ಮುಂಬೈ To ದುಬೈ ಮಧ್ಯೆ ಸಮುದ್ರದೊಳಗೆ ರೈಲು! – ದೇಶದ ಭವಿಷ್ಯವನ್ನೇ ಬದಲಿಸಲಿದೆಯಾ ಈ ಪ್ಲ್ಯಾನ್‌?

Public TV
3 Min Read

ಸಾಮಾನ್ಯವಾಗಿ ಬಸ್ಸು, ಕಾರುಗಳ ಪ್ರಯಾಣಕ್ಕಿಂತ ರೈಲಿನಲ್ಲಿ ದೀರ್ಘ ಪ್ರವಾಸ ಮಾಡುವ ಮಜಾನೇ ಬೇರೆ.. ಇದು ಕೇವಲ ಅಗ್ಗದ ಸಾರಿಗೆ ಮಾತ್ರವಲ್ಲ, ಆರಾಮದಾಯಕವಾಗಿ ನಿಗದಿತ ಸ್ಥಾನವನ್ನ ತಲುಪುತ್ತೆ. ಮಾರ್ಗದಲ್ಲಿ ಜಲಪಾತಗಳ ಸೌಂದರ್ಯ, ಆಳವಾದ ಕಂದಕ, ಹಚ್ಚ ಹಸಿರಿನ ಸೌಂದರ್ಯ ಸೇರಿದಂತೆ ಅನೇಕ ಅದ್ಭುತವಾದ ಪ್ರಾಕೃತಿಕ ಆಕರ್ಷಣೆಗಳು ಕಣ್ಣು ಕುಕ್ಕುವಂತಿರುತ್ತದೆ. ಜೊತೆಯಲ್ಲಿ ಸ್ನೇಹಿತರಿದ್ದರೆ ಹಿತವಾದ ಮಾತುಗಳನ್ನು ಕೇಳುತ್ತಾ ಊರು ಸೇರಿದ್ದೇ ತಿಳಿಯೋದಿಲ್ಲ. ಸಾಮಾನ್ಯ ರೈಲಿನಲ್ಲಿ ಇಷ್ಟೆಲ್ಲಾ ರೋಮಾಂಚಕ ಅನುಭವ ಸಿಗುತ್ತೆ ಅಂದ್ಮೇಲೆ ಇನ್ನೂ ಸಮುದ್ರದೊಳಗೆ ರೈಲಿನಲ್ಲಿ ಪ್ರಯಾಣಿಸಿದ್ರೆ ಅದರ ಅನುಭವ ಹೇಗಿರುತ್ತೆ ಅಲ್ಲವೇ? ಅಬ್ಬಬ್ಬ! ನೀರಿನಾಳದಲ್ಲಿ ಸಾವಿರಾರು ಜಲಚರಗಳನ್ನ ನೋಡುತ್ತಾ ಮಿಂಚಿನ ವೇಗದಲ್ಲಿ ಸಾಗುವ ಅನುಭವ ನೆನೆಸಿಕೊಂಡ್ರೇನೆ ಮೈ ರೋಮಾಂಚನವಾಗುತ್ತೆ.

ಇಂತಹದ್ದೊಂದು ಯೋಜನೆಯನ್ನ ಭಾರತದ ಮನಿ ಕ್ಯಾಪಿಟಲ್‌ ಮುಂಬೈ ಹಾಗೂ ದುಬೈ ನಡುವೆ ಕಾರ್ಯರೂಪಕ್ಕೆ ತರುವ ಕೆಲಸ ನಡೆಯುತ್ತಿದೆ.

ಹೌದು. ಮುಂಬೈನಿಂದ ದುಬೈಗೆ ಸುರಂಗ ಮಾರ್ಗದ ಮೂಲಕ ಸಮುದ್ರದೊಳಗೆ ರೈಲು ಮಾರ್ಗ ನಿರ್ಮಿಸಲು ಸಿದ್ಧತೆ ನಡೆಯುತ್ತಿದೆ. ಸ್ಟಾರ್ಟ್‌ಅಪ್‌, ವ್ಯಾಪಾರ ಯೋಜನೆಗಳಿಗೆ ಹೆಸರುವಾಸಿಯಾಗಿರುವ ಯುಎಇ ಮೂಲದ ನ್ಯಾಷನಲ್‌ ಅಡ್ವೈಸರ್‌ ಬ್ಯೂರೋ ಲಿಮಿಟೆಡ್‌ (ಎನ್‌ಎಬಿಎಲ್‌) ಈ ಯೋಜನೆಯನ್ನ ಪ್ರಸ್ತಾಪಿಸಿದೆ. ಇದು ಭಾರತ ಮತ್ತು ಯುಎಇಯನ್ನು ಅರೇಬಿಯನ್‌ ಸಮುದ್ರದ ಸಂಪರ್ಕಿಸುತ್ತದೆ. ಈಗಾಗಲೇ ಸಿವಿಲ್‌ ಇಂಜಿನಿಯರರು ಇದಕ್ಕೆ ಕೆಲಸ ಮಾಡುತ್ತಿದ್ದು, ಅಂದಾಜು ವೆಚ್ಚ, ಮತ್ತಿತರ ಯೋಜನೆಯ ಕಾರ್ಯಸಾಧ್ಯತೆಗಳನ್ನ ಚರ್ಚಿಸುತ್ತಿದ್ದಾರೆ. ಸದ್ಯಕ್ಕೆ 21 ಶತಕೋಟಿ ಡಾಲರ್‌ ಅಂದಾಜು ವೆಚ್ಚ ಆಗಲಿದೆ ಎಂದು ಅಂದಾಜಿಸಲಾಗಿದೆ.

ಈ ಪರಿಕಲ್ಪನೆಯು ಮೊದಲಿಗೆ 2018ರಲ್ಲಿ ಬಂದಿತ್ತು. ಆದ್ರೆ ಇತ್ತೀಚಿನ ತಿಂಗಳುಗಳಲ್ಲಿ ಅದರ ಚರ್ಚೆ ಮತ್ತೆ ತೀವ್ರಗೊಂಡಿದೆ ಎಂಬುದು ಗಮನಾರ್ಹ. ದುಬೈನ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದಾಗಲೂ ಈ ಬಗ್ಗೆ ಚರ್ಚಿಸಿದ್ದಾರೆ. ಜೊತೆಗೆ ಭಾರತ, ಅಮೆರಿಕ, ಯುಎಇ ನಡುವಿನ ಸಂಬಂಧ, ಆರ್ಥಿಕತೆಯನ್ನು ಅಭಿವೃದ್ಧಿ ಪಡಿಸುವ ಭವಿಷ್ಯದ ಯೋಜನೆಗಳ ಕುರಿತಾಗಿಯೂ ಚರ್ಚಿಸಿದ್ದಾರೆ. ಅಲ್ಲದೇ ಈ ಯೋಜನೆ ಇನ್ನೂ ಪರಿಕಲ್ಪನಾ ಹಂತದಲ್ಲಿದ್ದು, ಅನುಮೋದನೆ ಪಡೆಯಲು ತಯಾರಿ ನಡೆಲಸಾಗುತ್ತಿದೆ ಎಂದು ಯುಎಇ ಪತ್ರಿಕೆ ʻಖಲೀಜ್ ಟೈಮ್ಸ್‌ʼ ವರದಿ ಮಾಡಿದೆ.

ಏನಿದು ನಿರೋಳಗಿನ ರೈಲು ಯೋಜನೆ?
ಅಂದ್ರೆ ನೀರಿನಾಳದಲ್ಲಿ ಸುರಂಗ ಮಾರ್ಗವೊಂದನ್ನು ನಿರ್ಮಿಸಿ ಆ ಮೂಲಕ ರೈಲು ಸಂಪರ್ಕ ಕಲ್ಪಿಸುವುದು. ಭಾರತ ಮತ್ತು ದುಬೈನ ಫುಜೈರಾಗೆ ಅತೀ ವೇಗದ ರೈಲು ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ. ಯುಎಇಯ ನ್ಯಾಷನಲ್ ಅಡ್ವೈಸರ್ ಬ್ಯೂರೋ ಲಿಮಿಟೆಡ್ ಸಂಸ್ಥೆಯು 6 ವರ್ಷಗಳ ಹಿಂದೆ ಅಬುಧಾಬಿಯಲ್ಲಿ ನಡೆದ ಯುಎಇ-ಇಂಡಿಯಾ ಕಾನ್ಕ್ಲೇವ್‌ನಲ್ಲಿ ಈ ಯೋಜನೆಯ ಪರಿಕಲ್ಪನೆಯನ್ನು ಪ್ರಸ್ತಾಪಿಸಿತ್ತು. ಈ ಯೋಜನೆ ಆರ್ಥಿಕತೆಗೆ ಎನರ್ಜಿ ಬೂಸ್ಟರ್‌ ನೀಡುವ ಜೊತೆಗೆ ದ್ವಿಪಕ್ಷೀಯ ವ್ಯಾಪಾರ ಸಂಬಂಧಕ್ಕೆ ಉತ್ತೇಜನ ನೀಡುತ್ತದೆ. ಫುಜೂತಾ ಬಂದರಿನಿಂದ ಭಾರತಕ್ಕೆ ತೈಲವನ್ನು ನೇರವಾಗಿ ರಫ್ತು ಮಾಡಲು ಅನುಕೂಲವಾಗುತ್ತದೆ. ಈ ಯೋಜನೆಯನ್ನು ಪೂರ್ಣಗೊಳಿಸುವ ಉದ್ದೇಶದಿಂದಲೇ ಮುಂಬೈನ ಉತ್ತರಕ್ಕೆ ನರ್ಮದಾ ನದಿಯಿಂದ ಹೆಚ್ಚುವರಿ ನೀರನ್ನು ಹರಿಸಲಾಗುತ್ತದೆ. ಜೊತೆಗೆ ಇದು ಶೀಘ್ರ ಪ್ರಯಾಣಕ್ಕೂ ಅನುಕೂಲ ಮಾಡಿಕೊಡುತ್ತದೆ ಎಂದು ಉದ್ದೇಶಿಸಲಾಗಿದೆ.

ಮಿಂಚಿನಷ್ಟೇ ವೇಗ
ಸಮುದ್ರ ಮಾರ್ಗದಲ್ಲಿ ಹಾದುಹೋಗುವ ಈ ರೈಲು ಮಾರ್ಗ ಸುಮಾರು 2,000 ಕಿಮೀ ವ್ಯಾಪ್ತಿ ಹೊಂದಿರಲಿದೆ. ಅರೇಬಿಯನ್‌ ಸಮುದ್ರದ ಮೇಲ್ಮೈನಿಂದ 20-30 ಮೀಟರ್‌ ಆಳದಲ್ಲಿ ಸುರಂಗ ಮಾರ್ಗದ ಮೂಲಕ ಹಾದುಹೋಗಲಿದೆ. ಇಲ್ಲಿ ರೈಲು ಗಂಟೆಗೆ 600 ರಿಂದ 1 ಸಾವಿರ ಕಿಮೀ ವೇಗದಲ್ಲಿ ಚಲಿಸುತ್ತದೆ. ಜಪಾನ್‌, ಚೀನಾಗಳಲ್ಲಿ ಬುಲೆಟ್‌ಟ್ರೈನ್‌ಗೆ ಬಳಸಿದ ಮ್ಯಾಗ್ಲೆವ್‌ ತಂತ್ರಜ್ಞಾನ ಬಳಸಿ ಟ್ರ್ಯಾಕ್‌ ಮಾಡುವುದರಿಂದ ಇದರ ವೇಗ ಅತಿಹೆಚ್ಚಿನದ್ದಾಗಿಯೇ ಇರುತ್ತದೆ.

ಪ್ರಸ್ತುತ ವಿಮಾನದಲ್ಲಿ ಮುಂಬೈನಿಂದ ದುಬೈಗೆ ಸುಮಾರು 3 ಗಂಟೆ ಪ್ರಯಾಣ ಮಾಡಬೇಕಾಗುತ್ತದೆ. ಈ ಯೋಜನೆ ಪೂರ್ಣಗೊಂಡರೆ ಮುಂಬೈನಿಂದ ದುಬೈಗೆ ಕೇವಲ 2 ಗಂಟೆಗಳಲ್ಲಿ ಪ್ರಯಾಣಿಸಬಹುದು. ಗಾಳಿ ವೇಗಕ್ಕೆ ಸರಿಸಾಟಿಯಾಗಿ ರೈಲು ಚಲಿಸಿದರೂ ಇದರಲ್ಲಿ ಅಪಘಾತ ಸಾಧ್ಯತೆ ತೀರಾ ಕಡಿಮೆ. ಯುಎಇನಿಂದ ಪ್ರಯಾಣಿಕರ ಸಂಚಾರ ಮತ್ತು ಸರಕು ಸಾಗಣೆಯ ವ್ಯವಹಾರ ಎರಡಕ್ಕೂ ಅರೇಬಿಯನ್‌ ಕೊಲ್ಲಿ ಮೂಲಕ ಎಂಟ್ರಿ, ಎಕ್ಸಿಟ್‌ ಇರಲಿದೆ.

ವಿಶ್ವದಲ್ಲಿ ಇಂತಹ ಪ್ರಯೋಗ ನಡೆದಿದೆಯೇ?
ಜಗತ್ತಿನಲ್ಲಿ ನೀರಿನೊಳಗಿನ ರೈಲು ಯೋಜನೆ ಪರಿಕಲ್ಪನೆಯು ಹೊಸದೇನಲ್ಲ. ಇಂಗ್ಲೆಂಡ್‌ ಮತ್ತು ಫ್ರಾನ್ಸ್‌ ನಡುವೆ ನಿರ್ಮಾಣಗೊಳ್ಳುತ್ತಿದೆ. ಇದಕ್ಕಾಗಿ ರೈಲು ಅಳಿ ನಿರ್ಮಾಣ ಮಾಡಲು 1994ರಲ್ಲೇ 50.45 ಕಿಮೀ ಉದ್ದದ ಸುರಂಗ ಮಾರ್ಗ ನಿರ್ಮಿಸಲಾಗಿದೆ. ಸಮುದ್ರದ ಮೇಲ್ಮೈನಿಂದ 75 ಮೀಟರ್‌ ಆಳದಲ್ಲಿ ರೈಲು ಚಲಿಸಲಿದ್ದು, ಯೂರೋಸ್ಟಾರ್ ರೈಲುಗಳು ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ರಷ್ಯಾ ಮತ್ತು ಕೆನಡಾ ನಡುವೆ ಸಂಪರ್ಕ ಕಲ್ಪಿಸುವುದಕ್ಕೂ ಪ್ರಸ್ತಾವನೆ ಕೇಳಿಬಂದಿದೆ.

ಒಟ್ಟಿನಲ್ಲಿ ಅಭಿವೃದ್ಧಿಯ ದಾಪುಗಾಲಿಡುತ್ತಿರುವ ಭಾರತ ಹಲವು ಯೋಜನೆಗಳಲ್ಲಿ ಯಶಸ್ಸನ್ನು ಕಂಡಿದೆ. ಸಾಗರದಲ್ಲಿ ಭೂಸ್ವಾದೀನದಂತಹ ಯಾವುದೇ ಸಮಸ್ಯೆ ಇಲ್ಲವಾದರೂ, ನೀರಿನ ಪರಿಸರ ಮತ್ತು ಜಲಚರಗಳ ಮೇಲೆ ಪರಿಣಾಮ ಬೀರಬಹುದೇ ಎಂಬುದನ್ನು ನೋಡಬೇಕಾಗಿದೆ. ಆದ್ರೆ ಈಗಾಗಲೇ ಅಂಡರ್‌ ವಾಟರ್‌ ಮೆಟ್ರೋ ಯೋಜನೆಯಲ್ಲಿ ಯಶಸ್ಸನ್ನು ಕಂಡಿರುವ ಭಾರತ ನೀರಿನೊಳಗಿನ ರೈಲು ಯೋಜನೆಗಾಗಿ ಯುಎಇ ಜೊತೆಗೆ ಕೈಜೋಡಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

Share This Article