ನರಳೋಕಾಗ್ತಿಲ್ಲ, ವಿಪರೀತ ಹಿಂಸೆ ಆಗ್ತಿದೆ ಅಂತ ಕಣ್ಣೀರಿಡ್ತಿದ್ರು: ಉಮೇಶ್‌ ಪುತ್ರಿ ಜಯಲಕ್ಷ್ಮಿ ಭಾವುಕ

1 Min Read

– ಬನಶಂಕರಿ ಚಿತಾಗಾರದಲ್ಲಿ ಇಂದೇ ಅಂತ್ಯಕ್ರಿಯೆ

ʻಜಾರಿ ಬಿದ್ದು ಕಾಲು, ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದರು. ಎಡ ಭಾಗಕ್ಕೆ ತೀರ ಪೆಟ್ಟಾಗಿತ್ತು, ಅಲ್ಲದೇ ವಯಸ್ಸಾಗಿದ್ದರಿಂದ ಆಪರೇಷನ್‌ ಮಾಡೋಕಾಗಲಿಲ್ಲ. ಕೊನೇ ದಿನಗಳಲ್ಲಿ ನರಳಾಡೋಕಾಗ್ತಿಲ್ಲ, ಬೇಗ ಹೋಗಿಬಿಡಬೇಕು ಅಂತ ಕಣ್ಣೀರಿಡ್ತಿದ್ರು, ನಾವೇ ಸಾಂತ್ವನ ಹೇಳ್ತಿದ್ವಿʼ ಎಂ.ಎಸ್‌ ಉಮೇಶ್‌ ಅವರ ಪುತ್ರಿ ಜಯಲಕ್ಷ್ಮಿ ಅವರ ಭಾವುಕ ನುಡಿಗಳಿವು.

- Advertisement -

- Advertisement -

ತಂದೆ ನಿಧನದ ಕುರಿತು ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ ಜಯಲಕ್ಷ್ಮಿ ಅವರು, ಅಪ್ಪನಿಗೆ 80 ವರ್ಷ ವಯಸ್ಸಾಗಿದೆ. ಕೊನೆಯ ದಿನಗಳಲ್ಲಂತೂ ತುಂಬಾ ನೋವಿನಿಂದ ಬಳಲುತ್ತಿದ್ದರು, ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ನಿನ್ನೆ ರಾತ್ರಿ ಕೂಡ ಲೋ ಬಿಪಿ ಆಗಿತ್ತು. ಇಂದು ಬೆಳಗ್ಗೆ 8:20ರ ಸುಮಾರಿಗೆ ನಿಧನರಾಗಿದ್ದಾರೆ. ಈಗ ಜೆಪಿ ನಗರದ ನಿವಾಸಕ್ಕೆ ಶಿಫ್ಟ್‌ ಮಾಡಲಾಗ್ತಿದೆ. ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ, ಬಳಿಕ ಅಂತ್ಯಕ್ರಿಯೆ ನಡೆಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಅಣ್ಣಾವ್ರು, ಡಾ.ವಿಷ್ಣುವರ್ಧನ್‌ರೊಂದಿಗೆ ಮರೆಯಲಾಗದ ಅಭಿನಯ – ಉಮೇಶ್‌ ಇನ್ನು ನೆನಪು ಮಾತ್ರ

- Advertisement -

- Advertisement -

ಒಂದು ತಿಂಗಳ ಹಿಂದೆ ಬಿದ್ದು ಫ್ರ್ಯಾಕ್ಚರ್‌ ಆಗಿತ್ತು. ಆಸ್ಪತ್ರೆಗೆ ಕರೆ ತಂದಾಗಿ ಕ್ಯಾನ್ಸರ್‌ 4ನೇ ಹಂತದಲ್ಲಿದ್ದೆ ಅನ್ನೋದು ಗೊತ್ತಾಯ್ತು. ಆಗಿನಿಂದ ಆಸ್ಪತ್ರೆಯಲ್ಲೇ ಅಡ್ಮಿಟ್‌ ಮಾಡಲಾಗಿತ್ತು. ನನ್ನಣ್ಣ ತೀರಿಕೊಂಡು 32 ವರ್ಷ ಆಯ್ತು. ಅಮ್ಮನಿಗೂ 80 ವರ್ಷ ವಯಸ್ಸು, ನಾನೇ ಎಲ್ಲ ನೋಡಿಕೊಳ್ತಿದ್ದೆ ಎಂದು ತಿಳಿಸಿದರು.

ಯಾವುದೇ ಶೂಟಿಂಗ್‌ ಬಾಕಿ ಉಳಿಸಿಕೊಂಡಿಲ್ಲ
ಉಮೇಶ್‌ ಅವರು ತಾವು ವಹಿಸಿಕೊಂಡಿದ್ದ ಎಲ್ಲಾ ಶೂಟಿಂಗ್‌ ಮುಗಿಸಿಕೊಟ್ಟಿದ್ದಾರೆ. ಕೊನೆಯಲ್ಲಿ ʻರಥಸಪ್ತಮಿʼ ಸೀರಿಯಲ್‌ ಪಾರ್ಟ್‌ ಮಾಡಿದ್ರು. ಅದ್ರ ಡಬ್ಬಿಂಗ್‌ ಒಂದು ಬಾಕಿ ಉಳಿಯಿತು. ಇನ್ನೆಲ್ಲ ಶೂಟಿಂಗ್‌ ಮುಗಿಸಿಕೊಟ್ಟಿದ್ದಾರೆ ಅಂತ ಪುತ್ರಿ ಹೇಳಿದರು. ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಾಸ್ಯ ನಟ‌ ಎಂ.ಎಸ್‌ ಉಮೇಶ್ ಇನ್ನಿಲ್ಲ

ಇಂದೇ ಅಂತ್ಯಕ್ರಿಯೆ
12.30ರ ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದ್ದು, ಸಂಜೆ 5:30ರ ಬಳಿಕ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಕ್ಕು ನಲಿಸಿ ಮರೆಯಾದ ಉಮೇಶ್‌ – ಬ್ರಾಹ್ಮಣ ಸಂಪ್ರದಾಯದಂತೆ ಇಂದೇ ಅಂತ್ಯಕ್ರಿಯೆ: ನಟಿ ಶಶಿಕಲಾ

Share This Article