ಪ್ರತಿಭಟನೆಗೆ ಬಂದವರೇ ರಸ್ತೆ ಸರಿಮಾಡಿದ್ರು

Public TV
1 Min Read

ಕಾರವಾರ: ಮಳೆಯಿಂದ ಹೊಂಡ, ಗುಂಡಿಗಳಾದ ರಸ್ತೆ ಸರಿಪಡಿಸಿ ಎಂದು ಪ್ರತಿಭಟನೆಗೆ ಬಂದ ಗ್ರಾಮಸ್ಥರೇ ತಮ್ಮೂರಿನ ರಸ್ತೆ ಸರಿಪಡಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಉದ್ಯಮ ನಗರದಲ್ಲಿ ನಡೆದಿದೆ.

ಅಧಿಕ ಮಳೆಯಿಂದ ಉದ್ಯಮ ನಗರದ ಯಲ್ಲಾಪುರ ತಟಗಾರ ರಸ್ತೆ ಗುಂಡಿಗಳು ಬಿದ್ದು ಸಂಪೂರ್ಣ ಹಾನಿಯಾಗಿತ್ತು. ಆದ್ದರಿಂದ ಇದರ ದುರಸ್ತಿಗೆ ಲೋಕೋಪಯೋಗಿ ಇಲಾಖೆಯಿಂದ ಹಣ ಕೂಡ ಮಂಜೂರಾಗಿತ್ತು. ಆದರೇ ಮಳೆ ನೆಪ ಹೇಳಿ ಅಧಿಕಾರಿಗಳು ರಸ್ತೆ ಸರಿಪಡಿಸಿರಲಿಲ್ಲ. ಹೀಗಾಗಿ ಈ ಊರಿನ ಜನ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಹ ನೀಡಿದ್ದರು. ಗ್ರಾಮಸ್ಥರ ಮನವಿಗೆ ಅಧಿಕಾರಿಗಳು ಮಾತ್ರ ಸ್ಪಂದಿಸಿರಲಿಲ್ಲ. ಇದನ್ನೂ ಓದಿ:ರಿಪೇರಿ ಮಾಡಿಸದ ರಸ್ತೆಯಲ್ಲಿ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ

ಈ ಹಿನ್ನೆಲೆಯಲ್ಲಿ ಕೋಪಗೊಂಡ ಗ್ರಾಮಸ್ಥರು ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ಆದರೂ ಕೂಡ ಗ್ರಾಮಸ್ಥರಿಗೆ ಅಧಿಕಾರಿಗಳು ಸ್ಪಂದಿಸಲೇ ಇಲ್ಲ. ಅಧಿಕಾರಿಗಳು ಇಂದು ರಸ್ತೆ ರಿಪೇರಿ ಮಾಡಿಸುತ್ತಾರೆ. ನಾಳೆ ರಿಪೇರಿ ಮಾಡಿಸುತ್ತಾರೆ ಎಂದು ಕಾಯುತ್ತಿದ್ದ ಜನರು ಬೇಸತ್ತು, ಕೊನೆಗೆ ತಾವೇ ರಸ್ತೆ ಸರಿಪಡಿಸಿದ್ದಾರೆ.

ನಿರ್ಲಕ್ಷ್ಯ ತೋರಿದ ಅಧಿಕಾರಿಗಳು ಇದ್ದು ಪ್ರಯೋಜನವಿಲ್ಲ ಎಂದು ಅರಿತು ಜನರೇ ತಮ್ಮೂರಿನ ರಸ್ತೆಗಳನ್ನು ಸರಿಪಡಿಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ರಸ್ತೆ ದುರಸ್ಥಿ ಕಾರ್ಯಕ್ಕೆ ಸರ್ಕಾರ ಹಣ ನೀಡಿದ್ದರೂ ಅಧಿಕಾರಿಗಳು ಮಾತ್ರ ಕಾಮಗಾರಿ ಮಾಡಿಲ್ಲ. ಜನರ ಸಮಸ್ಯೆಗೆ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *