ಹಾಡಹಗಲೇ ದರೋಡೆ – ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಾಳಾಗಿದೆ: ನಿಖಿಲ್ ಕುಮಾರಸ್ವಾಮಿ ಕಿಡಿ

3 Min Read

– ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷವಾಗಿ ಉಳಿಯೋದಿಲ್ಲ
 ಜಾಹೀರಾತು ಕೊಟ್ಟಿದ್ದು, ಭ್ರಷ್ಟಾಚಾರ ಮಾಡಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆ

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಸಾಮಾನ್ಯ ಜನರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.‌

ಬೆಂಗಳೂರಿನಲ್ಲಿ (Bengaluru) ಹಾಡುಹಗಲೆ ನಡೆದ ದರೋಡೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ‌ನೀಡಿದ ಅವರು, 2.5 ವರ್ಷಗಳಿಂದ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಗಾಗಿದೆ. ಜನರಲ್ಲಿ ಆತಂಕ ಶುರುವಾಗಿದೆ‌. ಸಾಮಾನ್ಯ ‌ಜನರಿಗೆ ರಕ್ಷಣೆ ಇಲ್ಲದಂತೆ ಆಗಿದೆ. ಸಾಕಷ್ಟು ಪ್ರಕರಣಗಳು ನಿತ್ಯ ನೋಡ್ತೀವಿ. ಗೃಹ ಸಚಿವರಿಗೆ ಏನೇ ಕೇಳಿದ್ರು ಗೊತ್ತಿಲ್ಲ ಅಂತಾರೆ. ಇದು ದಿಕ್ಕು-ದೆಸೆ ಇಲ್ಲದ ಸರ್ಕಾರ ಆಗಿದೆ ಅಂತ ವಾಗ್ದಾಳಿ ನಡೆಸಿದರು.

ರಾಜ್ಯದ ಜನತೆ ಆತಂಕ ಪಡೋ ವಿಚಾರ ಇದು. ಗೃಹ ಸಚಿವರು ಏನ್ ಉತ್ತರ ಕೊಡ್ತಾರೆ ನೋಡೊಣ. ಆಡಳಿತ ವೈಫಲ್ಯಗಳು ಇದ್ದಾಗ, ಸರ್ಕಾರದಲ್ಲಿ ರೌಡಿಗಳು, ದಡೋರೆ, ಕಳ್ಳತನ ಮಾಡೋರಿಗೆ ಪಾಠ ಕಲಿಸೋದಿಲ್ಲ ಅಲ್ಲಿವರೆಗೂ ಅವರು ಮೋಟಿವೇಶನ್ ಆಗಿ ಇದನ್ನ ತಗೋತಾರೆ. ಇದಕ್ಕೆ ಕಡಿವಾಣ ಹಾಕೋ ಕೆಲಸ ಮಾಡಬೇಕು. ಗೃಹ ಸಚಿವರು ಗಂಭೀರವಾಗಿ ತೆಗೆದುಕೊಳ್ಳಬೇಕು. ಘಟನೆ ಬಗ್ಗೆ ಸಂಪೂರ್ಣವಾಗಿ ಉತ್ತರ ಕೊಡಬೇಕು. ಮುಂದೆ ಹೀಗೆ ಆಗದಂತೆ ಹೇಗೆ ಎಚ್ಚರವಹಿಸುತ್ತಾರೆ ಎಂದು ಸರ್ಕಾರ ಉತ್ತರ ಕೊಡಬೇಕೆಂದು ಆಗ್ರಹಿಸಿದ್ದಾರೆ.

ಜಾಹೀರಾತು ಕೊಟ್ಟಿದ್ದು, ಭ್ರಷ್ಟಾಚಾರ ಮಾಡಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆ
ಜಾಹಿರಾತು ಕೊಟ್ಟಿದ್ದು, ಭ್ರಷ್ಟಾಚಾರ ಮಾಡಿದ್ದೇ‌ ಕಾಂಗ್ರೆಸ್ ‌ಪಕ್ಷದ 2.5 ವರ್ಷದ ಸಾಧನೆ. ಸರ್ಕಾರಕ್ಕೆ 2.5 ವರ್ಷ ಪೂರೈಕೆ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ‌ನೀಡಿದ ಅವರು, 2.5 ವರ್ಷದಲ್ಲಿ ಈ ಸರ್ಕಾರದ ಸಾಧನೆ ಏನು ಇಲ್ಲ.ಜಾಹಿರಾತು ‌ಕೊಟ್ಟಿದ್ದೇ ಈ‌ ಸರ್ಕಾರದ ಸಾಧನೆ. ಜಾಹಿರಾತಿಗೆ ಸೀಮಿತ ಆಗಿರೋ ಸರ್ಕಾರ ಇದು.7 ಕೋಟಿ ಕನ್ನಡಿಗರ ತೆರಿಗೆ ಹಣ ಜಾಹೀರಾತಿಗೆ ಸ್ವೇಚ್ಚಾಚಾರವಾಗಿ ಬಳಕೆ ಆಗ್ತಿದೆ ಅಂತ‌ ಕಿಡಿಕಾರಿದರು.

ನುಡಿದಂತೆ ನಡೆದಿದ್ದೇವೆ ಅಂತ ಬಾಯಲ್ಲಿ ಹೇಳೋದು ಬೇಡ. ಏನ್ ಮಾಡಿದ್ದೀರಾ ತೋರಿಸಲಿ. ಭ್ರಷ್ಟಾಚಾರ ಎಷ್ಟು ಅಗಿದೆ. ತನ್ನ ಬೆನ್ನು ತಾನೇ ತಟ್ಟಿಕೊಳ್ಳೋದಲ್ಲ. ಜನರ ಮನಸು ಗೆಲ್ಲುವ ಕೆಲಸ ಈ ಸರ್ಕಾರ ಮಾಡಿಲ್ಲ. ಅವರ ಆತ್ಮಸಾಕ್ಷಿಗೆ ಅವರೇ ಪ್ರಶ್ನೆ ಮಾಡಿಕೊಳ್ಳಲಿ. ಈ ಸರ್ಕಾರದ ಮೇಲೆ ಜನರಿಗೆ ನೆಮ್ಮದಿ, ಸಮಾಧಾನ ಇಲ್ಲ ಅಂತ ಕಿಡಿಕಾರಿದರು

ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷವಾಗಿ ಉಳಿಯೋದಿಲ್ಲ
ಕಾಂಗ್ರೆಸ್ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷವಾಗಿ ಉಳಿಯೋದಿಲ್ಲ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಕರ್ನಾಟಕದಲ್ಲಿ 2028 ಚುನಾವಣೆ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಹಾರದ ಚುನಾವಣೆ ಫಲಿತಾಂಶ NDAಯ ಶಕ್ತಿ ಪ್ರದರ್ಶನ. ಬಿಹಾರದ ಜನತೆ NDAಯನ್ನ ಒಪ್ಪಿಕೊಂಡಿದ್ದಾರೆ. ಬಿಹಾರ ಚುನಾವಣೆ ಫಲಿತಾಂಶದ ಮೂಲಕ ಇದು ಕಾಂಗ್ರೆಸ್ ಪತನದ ದಿನಗಳು ಅಂತ ಜನರು ಸಂದೇಶ ಕೊಟ್ಟಿದ್ದಾರೆ. ಈ‌ ಸಂದೇಶ ಕಾಂಗ್ರೆಸ್ ನಾಯಕರಿಗೆ ‌ನಿದ್ದೆಗೆಡಿಸಿದೆ. 2028 ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಥಿತಿ ಎಲ್ಲಿಗೆ ಹೋಗುತ್ತೆ ಅಂತ ಕಾಂಗ್ರೆಸ್‌ಗೆ ಆತಂಕ ಶುರುವಾಗಿದೆ‌ ಅಂತ ಲೇವಡಿ ಮಾಡಿದ್ದಾರೆ.

JDS ಪಕ್ಷದ ಬಗ್ಗೆ ವಿಧಾನಸಭೆಯಲ್ಲಿ ಕಾಂಗ್ರೆಸ್ ನಾಯಕರು ಮಾತಾಡಿದ್ರು. 18 ಇದೆ ಒಂದಂಕಿಗೆ ಬಂದು ಜೆಡಿಎಸ್ ನಿಲ್ಲುತ್ತದೆ ಎಂದು ಲೇವಡಿ ಮಾಡಿದ್ರು. ಈಗ ಒಂದಂಕಿಗೆ ಕಾಂಗ್ರೆಸ್ ಬಂದು ನಿಂತಿದೆ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷದ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು. ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷವಾಗಿ ಉಳಿಯೋದಿಲ್ಲ. ಈಗಲಾದರೂ ಕಾಂಗ್ರೆಸ್‌ನವರು ಎಚ್ಚೆತ್ತುಕೊಳ್ಳಬೇಕು. ಇನ್ನೊಂದು ಪಕ್ಷವನ್ನು ಲಘುವಾಗಿ ತಗೊಳ್ಳೋದು, ಅವಹೇಳನ ಮಾಡೋದು ಬಿಡಬೇಕು. ಜನತೆ ಅಧಿಕಾರ ಕೊಟ್ಟಾಗ ಕಾಂಗ್ರೆಸ್ ಅವರು ತಗ್ಗಿ ಬಗ್ಗಿ ಅಧಿಕಾರ ನಡೆಸಬೇಕು ಅಂತ ಪರೋಕ್ಷವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಕಾಲೆಳೆದರು.

Share This Article