Explainer | ವೈಟ್‌ ಬಾಲ್‌ ಕ್ರಿಕೆಟ್‌ – ಟೀಂ ಇಂಡಿಯಾ ನಾಯಕತ್ವಕ್ಕೆ ಹೆಚ್ಚಿದ ಕೂಗು, ಅಯ್ಯರ್‌ಗೆ ಹೆಚ್ಚಿನ ಬೆಂಬಲ!

5 Min Read

ಸಿಎಲ್‌ಗೆ ವಿರುದ್ಧವಾಗಿ ಶುರುವಾದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಕ್ರಿಕೆಟ್‌ ಟೂರ್ನಿ ಇಂದು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿ ಬೆಳೆದುನಿಂತಿದೆ. ಉದಯೋನ್ಮುಖ ಪ್ರತಿಭೆಗಳಿಗೆ ದೊಡ್ಡ ವೇದಿಕೆಯಾಗಿದೆ. ಇದರ ಯಶಸ್ಸು ದೇಶದಲ್ಲಿ ಇತರ ಕ್ರೀಡೆಗಳ ಬೆಳವಣಿಗೆಗೆ ಸ್ಫೂರ್ತಿಯಾಗಿದೆ. 2008 ರಲ್ಲಿ ಶುರುವಾದ ಟಿ20 ಮಾದರಿಯ ಕ್ರಿಕೆಟ್‌ ಲೀಗ್‌ 18 ಆವೃತ್ತಿಗಳನ್ನ ಯಶಸ್ವಿಯಾಗಿ ಪೂರೈಸಿದ್ದು, ಇದೇ ಮಾರ್ಚ್‌ 28 ರಂದು 19ನೇ ಆವೃತ್ತಿಗೆ ಪದಾರ್ಪಣೆ ಮಾಡಲು ಸಜ್ಜಾಗಿದೆ. ಪ್ರತಿ ವರ್ಷವೂ ಈ ಟೂರ್ನಿಯಲ್ಲಿ ಪಾಕ್ಗೊಳ್ಳುವ ಯುವ ಪ್ರತಿಭೆಗಳು ಅದ್ಭುತ ಪ್ರದರ್ಶನ ನೀಡುತ್ತಾ ಟೀಂ ಇಂಡಿಯಾದಲ್ಲಿ ಅವಕಾಶ ಪಡೆದುಕೊಳ್ಳುವ ತವಕದಲ್ಲಿದ್ದರೆ, ಟೀಂ ಕ್ಯಾಪ್ಟನ್‌ಗಳು ರಾಷ್ಟ್ರೀಯ ತಂಡದ ನಾಯಕತ್ವದ ಮೇಲೆ ಕಣ್ಣಿಟ್ಟಿರುತ್ತಾರೆ.

- Advertisement -

- Advertisement -

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಕ್ಯಾಪ್ಟನ್ಸಿ ಎಂದಾಕ್ಷಣ ತಟ್ಟನೆ ನೆನಪಾಗುವ ಹೆಸರುಗಳೆಂದ್ರೆ, ಕಪಿಲ್ ದೇವ್, ಮೊಹಮ್ಮದ್ ಅಝರುದ್ದೀನ್, ಸೌರವ್ ಗಂಗೂಲಿ, ಎಂ.ಎಸ್‌ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹೆಸರುಗಳು. ಸದ್ಯ ಭಾರತ ತಂಡದ ಏಕದಿನ ಮತ್ತು ಟಿ20 ಕ್ರಿಕೆಟ್‌ ತಂಡವನ್ನ ಯುವ ಆಟಗಾರ ಶುಭಮನ್‌ ಗಿಲ್‌ ಮುನ್ನಡೆಸುತ್ತಿದ್ದು, ಟಿ20 ನಾಯಕತ್ವ ಸೂರ್ಯಕುಮಾರ್‌ ಯಾದವ್‌ ಅವರ ಹೆಗಲ ಮೇಲಿದೆ. ಆದ್ರೆ ವಯೋಮಿತಿಯ ಕಾರಣದಿಂದ ಬಿಸಿಸಿಐ ಸೂರ್ಯಕುಮಾರ್‌ ಅವರ ಬದಲಿಗೆ ಹೊಸ ನಾಯಕತ್ವದ ಹುಡುಕಾಟದಲ್ಲಿದೆ. ಈ ಮಧ್ಯೆ ಐಪಿಎಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ (Punjab Kings) ತಂಡವನ್ನ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಶ್ರೇಯಸ್‌ ಅಯ್ಯರ್‌ ಹೆಸರು ಕೇಳಿಬಂದಿದೆ.

