ಸಂಕಷ್ಟದಲ್ಲಿ ಕರ್ನಾಟಕ – ಶತಕದೊಂದಿಗೆ ಮಯಾಂಕ್‌ ಹೋರಾಟ

2 Min Read

ಹುಬ್ಬಳ್ಳಿ: ರಣಜಿ ಟ್ರೋಫಿ ಫೈನಲಿನಲ್ಲಿ ಜಮ್ಮು ಕಾಶ್ಮೀರದ ವೇಗಿ ಅಕೀಬ್‌ ನಬಿ(Auqib Nabi) ಅವರ ಮಾರಕ ದಾಳಿಗೆ ತತ್ತರಿಸಿ ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕ (Karnataka) ಮಯಾಂಕ್ ಅಗರ್‌ವಾಲ್‌ ಅವರ ಶತಕದ ನೆರವಿನಿಂದ 69 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 220 ರನ್‌ ಗಳಿಸಿದೆ.

ಎರಡನೇ ದಿನ 6 ವಿಕೆಟ್‌ ನಷ್ಟಕ್ಕೆ 527 ರನ್‌ ಹೊಡೆದಿದ್ದ ಜಮ್ಮು ಕಾಶ್ಮೀರ ಇಂದು 57 ರನ್‌ ಹೊಡೆದು 173.1 ಓವರ್‌ಗಳಲ್ಲಿ 584 ರನ್‌ಗಳಿಗೆ ಆಲೌಟ್‌ ಆಯ್ತು. ಕರ್ನಾಟಕದ ಪರವಾಗಿ ಪ್ರಸಿದ್ಧ್‌ ಕೃಷ್ಣ 5 ವಿಕೆಟ್‌ ಪಡೆದರು.

ಬ್ಯಾಟಿಂಗ್‌ ಆರಂಭಿಸಿದ ಕರ್ನಾಟಕ ಆರಂಭದಲ್ಲೇ 13 ರನ್‌ ಹೊಡೆದ ಕೆಎಲ್‌ ರಾಹುಲ್‌ ಔಟಾದರು. ನಂತರ ಬಂದ ನಾಯಕ ದೇವದತ್‌ ಪಡಿಕಲ್‌ 11 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು. ಪಡಿಕಲ್‌ ಔಟಾದ ಬೆನ್ನಲ್ಲೇ ಕರಣ್‌ ನಾಯರ್‌ ಮತ್ತು ರವಿಚಂದ್ರನ್‌ ಸ್ಮರಣ್‌ ಅವರು ಶೂನ್ಯಕ್ಕೆ ಔಟಾದರು.

56 ರನ್‌ ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿದ್ದ ಕರ್ನಾಟಕ 2 ರನ್‌ಗಳಿಸುವಷ್ಟರಲ್ಲಿ 2 ಪ್ರಮುಖ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಸಂಕಷ್ಟದ ಸಮಯದಲ್ಲಿ ಒಂದಾದ ಮಾಯಾಂಕ್‌(Mayank Agarwal) ಮತ್ತು ಶ್ರೇಯಸ್‌ ಗೋಪಾಲ್‌ ಐದನೇ ವಿಕೆಟಿಗೆ 188 ಎಸೆತಗಳಲ್ಲಿ 105 ರನ್‌ ಜೊತೆಯಾಟವಾಡಿ ಸ್ವಲ್ಪ ಚೇತರಿಕೆ ನೀಡಿದರು. ಶ್ರೇಯಸ್‌ ಗೋಪಾಲ್‌ 27 ರನ್‌ಗಳಿಸಿ ಔಟಾದರು. ನಂತರ ಬಂದ ಕೃತಿಕ್ ಕೃಷ್ಣ ಮತ್ತು ಮಾಯಾಂಕ್‌ ಮುರಿಯದ 6ನೇ ವಿಕೆಟಿಗೆ 58 ರನ್‌ ಜೊತೆಯಾಟವಾಡಿ ತಂಡದ ಮೊತ್ತವನ್ನು 220 ರನ್‌ಗಳ ಗಡಿಯನ್ನು ದಾಟಿಸಿದರು.

ಮಾಯಾಂಕ್‌ ಅಗರ್‌ವಾಲ್‌ ಔಟಾಗದೇ 130 ರನ್‌(207 ಎಸೆತ, 17 ಬೌಂಡರಿ), ಕೃತಿಕ್ ಕೃಷ್ಣ ಔಟಾಗದೇ 27 ರನ್‌(75 ಎಸೆತ, 2 ಬೌಂಡರಿ) ಹೊಡೆದು ನಾಲ್ಕನೇಯ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ನಬಿ 3 ವಿಕೆಟ್‌ ಪಡೆದರೆ, ಸುನಿಲ್‌ ಕುಮಾರ್‌ ಮತ್ತು ಯದುವೀರ್‌ ಸಿಂಗ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Share This Article