ಕಂದನನ್ನ ಬಿಟ್ಟು ಕೊನೆಗೂ ಕಣ್ಣೀರಲ್ಲೇ ವಿದಾಯ ಹೇಳಿ ಹೊರಟಿತು ತಾಯಿಯಾನೆ!

Public TV
2 Min Read

ಹಾಸನ: ಕಂದಾ..ಕಂದಾ ಎದ್ದೇಳು.. ಬಾ ಹಾಲುಣಿಸುವೆ.. ಅಂತ ಮೃತಪಟ್ಟ ಕಂದನ ಮುಂದೆ ಕಣ್ಣೀರುಡುತ್ತಿದ್ದ ತಾಯಿಯಾನೆ ಕೊನೆಗೂ ಕಂದನನ್ನು ಬಿಟ್ಟು ಕಣ್ಣೀರುಡುತ್ತಲೇ ಹೊರಟಿದೆ.

ಈ ಮೂಲಕ ಎರಡು ದಿನಗಳಿಂದ ನಿರಂತರ ರೋಧನದ ಬಳಿಕ ನೋವಿನ ವಿದಾಯ ಹೇಳಿದೆ. ಹುಟ್ಟಿದ ಕೂಡಲೇ ಮೃತಪಟ್ಟ ತನ್ನ ಕಂದನ ಬಳಿ ತಾಯಿಯಾನೆ ಎರಡು ದಿನಗಳ ಕಾಲ ಕಾವಲು ನಿಂತಿದ್ದ ದೃಶ್ಯ ಎಲ್ಲರ ಮನಕಲಕುವಂತಿತ್ತು. ಎರಡು ದಿನಗಳಿಂದ ತನ್ನ ಕಂದನನ್ನು ಎಬ್ಬಿಸಲು ಪ್ರಯತ್ನಿಸಿದೆ. ಆದ್ರೆ ಇದೀಗ ಅದು ಸಾಧ್ಯವಾಗುತ್ತಿಲ್ಲ ಅಂತ ತಾಯಿಯಾನೆ ಕಣ್ಣೀರುಡುತ್ತಲೇ ತನ್ನ ದಾರಿ ಹಿಡಿದಿದೆ.


ಅರಣ್ಯ ಇಲಾಖೆ ಸಿಬ್ಬಂದಿ ಮೃತ ಮರಿಯಿಂದ ತಾಯಿಯನ್ನ ಬೇರ್ಪಡಿಸಲು ಹರಸಾಹರಪಟ್ಟಿದ್ದಾರೆ. ಮರಿ ಮೃತಪಟ್ಟು ಎರಡು ದಿನಗಳಾದ್ದರಿಂದ ಅದರ ಮೃತದೇಹ ಕೊಳೆಯಲು ಶುರುವಾಗಿತ್ತು. ಇಂದು ಮರಿಯಾನೆ ಶವ ಪರೀಕ್ಷೆ ಬಳಿಕ ಅಂತ್ಯ ಸಂಸ್ಕಾರ ನಡೆಯಲಿದೆ.

ಘಟನೆ ವಿವರ:
ಜಿಲ್ಲೆಯ ಸಕಲೇಶಪುರದಲ್ಲಿ ಕೊತ್ತನಹಳ್ಳಿ ಬಳಿ ಭತ್ತದ ಗದ್ದೆಯಲ್ಲಿ ಆನೆಯೊಂದು ಮರಿ ಆನೆಗೆ ಜನ್ಮ ನೀಡಿತ್ತು. ಆದರೆ ಕಾರಣವೇನು ಗೊತ್ತಿಲ್ಲ ಹುಟ್ಟಿದ ಕೂಡಲೆ ನವಜಾತ ಗಂಡು ಮರಿ ಮೃತಪಟ್ಟಿದೆ. ಇದರ ಅರಿವಿಲ್ಲದೆ ತಾಯಿ ಆನೆ ತನ್ನ ಮಗುವಿನ ಮೃತದೇಹವನ್ನು ಬಿಟ್ಟು ಕದಲದೆ ಎದ್ದೇಳಿಸಲು ಪ್ರಯತ್ನಿಸಿದೆ. ಅಷ್ಟೇ ಅಲ್ಲದೇ ತನ್ನ ಸಂಗಡಿಗ ಆನೆಯ ರೋಧನೆ ಕಂಡು ಇತರೆ 12 ಕ್ಕೂ ಹೆಚ್ಚು ಆನೆಗಳ ದಂಡು ತಾಯಿಯಾನೆಯನ್ನ ಬಿಟ್ಟುಹೋಗದೆ ತಮ್ಮ ಮಮತೆಯನ್ನೂ ಕೂಡ ತೋರಿದ್ದವು.

ರಾತ್ರಿ ಆಹಾರವನ್ನು ಅರಸಿಕೊಂಡ ಬಂದ ಈ ಆನೆಗಳ ದಂಡಿನಲ್ಲಿ ತಾಯಿ ಆನೆ ಮರಿಯಾನೆಗೆ ಜನ್ಮ ನೀಡಿದೆ. ತಾಯಿ ಆನೆಗೆ ಮರಿಯಾನೆ ಮೃತಪಟ್ಟ ವಿಚಾರ ಗೊತ್ತಿತ್ತೋ ಅಥವಾ ಇಲ್ಲವೋ ನಮಗೆ ತಿಳಿದಿಲ್ಲ. ಆದರೆ ತನ್ನ ಮಗುವಿನ ದೇಹವನ್ನು ಅಲ್ಲಿಂದ 200 ಮೀಟರವರೆಗೆ ಎಳೆದುಕೊಂಡು ಹೋಗಿದೆ. ಮರಿಗೆ ಜನ್ಮ ನೀಡಿದ ಕೂಡಲೆ ಆನೆ ತನ್ನ ಮರಿಗೆ ಹಾಲನ್ನು ಉಣಿಸಬೇಕು. ಇಲ್ಲವಾದಲ್ಲಿ ಸಹಜವಾಗಿ ತಾಯಿ ಆನೆಗೆ ನೋವು ಆರಂಭವಾಗುತ್ತದೆ. ಹಾಗಾಗಿ ತಾಯಿ ಆನೆ ತನ್ನ ಮಗುವನ್ನು ಏಳಿಸಲು ಪ್ರಯತ್ನಿಸಿದೆ. ಈ ರೀತಿಯ ತಾಯಿ ಮಮತೆ ಕೇವಲ ಮನುಷ್ಯರಲ್ಲಷ್ಟೆ ಅಲ್ಲ ಪ್ರಾಣಿಗಳಲ್ಲೂ ಇರುತ್ತೆ ಎಂದು ಪಶುವೈದ್ಯ ಮುರಳಿ ಅವರು ಹೇಳಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

https://www.youtube.com/watch?v=w4uLCIzzI98

Share This Article
Leave a Comment

Leave a Reply

Your email address will not be published. Required fields are marked *