- Advertisement -

19ನೇ ಆವೃತ್ತಿಯ ಐಪಿಎಲ್‌ನಲ್ಲಿ ಅಯ್ಯರ್‌ (Shreyas Iyer) ಅವರ ಬ್ಯಾಟಿಂಗ್‌ ಶೈಲಿ, ಫೀಲ್ಡ್‌ನಲ್ಲಿಅವರ ನಾಯಕತ್ವದ ಗುಣಗಳನ್ನು ಕಂಡ ಕ್ರಿಕೆಟ್ ಅಭಿಮಾನಿಗಳು ಹಾಗೂ ಕ್ರಿಕೆಟ್ ಪರಿಣಿತರು ಶ್ರೇಯಸ್ ಅಯ್ಯ‌ರ್ ಅವರು ಮುಂಬರುವ ದಿನಗಳಲ್ಲಿ ಭಾರತ ಕ್ರಿಕೆಟ್ ತಂಡದ ವೈಟ್‌ ಬಾಲ್‌ ಕ್ಯಾಪ್ಟನ್‌ ಆಗಬೇಕು ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಕಡೆ ಉತ್ತಮ ಕಂಬ್ಯಾಕ್‌ ಮಾಡುತ್ತಿರುವ ಶುಭಮನ್‌ ಗಿಲ್‌ (Shubman Gill) ಅವರ ಹೆಸರನ್ನೂ ಕ್ಯಾಪ್ಟನ್ಸಿ ರೇಸ್‌ನಲ್ಲಿ ಎಳೆದು ತಂದಿದ್ದಾರೆ.

