40% ಕಮಿಷನ್ ನಿಲ್ಲದಿದ್ದರೆ ಜನವರಿ 3 ರಿಂದ ಎಲ್ಲಾ ಕಾಮಗಾರಿ ಸ್ಥಗಿತ – ಸರ್ಕಾರಕ್ಕೆ ಗುತ್ತಿಗೆದಾರರಿಂದ ಎಚ್ಚರಿಕೆ

Public TV
4 Min Read

– ಗುತ್ತಿಗೆ ಕಮಿಷನ್ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರಿಗೆ ವಹಿಸಿ: ಕೆಂಪಣ್ಣ
– ಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯ ಹೊರರಾಜ್ಯದವರಿಗೆ ಮಣೆ
– ಕಾಂಗ್ರೆಸ್‌ನವರಿಂದಲೇ ಕಮೀಷನ್ ವ್ಯವಹಾರ ಆರಂಭ

ಬೆಂಗಳೂರು: ಗುತ್ತಿಗೆ ಕಮಿಷನ್ ಪ್ರಕರಣಗಳನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸರ್ಕಾರ ತನಿಖೆಗೆ ವಹಿಸಬೇಕು. ಆಗ ನಾವು ನಮ್ಮ ದಾಖಲೆಗಳನ್ನು ನೀಡುತ್ತೇವೆ. ರಾಜೇಶ್ ಸಿಂಗ್ ನೇತೃತ್ವದಲ್ಲಿ ನಡೆಯುತ್ತಿರುವ ತನಿಖೆಯನ್ನು ನಾವು ಒಪ್ಪುವುದಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರಿಂದ 40% ಕಮಿಷನ್ ತೆಗೆದುಕೊಳ್ಳುವುದು ನಿಲ್ಲದಿದ್ದರೆ ಜ.3ರಂದು ಗುತ್ತಿಗೆದಾರರು ಬೃಹತ್ ಹೋರಾಟ ನಡೆಸುವುದಾಗಿ ತಿಳಿಸಿದರು. ಸರ್ಕಾರ ಈ ಬಗ್ಗೆ ರಾಕೇಶ್ ಸಿಂಗ್ ಅವರ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಿದೆ. ಆದರೆ ನೀರಾವರಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೀತಾ ಇದೆ. ಅದೇ ಇಲಾಖೆಯ ಮುಖ್ಯಸ್ಥ ರಾಕೇಶ್ ಸಿಂಗ್ ಆಗಿದ್ದಾರೆ. ಆದ್ದರಿಂದ ಪ್ರತ್ಯೇಕ ಸಂಸ್ಥೆಯಿಂದ ತನಿಖೆಗೆ ಕೆಂಪಣ್ಣ ಮನವಿ ಮಾಡಿದರು.

ಈ ಬಗ್ಗೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಭೇಟಿಗೆ ಮನವಿ ಮಾಡಿ ಪತ್ರ ಬರೆದಿದ್ದೇವು. ಆದರೆ ಯಡಿಯೂರಪ್ಪ ಭೇಟಿಗೆ ಅವಕಾಶ ಕೊಡಲಿಲ್ಲ. ನಂತರ ಪ್ರಧಾನಿಗೆ ಹಾಗೂ ರಾಜ್ಯಪಾಲರಿಗೂ ಪತ್ರ ಬರೆದಿದ್ದೆವು. ಅವರು ಸ್ಪಂದಿಸಿಲ್ಲ. ನಂತರ ಸರ್ಕಾರ ಬದಲಾಗಿ ಬೊಮ್ಮಾಯಿ ಸಿಎಂ ಆದರು. ಅವರಿಗೂ ಪತ್ರ ಬರೆದು ಭೇಟಿಗೆ ಅವಕಾಶ ಕೇಳಿದೆವು. ಆದರೆ ಬೊಮ್ಮಾಯಿಯವರೂ ಅವಕಾಶ ಕೊಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಗಳ ಭೇಟಿ ಮಾಡಿ ಗುತ್ತಿಗೆಗಳಲ್ಲಿ 40%ಕ್ಕಿಂತ ಹೆಚ್ಚು ಭ್ರಷ್ಟಾಚಾರ ನಡೀತಿದೆ. ನಮ್ಮ ಬಳಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳೂ ಇವೆ. ಸೂಕ್ತ ತನಿಖೆಗೆ ವಹಿಸಿದರೆ ನಮ್ಮ ಬಳಿ ಇರುವ ದಾಖಲೆ ಕೊಡುತ್ತೇವೆ ಎಂದು ತಿಳಿಸಿದ್ದೇವೆ ಎಂದರು.

