– ಪರೀಕ್ಷೆ ಮುಗಿದ ಗಂಟೆಯಲ್ಲೇ ಓಎಂಆರ್ ಶೀಟ್ ಅಪ್ಲೋಡ್

ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಆಯೋಜಿಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (CET) ಮೊದಲ ದಿನವಾದ ಗುರುವಾರ (ಏ.23) ಅತ್ಯಂತ ಸುಗಮವಾಗಿ ನಡೆದಿದೆ.

ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ಅವರು ಮಾಹಿತಿ ನೀಡಿದ್ದು, ರಾಜ್ಯದ 745 ಕೇಂದ್ರಗಳಲ್ಲಿ ನಡೆದ ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನ ವಿಷಯಗಳ ಪರೀಕ್ಷೆಗೆ ಶೇ.96ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದರು. ಕೊನೆಕ್ಷಣದಲ್ಲಿ ಪ್ರವೇಶ ಪತ್ರ ಇಲ್ಲದೆ ಪರದಾಡಿದ ಹಾಗೂ ನಿಗದಿತ ಪರೀಕ್ಷಾ ಕೇಂದ್ರಕ್ಕೆ ಹೋಗದೇ ಬೇರೊಂದು ಕೇಂದ್ರಕ್ಕೆ ಹೋಗಿ ಚಡಪಡಿಸುತ್ತಿದ್ದ ಅಭ್ಯರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡಿ, ಪರೀಕ್ಷೆ ಬರೆಸುವಲ್ಲಿಯೂ ನಮ್ಮ ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಪ ರೀಕ್ಷೆಗೆ ಹಾಜರಾಗಿದ್ರೂ ಗೈರು ಅಂತ ತೋರಿಸಿ ಅಂಧ ವಿದ್ಯಾರ್ಥಿನಿ ಫೇಲ್ ಮಾಡಿ ಶಿಕ್ಷಣ ಇಲಾಖೆ ಯಡವಟ್ಟು


ಮಹಾಲಕ್ಷ್ಮಿ ಲೇಔಟ್ನ ಬಿಜಿಎಸ್ ಪಿಯು ಕಾಲೇಜಿನಲ್ಲಿ ಪರೀಕ್ಷೆ ಬರೆಯಬೇಕಿದ್ದ ಅನ್ವಿ ಸೋಜನ್ ಎಂಬಾತ ಕೆಂಗೇರಿ ಸಮೀಪದ ಬಿಜಿಎಸ್ ಗ್ಲೋಬಲ್ ಕಾಲೇಜಿಗೆ ಹೋಗಿದ್ದರು. ಪುನಃ ಅವರು ಮಹಾಲಕ್ಷ್ಮಿ ಲೇಔಟ್ ಕಾಲೇಜಿಗೆ ಹೋಗಲು ತಡವಾಗುತ್ತದೆ ಎನ್ನುವ ಕಾರಣಕ್ಕೆ ಗ್ಲೋಬಲ್ ಕಾಲೇಜಿನಲ್ಲೇ ವಿಶೇಷವಾಗಿ ವ್ಯವಸ್ಥೆ ಮಾಡಿಸಿ ಪರೀಕ್ಷೆ ಬರೆಸಲಾಗಿದೆ. ಇದೇ ರೀತಿ ಸಾಗರದ ಕಾಲೇಜಿನಲ್ಲಿ ಪರೀಕ್ಷೆ ಬರೆಯಬೇಕಿದ್ದ ಚಿನ್ಮಯಿ ಎಂಬಾತ ಶಿವಮೊಗ್ಗದ ಸೈನ್ಸ್ ಫೀಲ್ಡ್ ಕಾಲೇಜಿಗೆ ಹೋಗಿದ್ದರು. ವಿಷಯ ತಿಳಿದ ನಂತರ ಕಾಲೇಜಿನ ಪ್ರಾಂಶುಪಾಲರು ಅಲ್ಲೇ ಇದ್ದ ವೀಕ್ಷಕರ ಕಾರಿನಲ್ಲಿ ಆ ಅಭ್ಯರ್ಥಿಯನ್ನು ಸಾಗರಕ್ಕೆ ಕಳುಹಿಸಿ, ಪರೀಕ್ಷೆ ಬರೆಯಲು ನೆರವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ನೇತೃತ್ವದಲ್ಲಿ ಸಿಸಿಟಿವಿ ಕ್ಯಾಮರಾ ಮೂಲಕ ಮೇಲ್ವಿಚಾರಣೆ ಮಾಡಲಾಗಿದೆ. ಬೆಂಗಳೂರಿನ ಕೆಇಎ ಕಚೇರಿಯಲ್ಲಿ ಸ್ಥಾಪಿಸಿದ್ದ ಕಮಾಂಡ್ ಸೆಂಟರ್ನಲ್ಲಿ ಬೆಂಗಳೂರು ಹಾಗೂ ಕಲಬುರಗಿ ಜಿಲ್ಲೆಯ ಪರೀಕ್ಷಾ ಕೇಂದ್ರಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, ಮೇಲ್ವಿಚಾರಣೆ ನಡೆಸಲಾಗಿದೆ. ಕೆಇಎ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಜೆ.ಗದ್ಯಾಳ್ ಅವರು ಕೂಡ ಪರೀಕ್ಷಾ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸಿದರು.ಇದನ್ನೂ ಓದಿ: ಸ್ಟ್ರೆಚರ್ನಲ್ಲಿ ಮಲಗಿ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಕುಸುಮಾ ಫಸ್ಟ್ ಕ್ಲಾಸ್ನಲ್ಲಿ ಪಾಸ್
ನಿನ್ನೆ ಅರ್ಜಿ ಹಾಕಿದವರಿಗೂ ಇಂದು ಪರೀಕ್ಷೆ ಭಾಗ್ಯ:
ಅನಾರೋಗ್ಯ, ಶುಲ್ಕ ಕಟ್ಟಲು ಹಣ ಇರಲಿಲ್ಲ, ಅಪ್ಪ ಓದಬೇಡ ಅಂದ್ರು, ತಾಯಿ ತೀರಿಕೊಂಡರು. ಹೀಗೆ ನಾನಾ ಕೌಟುಂಬಿಕ ಕಾರಣಗಳಿಂದಾಗಿ ಅರ್ಜಿ ಹಾಕದೆ ಪರಿತಪಿಸುತ್ತಿದ್ದ ನೂರಕ್ಕೂ ಹೆಚ್ಚು ಮಂದಿ ಮೊನ್ನೆ ಅರ್ಜಿ ಸಲ್ಲಿಸಿ, ಇವತ್ತು ಪರೀಕ್ಷೆ ಬರೆದಿದ್ದಾರೆ.
ಇದು ಆಶ್ಚರ್ಯ ಆದರೂ ಸತ್ಯ. ಇದೇ ಮೊದಲ ಬಾರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾನವೀಯ ನೆಲೆ ಮೇಲೆ ಈ ರೀತಿಯ ಸಮಸ್ಯೆ ಹೇಳಿಕೊಂಡು ಬಂದವರಿಗೆ ಕೊನೆಕ್ಷಣದಲ್ಲಿ ಬೆಂಗಳೂರು ನಗರದಲ್ಲೇ ಒಂದು ಪರೀಕ್ಷಾ ಕೇಂದ್ರ ಸ್ಥಾಪಿಸಿ ಅಲ್ಲಿ ಪರೀಕ್ಷೆ ಬರೆಯಲು ನೆರವಾಗಿದೆ. ನಿನ್ನೆ ಕೂಡ 13 ಮಂದಿ ಅರ್ಜಿ ಸಲ್ಲಿಸಿ ಇವತ್ತು ಪರೀಕ್ಷೆ ಬರೆದಿದ್ದಾರೆ. ಇಷ್ಟೇ ಅಲ್ಲ ಇಂದು ಬೆಳಿಗ್ಗೆ 9:30ಕ್ಕೆ ಅರ್ಜಿ ಸಂಖ್ಯೆ ಇಲ್ಲದ ಕಾರಣಕ್ಕೆ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಆಗಲಿಲ್ಲ ಎಂದು ಕೆಇಎ ಸಹಾಯವಾಣಿಗೆ ಕರೆ ಮಾಡಿದ 15 ಮಂದಿಗೆ ಪ್ರವೇಶ ಪತ್ರ ಡೌನ್ಲೋಡ್ ಮಾಡಿ, ಪರೀಕ್ಷೆ ಬರೆಯಲು ನೆರವಾಗಿದ್ದೇವೆ ಎಂದು ತಿಳಿಸಿದ್ದಾರೆ.