- Advertisement -

ನಾಯಕರಾದವರು ಆಟಗಾರರು ಕುಗ್ಗಿದಾಗ ಅಥವಾ ಎಡವಿದಾಗ ಅವರನ್ನು ಹುರಿದುಂಬಿಸಬೇಕು. ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೇ ಆಟಗಾರರನ್ನ ವಿಶ್ವಾಸಕ್ಕೆ ಪಡೆದುಕೊಳ್ಳಬೇಕು. ಆ ಕೆಲಸವನ್ನ ಶ್ರೇಯಸ್ ಅಯ್ಯರ್ ಉತ್ತಮವಾಗಿಯೇ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅಯ್ಯರ್‌ ಅವರ ಹೆಸರು ಕ್ಯಾಪ್ಟನ್ಸಿ ರೇಸ್‌ನಲ್ಲಿ ಬರೋದಕ್ಕೆ ಹಲವು ಕಾರಣಗಳಿವೆ. ಐಪಿಎಲ್‌ನಲ್ಲಿ ವಿವಿಧ ಫ್ರಾಂಚೈಸಿಗಳಲ್ಲಿ ಆಡಿರುವ ಶ್ರೇಯಸ್‌ ನಾಯಕನಾಗಿಯೂ ಯಶಸ್ವಿಯಾಗಿ ತಂಡಗಳನ್ನ ಮುನ್ನಡೆಸಿದ್ದಾರೆ. 2020 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕತ್ವ ವಹಿಸಿದ್ದ ಅಯ್ಯರ್‌, ತಂಡವನ್ನ ಮೊದಲ ಬಾರಿಗೆ ಫೈನಲ್‌ ತಲುಪಿಸಿದ ಸಾಧನೆ ಮಾಡಿದ್ದರು. 2024ರ ಆವೃತ್ತಿಯಲ್ಲಿ ಕೆಕೆಆರ್‌ ತಂಡದ ನಾಯಕನಾಗಿ ಪ್ರಶಸ್ತಿ ಗೆದ್ದುಕೊಟ್ಟಿದ್ದರು. 2025 ರಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದ ನಾಯಕತ್ವ ವಹಿಸಿದ ಮೊದಲ ಆವೃತ್ತಿಯಲ್ಲೇ ತಂಡವನ್ನ ಫೈನಲ್‌ವರೆಗೆ ಕರೆದುಕೊಂಡು ಹೋಗಿದ್ದರು. ಈ ಬಾರಿಯ ಐಪಿಎಲ್‌ನಲ್ಲೂ ಅವರ ನಾಯಕತ್ವದ ಪಂಜಾಬ್ ತಂಡವು ಆಡಿರುವ 6 ಪಂದ್ಯಗಳಲ್ಲಿ ಒಂದೇ ಒಂದು ಸೋಲನ್ನೂ ನೋಡದೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹೀಗಾಗಿ ಶ್ರೇಯಸ್‌ ಅಯ್ಯರ್‌ ಅವರನ್ನೇ ಟೀಂ ಇಂಡಿಯಾಕ್ಕೆ ವೈಟ್‌ಬಾಲ್‌ ಕ್ರಿಕೆಟ್‌ನ ನಾಯಕನಾಗಿ ಮಾಡುವ ಒತ್ತಾಯಗಳು ಕೇಳಿಬಂದಿವೆ.

ಇದ್ದಕ್ಕಿದ್ದಂತೆ ಕಂಬ್ಯಾಕ್‌ ಮಾಡಿದ ಗಿಲ್‌
ಇನ್ನೂ ಬಿಸಿಸಿಐ ಟಿ20 ಕ್ರಿಕೆಟ್‌ಗೆ ಹೊಸ ನಾಯಕತ್ವ ಹುಡುಕಾಡುತ್ತಿದ್ದ ಎನ್ನುವ ಸುದ್ದಿ ಹರಿದಾಡುತ್ತಿದ್ದಂತೆ, ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಶುಭಮನ್‌ ಗಿಲ್‌ ಗುಡ್‌ ಕಂಬ್ಯಾಕ್‌ ಮಾಡಿದ್ದಾರೆ. ಪ್ರಸ್ತುತ ಆಡಿರುವ 5 ಪಂದ್ಯಗಳಲ್ಲಿ 151.42 ಸ್ಟ್ರೈಕ್‌ರೇಟ್‌ನಲ್ಲಿ 265 ರನ್‌ ಗಳಿಸಿದ್ದಾರೆ. ಇದರಲ್ಲಿ 3 ಅರ್ಧಶತಕಗಳೂ ಸೇರಿದ್ದು, ಆರೇಂಜ್‌ ಕ್ಯಾಪ್‌ ರೇಸ್‌ನಲ್ಲಿರುವ 3ನೇ ಆಟಗಾರನಾಗಿದ್ದಾರೆ. ಹೀಗಾಗಿ ಗಿಲ್‌ ಅಭಿಮಾನಿಗಳು ಮೂರು ಆವೃತ್ತಿಗಳಿಗೆ ಒಬ್ಬರೇ ನಾಯಕನನ್ನಾಗಿ ಮಾಡುವಂತೆ ಗಿಲ್‌ ಅವರ ಹೆಸರನ್ನೂ ಪ್ರಸ್ತಾಪಿಸಿದ್ದಾರೆ.

ನಾಯಕ-ಆಟಗಾರನಾಗಿ ಅಯ್ಯರ್‌ ಸಕ್ಸಸ್‌
ತಂಡ ಸಂಕಷ್ಟದಲ್ಲಿದ್ದಾಗ ತಾನೇ ಜವಾಬ್ದಾರಿ ತೆಗೆದುಕೊಂಡು, ಅಗತ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಅಯ್ಯರ್ ಅವರದ್ದು. ಅದಕ್ಕೆ ತಾಜಾ ಉದಾಹರಣೆ. ಇದೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದದ ಪಂದ್ಯ. 196 ರನ್‌ಗಳ ಬೃಹತ್ ಗುರಿ ಬೆನ್ನಟ್ಟುವಾಗ 35 ಎಸೆತಗಳಲ್ಲಿ 65 ರನ್ ಸಿಡಿಸಿದ ಅವರು ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಹಾಗಾಗಿ ಅವರು ನಾಯಕತ್ವದ ಜೊತೆಗೆ ಬ್ಯಾಟರ್ ಆಗಿಯೂ ಯಶಸ್ವಿಯಾಗುತ್ತಿದ್ದಾರೆ. ಇದರ ಜೊತೆಗೆ ಅವರು ಕ್ಷೇತ್ರ ರಕ್ಷಣೆಯ ವಿಷಯದಲ್ಲಿ ಉಳಿದ ಆಟಗಾರರಿಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ. ಅದಕ್ಕೆ ಉದಾಹರಣೆಯಾಗಿ, ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರ ಕ್ಯಾಚ್ ಅನ್ನು ಅಯ್ಯರ್ ಪಡೆದುಕೊಂಡ ರೀತಿ.

ಯುವಪಡೆಯನ್ನ ಮುನ್ನಡೆಸುವ ಜವಾಬ್ದಾರಿ
ಒಂದು ಕಾಲದಲ್ಲಿ ಯುವರಾಜ್‌ ಸಿಂಗ್‌, ಇರ್ಫಾನ್‌ ಪಠಾಣ್‌, ಕ್ರಿಸ್‌ ಗೇಲ್‌, ಆಡಂ ಗಿಲ್ಕ್ರಿಸ್ಟ್, ಮಹೇಲ ಜಯವರ್ಧನೆ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರಂತೆ ಅಂತಾರಾಷ್ಟ್ರೀಯ ಖ್ಯಾತಿಯ ಕ್ರಿಕೆಟಿಗರಿಂದ ಕೂಡಿರುತ್ತಿದ್ದ ಪಂಜಾಬ್‌ ಕಿಂಗ್ಸ್‌ ಈಗ ನೋಡಿದ್ರೆ ಯುವ ಪಡೆಯನ್ನ ಹೊಂದಿದೆ. ಅಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿರುವ ಆಟಗಾರರಿಲ್ಲ. ತಂಡವು ದೇಶೀಯ ಹಾಗೂ ಸ್ಥಳೀಯ ಆಟಗಾರರಿಂದ ಕೂಡಿದೆ. ಉದಾಹರಣೆಗೆ, ಪ್ರಭ್‌ಸಿಮ್ರನ್ ಸಿಂಗ್, ಪ್ರಿಯಾಂಶ್ ಆರ್ಯ, ಶಶಾಂಕ್ ಸಿಂಗ್, ವೈಶಾಕ್ ವಿಜಯ್ ಕುಮಾರ್ ಹೀಗೆ ದೇಶೀಯ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿರುವ ಯುವ ಪ್ರತಿಭೆಗಳೇ ಈ ತಂಡದ ಶಕ್ತಿಯಾಗಿದ್ದಾರೆ. ಇಂತಹ ತಂಡವನ್ನ 2025 ರಿಂದ ಅಯ್ಯ‌ರ್ ಅವರು ಅತ್ಯುತ್ತಮವಾಗಿ ಮುನ್ನಡೆಸುತ್ತಿದ್ದಾರೆ.

