ರಾಜ್ಯಪಾಲರು 100% ಅಧಿವೇಶನಕ್ಕೆ ಬರ್ತಾರೆ, ಭಾಷಣ ಓದುತ್ತಾರೆ: ಪೊನ್ನಣ್ಣ ವಿಶ್ವಾಸ

1 Min Read

– ಸಂವಿಧಾನದ ಮೇಲೆ ವಿಶ್ವಾಸವಿದ್ದರೆ ಯಾವುದೇ ಸಮಸ್ಯೆ ಬರಲ್ಲ
– ಲೋಕಭವನದ ಎದುರು ಬಿಗಿ ಪೊಲೀಸ್‌ ಭದ್ರತೆ

ಬೆಂಗಳೂರು: ರಾಜ್ಯಪಾಲರು (Governor) 100% ವಿಶೇಷ ಅಧಿವೇಶನಕ್ಕೆ ಬರುತ್ತಾರೆ. ಭಾಷಣ ಓದುತ್ತಾರೆ ಎಂದು ಸಿಎಂ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ (AS Ponanna) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ರಾಜ್ಯಪಾಲರಿಗೆ ಇಂದು ಕೂಡ ಮನವರಿಕೆ ಮಾಡಿದ್ದೇವೆ. ನಿನ್ನೆ ಸಿಎಂ ಅವರಿಗೂ ಭೇಟಿ ಮಾಡಿ ಕೆಲವು ಅಂಶ ಚರ್ಚೆ ಮಾಡಿದ್ದೇವೆ. ಕೆಲವು ಅಂಶಗಳನ್ನು ಡಿಲೀಟ್ ಮಾಡಿ ಅಂದಿದ್ರು. ಅದು ಆಗಲ್ಲ ಅಂತ ಹೇಳಿದ್ದೀವಿ. ಈಗ ಮತ್ತೆ ಹೋಗ್ತೇನೆ ನಾನು. ರಾಜ್ಯಪಾಲರು ನೂರಕ್ಕೆ ನೂರು ಅಧಿವೇಶನಕ್ಕೆ ಬರ್ತಾರೆ ಅನ್ನೋ ನಿರೀಕ್ಷೆ, ವಿಶ್ವಾಸ ಇದೆ. ಮತ್ತೊಮ್ಮೆ ಮನವರಿಕೆ ಮಾಡ್ತೇನೆ. ದೆಹಲಿಗೆ ಎಜಿ ಹೋಗಿದ್ದಾರೆ, ಹಿರಿಯ ವಕೀಲರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ನಮ್ಮ ತಯಾರಿ ನಾವೂ ಮಾಡಿಕೊಳ್ತಿದ್ದೇವೆ ಎಂದು ಹೇಳಿದ್ದಾರೆ.

ರಾಜ್ಯಪಾಲರು ಅಂದ್ರೆ ಸ್ವತಂತ್ರನಾ? ರಾಜ್ಯಪಾಲರು ಅಂದ್ರೆ ಸರ್ಕಾರ. ನಾವು ಹೇಳುತ್ತಿರುವುದು ಸಂವಿಧಾನಾತ್ಮಕವಾಗಿ. ರಾಜ್ಯಪಾಲರು ಸಂವಿಧಾನಾತ್ಮಕ ಕರ್ತವ್ಯ ನಿಭಾಯಿಸಬೇಕು. ಕಾನೂನು ಮಾಡಿರೋದು ಸಂಸತ್ತಿನಲ್ಲಿ, ಎಲ್ಲದಕ್ಕೂ ಸಂವಿಧಾನವೇ ಪರಿಹಾರ. ಸಂವಿಧಾನದ ಮೇಲೆ ವಿಶ್ವಾಸ ಇದ್ದರೆ, ಸಾಂವಿಧಾನಿಕ‌ ವ್ಯವಸ್ಥೆಯನ್ನ ರಾಜ್ಯಪಾಲರು ಅರ್ಥ ಮಾಡಿಕೊಂಡರೆ ಬಿಕ್ಕಟ್ಟು ಬರಲ್ಲ ಎಂದು ಅಂತಲೂ ಪೊನ್ನಣ್ಣ ಹೇಳಿದ್ದಾರೆ. ಇದನ್ನೂ ಓದಿ: ಗವರ್ನರ್‌ Vs ಗವರ್ನಮೆಂಟ್‌ | ಇಂಥ ಪರಿಸ್ಥಿತಿ ಬರುತ್ತೆ ಅಂತ ಸಂವಿಧಾನ ಸಭೆಯೂ ಯೋಚಿಸಿರಲಿಲ್ಲ: ಸುರೇಶ್‌‌ ಕುಮಾರ್

ಲೋಕಭವನಕ್ಕೆ ಕಾಂಗ್ರೆಸ್‌ ನಾಯಕರು
ಇನ್ನೂ ರಾಜ್ಯಪಾಲರ ಮನವೊಲಿಸಿ, ಅಧಿವೇಶನಕ್ಕೆ ಕರೆತರಲು ಕೆಲವೇ ಕ್ಷಣಗಳಲ್ಲಿ ಪೊನ್ನಣ ಸೇರಿ ಕಾಂಗ್ರೆಸ್‌ನ ಹಿರಿಯ ನಾಯಕರು ಲೋಕಭವನಕ್ಕೆ ಭೇಟಿ ಕೊಡಲಿದ್ದಾರೆ. ಈ ಹಿನ್ನೆಲೆ ಲೋಕಭವನದ ಮುಂದೆ ಬಿಗಿ ಪೊಲೀಸ್‌ ಭದ್ರತೆಯನ್ನೂ ನಿಯೋಜಿಸಲಾಗಿದೆ. ಇದನ್ನೂ ಓದಿ: ರಾಜ್ಯಪಾಲರ ಜೊತೆ ಸಂಘರ್ಷಕ್ಕೆ ಸಿದ್ಧ – ಕಾನೂನು ಹೋರಾಟಕ್ಕೆ ಮುಂದಾದ ಸರ್ಕಾರ

Share This Article