ಈ ರೀತಿ ಕೊನೆ ಕ್ಷಣದಲ್ಲಿ ಬಂದರೂ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡುತ್ತಾರೆ ಎನ್ನುವುದು ರೂಢಿಯಾಗಬಾರದು. ಈ ಬಗ್ಗೆ ಪೋಷಕರು ಎಚ್ಚರವಹಿಸಬೇಕು. ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಮೇಲೆ ನಿಗಾ ಇಟ್ಟು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸುವ ಹಾಗೆ ಮಾಡಬೇಕು. ಕೊನೆಕ್ಷಣದಲ್ಲಿ ಬಂದು ಅರ್ಜಿ ಸಲ್ಲಿಸಿ, ನಂತರ ಪರೀಕ್ಷೆ ಬರೆಸಲು ವ್ಯವಸ್ಥೆ ಮಾಡುವುದು ಸವಾಲಿನ ಕೆಲಸ ಎಂದು ಹೇಳಿದ್ದಾರೆ.
ಪರೀಕ್ಷೆ ಮುಗಿದ ಗಂಟೆಯಲ್ಲೇ ಓಎಂಆರ್ ಶೀಟ್ ಅಪ್ಲೋಡ್:
ಇನ್ನೂ ಸಿಇಟಿ ಪರೀಕ್ಷೆ ಮುಗಿದ ಒಂದು ಗಂಟೆಯಲ್ಲೇ ಹುಬ್ಬಳ್ಳಿ-ಧಾರವಾಡದ ಓಎಂಆರ್ ಶೀಟ್ಗಳನ್ನು ಸ್ಕ್ಯಾನ್ ಮಾಡಿ, ಕೆಇಎ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಬೆಂಗಳೂರಿನ ಓಎಂಆರ್ ಸೀಟ್ ಗಳನ್ನು ಅಪ್ಲೋಡ್ ಮಾಡುವ ಕೆಲಸ ಪ್ರಗತಿಯಲ್ಲಿದೆ. ಓಎಂಆರ್ ಶೀಟ್ಗಳು ಪರೀಕ್ಷಾ ಕೇಂದ್ರದಿಂದ ಬಂದ ತಕ್ಷಣವೇ ಅಪ್ಲೋಡ್ ಮಾಡಲಾಗುತ್ತಿದೆ.
ಇದೇ ಮೊದಲ ಬಾರಿಗೆ ಬೆಂಗಳೂರು ಹೊರತುಪಡಿಸಿ ಧಾರವಾಡದಲ್ಲಿ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಉಳಿದ ಜಿಲ್ಲೆಗಳ ಓಎಂಆರ್ ಶೀಟ್ಗಳು ಬೆಂಗಳೂರಿನ ಕೆಇಎ ಕಚೇರಿಗೆ ಬಂದ ತಕ್ಷಣ ಸ್ಕ್ಯಾನ್ಮಾಡಿ ಅಪ್ಲೋಡ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಸಿಇಟಿ ಬರೆಯಲು ಬಂದ ವಿದ್ಯಾರ್ಥಿನಿಯರ ಮೂಗುತಿಗೆ ಗಮ್ ಟೇಪ್ ಅಂಟಿಸಿದ ಸಿಬ್ಬಂದಿ

