ಕಾಂಗ್ರೆಸ್‌ನಿಂದಲೇ ರಾಜಣ್ಣ ಉಚ್ಚಾಟನೆ? – ಆಪ್ತನನ್ನು ಉಳಿಸಲು ಸಿಎಂ ಕಸರತ್ತು

By
1 Min Read

ಬೆಂಗಳೂರು: ರಾಜೀನಾಮೆ ನೀಡಿರುವ ಕೆಎನ್‌ ರಾಜಣ್ಣ (KN Rajanna) ಕಾಂಗ್ರೆಸ್‌ ಪಕ್ಷದಿಂದಲೇ (Congress Party) ಉಚ್ಚಾಟನೆ ಆಗುವ ಸಾಧ್ಯತೆಯಿದೆ.

ಹೌದು. ಮತಗಳ್ಳತನಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ರಾಜಣ್ಣ ವಿರುದ್ಧ ಹೈಕಮಾಂಡ್‌ (High Command) ಕೆಂಡಾಮಂಡಲವಾಗಿದ್ದು ಉಚ್ಚಾಟನೆ ಮಾಡುವಂತೆ ಸೂಚಿಸಿದೆ.

ಇಂದು ಈ ಸೂಚನೆ ಬಂದ ಹಿನ್ನೆಲೆಯಲ್ಲಿ ಆರಂಭದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ರಾಜಣ್ಣ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಈಗ ಉಚ್ಚಾಟನೆ ಸಂಬಂಧ ಹೈಕಮಾಂಡ್‌ ನಾಯಕರನ್ನು ಸಿಎಂ ಮನವೊಲಿಸುತ್ತಿದ್ದಾರೆ. ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಕೆಎನ್ರಾಜಣ್ಣ ರಾಜೀನಾಮೆ

 

ಎಐಸಿಸಿ ಕಾರ್ಯದರ್ಶಿ ಕೆಸಿ ವೇಣುಗೋಪಾಲ್‌ ಮತ್ತು ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣ್‌ದೀಪ್‌ ಸುರ್ಜೇವಾಲಾ ಜೊತೆ ಸಿದ್ದರಾಮಯ್ಯ ಮಾತುಕತೆ ನಡೆಸುತ್ತಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಸಿಎಂ ಮನವೊಲಿಕೆಗೆ ಹೈಕಮಾಂಡ್‌ ನಾಯಕರು ಒಪ್ಪದೇ ಇದ್ದರೆ ಸಿದ್ದರಾಮಯ್ಯನವರ ಆಪ್ತ ರಾಜಣ್ಣ ಕಾಂಗ್ರೆಸ್‌ನಿಂದ ಉಚ್ಚಾಟನೆಯಾಗಲಿದ್ದಾರೆ.

ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನ ಸಮರವನ್ನು ಕರ್ನಾಟಕದಿಂದಲೇ ಕಾಂಗ್ರೆಸ್‌ ಆರಂಭಿಸಿ ದೇಶವ್ಯಾಪಿ ಪ್ರತಿಭಟನೆ ನಡೆಸಲು ಮುಂದಾಗಿದೆ. ಈ ಹೋರಾಟ ಟೇಕಾಫ್‌ ಆಗುವಾಗಲೇ ಕರ್ನಾಟಕದಲ್ಲಿರುವ ನಮ್ಮದೇ ಸರ್ಕಾರದ ಮಂತ್ರಿ ರಾಹುಲ್‌ ಗಾಂಧಿ ಆರೋಪಕ್ಕೆ ತಿರುಗೇಟು ಎನ್ನುವಂತೆ ಹೇಳಿಕೆ ನೀಡಿದ್ದು ಪಕ್ಷಕ್ಕೆ  ಮುಜುಗರ ತಂದಿದೆ.

ರಾಹುಲ್ ಗಾಂಧಿ ಅವರ ಹೋರಾಟವನ್ನು ಅವಮಾನಿಸುವಂತ ರಾಜಣ್ಣ ಮಾತನಾಡಿದ್ದಾರೆ. ರಾಹುಲ್‌ ಆದೇಶದಂತೆ ರಾಜಣ್ಣ ಕೂಡಲೇ ರಾಜೀನಾಮೆ ನೀಡಬೇಕೆಂದು ಸುರ್ಜೇವಾಲಾ ಸಿಎಂ ಸಿದ್ದರಾಮಯ್ಯಗೆ ಸೂಚನೆ ನೀಡಿದ್ದರು. ಈ ಸೂಚನೆಯ ಬೆನ್ನಲ್ಲೇ ರಾಜಣ್ಣ ಪುತ್ರ ರಾಜೇಂದ್ರ ಮೂಲಕ ರಾಜೀನಾಮೆ ಪತ್ರವನ್ನು ಸಿಎಂಗೆ ಸಲ್ಲಿಸಿದ್ದು ರಾಜೀನಾಮೆ ಅಂಗೀಕಾರವಾಗಿದೆ.

Share This Article