ವಸೂಲಿ ಮಾಡಿಕೊಡುವ ದಂಡದಲ್ಲಿ 75-80% ಕೋರ್ಟ್‌ ಅಭಿವೃದ್ದಿಗೆ ನೀಡಲಿ: ನ್ಯಾ. ಅರವಿಂದ್ ಕುಮಾರ್

2 Min Read

– ರಾಜ್ಯ ಸರ್ಕಾರದ ಕಾನೂನು ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ

ಬೆಂಗಳೂರು: ಕರ್ನಾಟಕ ಸರ್ಕಾರದ (Government of Karnataka) ಕಾನೂನು ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ (Aravind Kumar) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಕೆವಿಕೆಯಲ್ಲಿ ನಡೆದ 22ನೇ ದ್ವೈವಾರ್ಷಿಕ ರಾಜ್ಯಮಟ್ಟದ ನ್ಯಾಯಾಂಗ ಅಧಿಕಾರಿಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ವೇದಿಕೆ ಮೇಲೆ ಕನ್ನಡದಲ್ಲಿ ಮಾತಾಡಿ ಸಿಎಂಗೆ ವ್ಯವಸ್ಥೆ ಬಗ್ಗೆ ಮನವರಿಕೆ ಮಾಡಿದರು.

ನ್ಯಾಯಾಲಯಗಳ ಕಟ್ಟಡ ನಿರ್ಮಾಣಕ್ಕೆ, ನ್ಯಾಯಾಧೀಶರ ನಿವಾಸಗಳ ನಿರ್ಮಾಣ ಮಾಡುವುದು ವಿವಿಧ ಜಿಲ್ಲೆಗಳಲ್ಲಿ ಅತ್ಯವಶ್ಯಕವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಕಳಿಸಿದಾಗ ಮಂದಗತಿಯಲ್ಲಿ ರಾಜ್ಯ ಸರ್ಕಾರಿ ಅಧಿಕಾರಿಗಳು ಅನೇಕ ಬಾರಿ ಗಮನಹರಿಸುತ್ತಾರೆ. ಪ್ರತಿವರ್ಷ ವ್ಯಾಜ್ಯಗಳು ಹೆಚ್ಚು ದಾಖಲಾತಿ ಆಗ್ತಿದೆ. 2023 ರಲ್ಲಿ 17 ಲಕ್ಷ ಇದ್ದು, 2025 ರಲ್ಲಿ 22 ಲಕ್ಷ ಕೇಸ್ ದಾಖಲಾಗಿವೆ. ಹೊಸ ಕಾನೂನುಗಳು ಮಂಡನೆ ಆಗುತ್ತಿದೆ. ಕಾನೂನು ಅಡಿಯಲ್ಲಿ ನ್ಯಾಯ ವಿತರಣೆ ಮಾಡಬೇಕಾಗುತ್ತದೆ. ಮೂಲಸೌಕರ್ಯಗಳು, ನ್ಯಾಯಾಧೀಶರ ನೇಮಕಾತಿ ಬಗ್ಗೆ, ಸರ್ಕಾರಿ ವಕೀಲರ ನೇಮಕದ ಬಗ್ಗೆ ನ್ಯಾಯಾಲಯಗಳು ಪ್ರಸ್ತಾವನೆ ಸಲ್ಲಿಸಿದಾಗ ತಮ್ಮ ಅಧಿಕಾರಿಗಳು ಮಂದಗತಿಯಲ್ಲಿ ಅಥವಾ ಅದರ ಬಗ್ಗೆ ಗಮನಹರಿಸದೇ ಬೇಡಿಕೆಗಳನ್ನ ಕಡಿತಗೊಳಿಸಿ ಅನುಮೋದಿಸಿರೋ ಉದಾಹರಣೆಗಳು ಬೇಕಾದಷ್ಟು ಇವೆ ಅಂತ ಅಸಮಾಧಾನ ಹೊರ ಹಾಕಿದ್ರು.

ಕಳೆದ 2 ವರ್ಷಗಳಲ್ಲಿ ಬೆಂಗಳೂರು (Bengaluru), ಕಲಬುರ್ಗಿ, ಧಾರವಾಡ ಹೈಕೋರ್ಟ್ ನ 666 ಹುದ್ದೆ ಅನುಮೋದನೆಗೆ ಕೇಳಿದಾಗ ತಮ್ಮ ಅಧಿಕಾರಿಗಳು 238 ಹುದ್ದೆಗಳನ್ನ ಮಾತ್ರ ಅನುಮೋದಿಸಿರುತ್ತಾರೆ. ಇದೇ ರೀತಿ ಜಿಲ್ಲಾ ನ್ಯಾಯಾಲಯಗಳಿಗೆ 680 ಹುದ್ದೆ ಕೇಳಿದಾಗ 400 ಹುದ್ದೆ ಅನುಮೋದಿಸಿರುತ್ತಾರೆ ಅಂತ ತಿಳಿಸಿದರು.

ಕಳೆದ 3 ವರ್ಷಗಳಲ್ಲಿ ಹೈಕೋರ್ಟ್ ಮತ್ತು ಜಿಲ್ಲಾ ಕೋರ್ಟ್ ನಿಂದ ದಂಡ ವಸೂಲಿಯಿಂದ ರಾಜ್ಯ ಸರ್ಕಾರಕ್ಕೆ ವಸೂಲಾದ ಕೋರ್ಟ್ ಫೀಸ್, ಪೆನಾಲ್ಟಿ, ಸ್ಟಾಂಪ್ ಡ್ಯೂಟಿ ಬಿಟ್ಟು ಒಟ್ಟು 3 ವರ್ಷಗಳಲ್ಲಿ 2023-24 ರಲ್ಲಿ 376 ಕೋಟಿ, 2024-25 ರಲ್ಲಿ- 439 ಕೋಟಿ,2025-26 ರಲ್ಲಿ 470 ಕೋಟಿ ವಸೂಲಿ ಕೋರ್ಟ್ ಮಾಡಿಕೊಟ್ಟಿದೆ. ಆದ್ರೆ ಸರ್ಕಾರವೂ ಸಿಬ್ಬಂದಿ ವರ್ಗಕ್ಕೆ ಸಂಬಳ ಬಿಟ್ಟು ನ್ಯಾಯಾಲಯದ ಬೇರೆ ಖರ್ಚಿಗೆ ಸರ್ಕಾರ ಕೊಟ್ಟಿರೋ ವೆಚ್ಚ 3 ವರ್ಷಗಳಲ್ಲಿ ಕ್ರಮವಾಗಿ 1.3 ಕೋಟಿ, 40 ಲಕ್ಷ, 137 ಲಕ್ಷ, 141 ಲಕ್ಷ ಮಾತ್ರ. ಕೋರ್ಟ್ ಗಳು ಸರ್ಕಾರಕ್ಕೆ ಕೋಟಿ ಕೋಟಿ ದಂಡ ವಸೂಲಿ ಮಾಡಿಕೊಡುತ್ತಿದ್ದರೂ ಸರ್ಕಾರ ನಮಗೆ ಕೊಡ್ತಿರೋದು ಮಾತ್ರ ಕಡಿಮೆ ಎಂದು ಅಸಮಾಧಾನ ಹೊರ ಹಾಕಿದ ನ್ಯಾಯಮೂರ್ತಿಗಳು, ಸರ್ಕಾರವು, ಕೋರ್ಟ್ ವಸೂಲಿ ಮಾಡಿಕೊಡುವ ದಂಡದ ಫೀಸ್‌ನಲ್ಲಿ 75-80% ನ್ಯಾಯಾಲಯದ ಅಭಿವೃದ್ದಿಗೆ ನೀಡಲಿ ಎಂದು ಒತ್ತಾಯಿಸಿದರು.

ಹೈಕೋರ್ಟ್ ನಿಂದ ಬರುವ ಪ್ರಸ್ತಾವನೆಯನ್ನ ಕಡಿತ ಗೊಳಿಸದೇ ತ್ವರಿತವಾಗಿ ಅನುಮೋದನೆ ಸಿಎಂ ಸಿದ್ದರಾಮಯ್ಯ ನಿರ್ದೇಶನ ನೀಡಬೇಕು. ಈ ಸೌಲಭ್ಯಗಳು ನೀಡಿದಲ್ಲಿ ನಮ್ಮ ನ್ಯಾಯಾಧೀಶರು ಕರ್ನಾಟಕ ರಾಜ್ಯವನ್ನು ಮಾದರಿ ರಾಜ್ಯ ಮಾಡೋದ್ರಲ್ಲಿ ಯಾವುದೇ ಸಂದೇಹವಿಲ್ಲ ಅಂತ ವೇದಿಕೆ ಮೇಲೆ ಸಿಎಂ ಸಿದ್ದರಾಮಯ್ಯಗೆ ತಿಳಿಸಿದರು.

Share This Article