ನಾಯಕರಾಗಿ ಶ್ರೇಯಸ್ ಅಯ್ಯರ್ ಸಾಧನೆ
ಐಪಿಎಲ್‌ನಲ್ಲಿ ನಾಯಕನಾಗಿ ಮೂರು ಬೇರೆ ಬೇರೆ ತಂಡಗಳನ್ನು ಫೈನಲ್‌ಗೆ ತೆಗೆದುಕೊಂಡು ಹೋದ ಸಾಧನೆ ಅಯ್ಯರ್ ಮಾಡಿದ್ದಾರೆ. 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್‌ಗೆ ತೆಗೆದುಕೊಂಡು ಹೋಗಿದ್ದರು. 10 ವರ್ಷಗಳ ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನ 2024 ರಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. 2025 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನ ಫೈನಲ್‌ಗೆ ತೆಗೆದುಕೊಂಡು ಹೋಗಿದ್ದರು. ಇದರ ಜೊತೆಗೆ 2019 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಪ್ಲೇ ಆಫ್‌ಗೆ ತಲುಪಿಸಿದ್ದರು. ಐಪಿಎಲ್‌ನಲ್ಲಿ ಅತೀ ಹೆಚ್ಚು ಗೆಲುವಿನ ಫಲಿತಾಂಶ ಹೊಂದಿರುವ ನಾಯಕ ಎಂಬ ದಾಖಲೆ ಕೂಡ ಶ್ರೇಯಸ್ ಅಯ್ಯರ್ ಅವರ ಹೆಸರಿನಲ್ಲಿದೆ. ಅಯ್ಯರ್ ಅವರು 93 ಪಂದ್ಯಗಳಲ್ಲಿ ವಿವಿಧ ತಂಡಗಳನ್ನ ಮುನ್ನಡೆಸಿದ್ದು, ಅದರಲ್ಲಿ 59ರ ಸರಾಸರಿಯಲ್ಲಿ 54 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇದು, ಐಪಿಎಲ್‌ ನಲ್ಲಿ ನಾಯಕನೊಬ್ಬ ಹೊಂದಿರುವ ಅತೀ ಹೆಚ್ಚು ಗೆಲುವಿನ ಸರಾಸರಿಯಾಗಿದೆ.

ಹಬ್ಬಿದ್ದ ವದಂತಿ ನಿಜವಾಗುತ್ತಾ?
2025ರ ಟಿ20 ಏಷ್ಯಾಕಪ್‌ ಟೂರ್ನಿಗೆ ಶ್ರೇಯಸ್‌ ಅಯ್ಯರ್‌ ಅವರನ್ನ‌ ಬಿಸಿಸಿಐ ಆಯ್ಕೆ ಮಾಡದೇ ಇದ್ದಾಗ, ಕ್ರಿಕೆಟ್‌ ತಜ್ಞರು ವ್ಯಾಪಕ ಟೀಕೆ ಮಾಡುತ್ತಿದ್ದರು. ಈ ಬೆನ್ನಲ್ಲೇ ಬಿಸಿಸಿಐ ಶ್ರೇಯಸ್‌ ಅಯ್ಯರ್‌ ಅವರಿಗೆ ಏಕದಿನ ತಂಡದ ನಾಯಕತ್ವ ನೀಡುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂಬ ವದಂತಿ ಹಬ್ಬಿತ್ತು. ಆದ್ರೆ 19ನೇ ಆವೃತ್ತಿಯಲ್ಲೂ ಯಶಸ್ವಿ ಪ್ರದರ್ಶನ ನೀಡುತ್ತಿರುವ ಅಯ್ಯರ್‌ ಟೀಂ ಇಂಡಿಯಾದ ಕ್ಯಾಪ್ಟನ್‌ ಆಗ್ತಾರಾ? ಅಥವಾ ಬಿಸಿಸಿಐ ಗಂಭೀರ್‌ ಮಾತಿಗೆ ಮಣಿದು, ಶುಭಮನ್‌ ಗಿಲ್‌ ಅವರಿಗೇ ಮಣೆ ಹಾಕುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

Share This Article