎಸ್‍ವಿ ದತ್ತಾ ಹೇಳಿದರು.

ಜಿಲ್ಲೆಯ ದೇವದುರ್ಗದಲ್ಲಿ ಆಯೋಜಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೀಸಲಾತಿ ಪಾದಯಾತ್ರೆ ಮಾಡುತ್ತಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಪಾದಯಾತ್ರೆ ಮಾಡಲು ನಾವು ಸಿದ್ಧರಿದ್ದೇವೆ. ಕೃಷ್ಣ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ನೀರಾವರಿ ಯೋಜನೆಯನ್ನಾಗಿ ಘೋಷಣೆ ಮಾಡಬೇಕು. ಸುಪ್ರೀಂ ಕೋರ್ಟ್ ನಲ್ಲಿ ಎಸ್‍ಎಲ್‍ಪಿ ಅರ್ಜಿ ವಿಲೇವಾರಿ ಮಾಡಿ ಯೋಜನೆಯ ಲಾಭ ರೈತರಿಗೆ ಸಿಗುವಂತೆ ಮಾಡುವ ಕಡೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಬಸವ ಜಯಂತಿ ದಿನ ಬಸವಕಲ್ಯಾಣದಿಂದ ಬೆಂಗಳೂರಿನ ರಾಜ ಭವನದವರೆಗೆ ಪಾದಯಾತ್ರೆ ಮಾಡೋಣ. ಕೇಂದ್ರ ಸರ್ಕಾರ ಕೃಷ್ಣ ಮೇಲ್ದಂಡೆ ಯೋಜನೆ ಲಾಭ ರೈತರಿಗೆ ಸಿಗುವಂತೆ ಮಾಡಲು ಆಗ್ರಹಿಸೋಣ. ಪಾದಯಾತ್ರೆಯನ್ನು ಉದ್ಘಾಟಿಸುವ ಅರ್ಹತೆಯಿರುವ ಏಕೈಕ ವ್ಯಕ್ತಿ ಮಾಜಿ ಪ್ರಧಾನಿ ದೇವೇಗೌಡ. ದೇವೇಗೌಡರು ಅನುಮತಿ ನೀಡಿದರೆ ಪಾದಯಾತ್ರೆಗೆ ಎಲ್ಲ ರೈತರು ಸಿದ್ಧರಾಗೋಣ ಎಂದರು.

ದೇವೇಗೌಡರಿಗೆ ಲಿಂಗಾಯತ ವಿರೋಧಿ ಪಟ್ಟ ಕಟ್ಟಲಾಗಿದೆ. ಜೇನು ತುಪ್ಪದ ಬಾಟಲಿ ಮೇಲೆ ಕಿಡಿಗೇಡಿಗಳು ವಿಷದ ಬಾಟಲಿ ಅಂತ ಸ್ಟಿಕರ್ ಅಂಟಿಸಿದಂತೆ, ಉತ್ತಮ ಕೆಲಸ ಮಾಡಿದ ದೇವೇಗೌಡರಿಗೆ ಲಿಂಗಾಯತ ವಿರೋಧಿ ಪಟ್ಟ ಕಟ್ಟಲಾಗಿದೆ ಎಂದು ವೈಎಸ್‍ವಿ ದತ್ತಾ ಸಮಾವೇಶದಲ್ಲಿ ವಿಷಾದ ವ್ಯಕ್ತಪಡಿಸಿದರು.

ದೇವೇಗೌಡರು ಜಿಲ್ಲೆಗೆ ಎನ್‍ಆರ್‍ಬಿಸಿ ತಂದಿದ್ದಕ್ಕೆ ದೇವದುರ್ಗದ ಗಾಣಧಾಳ ಗ್ರಾಮದ ರೈತ ಪ್ರಭಾಕರ್ ರೆಡ್ಡಿ ದೇವೇಗೌಡರ ಪ್ರತಿಮೆ ಮಾಡಿ ಪೂಜಿಸುತ್ತಿದ್ದಾರೆ. ಆ ರೈತನ ಅಭಿಮಾವೇ ಇಂದಿನ ಕಾರ್ಯಕ್ರಮ ಆಯೋಜನೆಗೆ ಕಾರಣವಾಗಿದೆ ಎಂದು ದತ್ತಾ ಹೇಳಿದರು.

ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಸಂಘಟನೆಗಾಗಿ ಆಯೋಜಿಸಿದ್ದ ಸಮಾವೇಶದಲ್ಲಿ ದೇವದುರ್ಗ ತಾಲೂಕಿನ ನೂತನ ಅಧ್ಯಕ್ಷರ ಪದಗ್ರಹಣ ನಡೆಯಿತು. ಬುಡ್ಡನಗೌಡ ಪಾಟೀಲ್ ನೂತನ ತಾಲೂಕಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಸಮಾವೇಶದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಶಾಸಕರಾದ ವೆಂಕಟರಾವ್ ನಾಡಗೌಡ, ವೆಂಕಟಪ್ಪ ನಾಯಕ್, ಕೋನರೆಡ್ಡಿ, ಬಂಡೆಪ್ಪ ಕಾಶಂಪುರ ಸೇರಿಸಂತೆ ಹಲವರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *