ನಮ್ಮ ಪಕ್ಷದೊಳಗೆ ರಾಮ, ಹಿಂದೂಗಳನ್ನು ದ್ವೇಷಿಸುವ ನಾಯಕರಿದ್ದಾರೆ: ಕಾಂಗ್ರೆಸ್‌ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ

Public TV
2 Min Read

ನವದೆಹಲಿ: ನಮ್ಮ ಪಕ್ಷದೊಳಗೆ ರಾಮ (Rama) ಮತ್ತು ಹಿಂದೂಗಳನ್ನು (Hindu) ದ್ವೇಷಿಸುವ ನಾಯಕರು ಇದ್ದಾರೆ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ (Congress) ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ (Acharya Pramod Krishnam) ಹೇಳಿದ್ದಾರೆ.

ಕಾಂಗ್ರೆಸ್‌ನಲ್ಲಿ ರಾಮನನ್ನು ದ್ವೇಷಿಸುವ ಕೆಲವು ನಾಯಕರು ಇದ್ದಾರೆ ಎಂದು ನನಗೆ ಅನಿಸಿದೆ. ಈ ನಾಯಕರು ಹಿಂದೂ ಪದವನ್ನು ದ್ವೇಷಿಸುತ್ತಾರೆ. ಅವರು ಹಿಂದೂ ಧಾರ್ಮಿಕ ಗುರುಗಳನ್ನು ಅವಮಾನಿಸಲು ಬಯಸುತ್ತಾರೆ. ಅವರು ಪಕ್ಷದಲ್ಲಿ ಹಿಂದೂ ಧಾರ್ಮಿಕ ಗುರುಗಳು ಇರುವುದನ್ನು ಇಷ್ಟಪಡುವುದಿಲ್ಲ ಎಂದು ತಿಳಿಸಿದರು.

ಆಚಾರ್ಯ ಕೃಷ್ಣಂ ಅವರ ಅಭಿಪ್ರಾಯಗಳು ಅಯೋಧ್ಯೆಯ ರಾಮಮಂದಿರ (Ram Mandir) ಲೋಕಾರ್ಪಣೆ ಸಮಾರಂಭಕ್ಕೆ ಕೇವಲ ಎರಡು ತಿಂಗಳ ಮೊದಲು ಬಂದಿರುವುದು ವಿಶೇಷ.  ಇದನ್ನೂ ಓದಿ: ನಾನು‌ ಪಕ್ಷದ ಶಿಸ್ತಿನ ಸಿಪಾಯಿ, ಬೆಂಗ್ಳೂರು ಉತ್ತರಕ್ಕೆ ನನ್ನ ಪುತ್ರನಿಗೆ ಟಿಕೆಟ್ ಕೊಟ್ರೆ ಕೆಲಸ ಮಾಡ್ತೀನಿ: ಅಶೋಕ್‌

ಸನಾತನ ಧರ್ಮದ ಕುರಿತು ಉದಯನಿಧಿ ಸ್ಟಾಲಿನ್ (Udhayanidhi Stalin) ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸನಾತನ ಧರ್ಮದ (Sanatan Dharm) ವಿರುದ್ಧ ಮಾತನಾಡುವವರು ಭಾರತದ ವಿರುದ್ಧವೂ ಇರುತ್ತಾರೆ. ಏಕೆಂದರೆ ಈ ರಾಷ್ಟ್ರವನ್ನು ಸನಾತನಿಗಳು ಇಲ್ಲದೇ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸನಾತನದ ವಿರುದ್ಧ ಮಾತನಾಡುವವರು ರಾವಣನ ವಂಶಸ್ಥರು ಮತ್ತು ಅವರ ವಿನಾಶ ಖಚಿತ ಎಂದು ಅಭಿಪ್ರಾಯಪಟ್ಟರು.

ಸನಾತನ ಸಂಸ್ಥೆಯ ವಿರುದ್ಧ ಮಾತನಾಡುವ ರಾಜಕೀಯ ಪಕ್ಷದ ನಾಯಕರನ್ನು INDIA ಬಣದಿಂದ ಹೊರಹಾಕಬೇಕು ಎಂದು ನಾನು ಮೈತ್ರಿಕೂಟದ ಎಲ್ಲಾ ಹಿರಿಯ ನಾಯಕರಲ್ಲಿ ಮನವಿ ಮಾಡಲು ಬಯಸುತ್ತೇನೆ. ಸನಾತನ ಧರ್ಮವನ್ನು ವಿರೋಧಿಸುವುದನ್ನು ನಿಲ್ಲಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ಹೇಳಿದರು.

ಕಳೆದ ತಿಂಗಳು ಲಕ್ನೋದ ಕಾಂಗ್ರೆಸ್ ನಾಯಕ ಅವರು ಬಿಎಸ್ಪಿ ವರಿಷ್ಠೆ ಮಾಯಾವತಿ (Mayawati) ಅವರನ್ನು ಮೈತ್ರಿಗೆ ಆಹ್ವಾನಿಸುವಂತೆ INDIA ನಾಯಕರಿಗೆ ಸಲಹೆ ನೀಡಿದ್ದರು. ಮಾಯಾವತಿ ಅವರನ್ನು ಒಕ್ಕೂಟಕ್ಕೆ ಸೇರಿಸದೇ ಇದ್ದರೆ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದರು.

 

ಉತ್ತರ ಪ್ರದೇಶದಲ್ಲಿ ಮಾಯಾವತಿ 18%-22% ಮತದಾರರ ಮೇಲೆ ಪ್ರಭಾವ ಬೀರುವ ನಾಯಕಿಯಾಗಿದ್ದಾರೆ. ಮಾಯಾವತಿ ಇಲ್ಲದೆ INDIA ರಚನೆಯಾದರೆ ಅದನ್ನು ‘ಮಹಾಮೈತ್ರಿ’ ಎಂದು ಕರೆಯಲು ಸಾಧ್ಯವಿಲ್ಲ. ಬಿಜೆಪಿಯನ್ನು ಸೋಲಿಸಬೇಕಾದರೆ ಸಮಾಜವಾದಿ ಪಕ್ಷ, ರಾಷ್ಟ್ರೀಯ ಲೋಕದಳ, ಕಾಂಗ್ರೆಸ್ ಜೊತೆಗೆ ಮಾಯಾವತಿ ಜೊತೆ ಮೈತ್ರಿ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದರು.

ಆಚಾರ್ಯ ಪ್ರಮೋದ್ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಪಡೆದು ಲಕ್ನೋದಿಂದ ಸ್ಪರ್ಧಿಸಿದ್ದರು. ಆದರೆ ಬಿಜೆಪಿಯ ರಾಜನಾಥ್ ಸಿಂಗ್ ವಿರುದ್ಧ ಸೋತಿದ್ದರು.

Share This Article