2019ರಿಂದ ಭ್ರಷ್ಟಾಚಾರ ಹೆಚ್ಚಳ: 2019ರಿಂದ ಗುತ್ತಿಗೆ ಭ್ರಷ್ಟಾಚಾರ ಗಣನೀಯ ಹೆಚ್ಚಾಗಿದೆ. ಮೊದಲೆಲ್ಲ 10%, 15% ಭ್ರಷ್ಟಾಚಾರ ಇತ್ತು. ನಾವು ಗುತ್ತಿಗೆ ಪಡೆಯಲು ಹಣ ಕೊಡಲೇಬೇಕು ಆದರೆ ಇತ್ತೀಚೆಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ನಾವು ಗುತ್ತಿಗೆದಾರರು ಯಾವ ಪಕ್ಷಕ್ಕೂ ಸೇರಿಲ್ಲ. ಭ್ರಷ್ಟಾಚಾರದ ವಿರುದ್ಧ ಸರಿಯಾಗಿ ತನಿಖೆ ನಡೆಯಲಿ ಎಂದು ಒತ್ತಾಯಿಸಿದರು.

ನಮ್ಮ ಬಳಿ ಎಲ್ಲಾ ದಾಖಲೆಗಳು ಇವೆ. ಸರಿಯಾದ ಸಮಯಕ್ಕೆ ನೀಡಲಾಗುವುದು. ನಾವ್ಯಾರು ಕಾಂಗ್ರೆಸ್‌ನ ಗುತ್ತಿಗೆದಾರರು ಅಲ್ಲ. ಎಲ್ಲಾ ಪಾರ್ಟಿಯವರೂ ಇದರಲ್ಲಿ ಭಾಗಿಯಾಗಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಕಾಲದಲ್ಲೂ ಭ್ರಷ್ಟಚಾರ ಇತ್ತು. ಕಾಂಗ್ರೆಸ್‌ನವರಿAದಲೇ ಕಮೀಷನ್ ವ್ಯವಹಾರ ಆರಂಭವಾಗಿದೆ ಎಂದರು.

ಸರ್ಕಾರಕ್ಕೆ ಗಡುವು: ಜನವರಿ 3ರೊಳಗೆ ಸರ್ಕಾರ ನಮ್ಮ ಜತೆ ಮಾತುಕತೆ ನಡೆಸಬೇಕು. ಇಲ್ಲದಿದ್ದರೆ ನಾವು ಜನವರಿ 3 ರಿಂದ ಎಲ್ಲಾ ಕಾಮಗಾರಿ ನಿಲ್ಲಿಸುತ್ತೇವೆ ಜೊತೆಗೆ ರಾಜ್ಯಾದ್ಯಂತ ಕಾಮಗಾರಿ ನಿಲ್ಲಿಸಿ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಗಡುವು ನೀಡಿದರು. ಸರ್ಕಾರ ಮಾತುಕತೆಗೆ ಕರೆಯದಿದ್ದರೆ ನ್ಯಾಯಾಂಗ ಹೋರಾಟ ನಡೆಸುತ್ತೇವೆ. ಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯ ಮಾಡಲಾಗುತ್ತಿದೆ. ಹೊರಗಿನ ಗುತ್ತಿಗೆದಾರರಿಗೆ ಮಣೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.

ಗುತ್ತಿಗೆಗಳಲ್ಲಿ ಕಮೀಷನ್ ಪಡೆದ ಜನಪ್ರತಿನಿಧಿಗಳ ಹೆಸರನ್ನು ಬಹಿರಂಗಪಡಿಲಾಗುವುದಿಲ್ಲ. ಆದರೆ ನಮ್ಮ ಬಳಿ ಎಲ್ಲಾ ರೀತಿಯ ದಾಖಲೆಗಳಿವೆ. ಸೂಕ್ತ ತನಿಖೆ ನಡೆದರೆ ಅದನ್ನು ಕೊಡಲು ಸಿದ್ಧರಿದ್ದೇವೆ ಎಂದರು.

224 ಶಾಸಕರಿಗೂ ನಾವು ಪತ್ರವನ್ನು ನೀಡಿದ್ದೇವೆ. ಈ ಬಗ್ಗೆ ತನಿಖೆಯಾಗಲಿ, ತನಿಖೆಯಲ್ಲಿ ನಮ್ಮದೇ ತಪ್ಪು ಎನ್ನುವುದಾದರೇ ಸರಿಯದ ಸಾಕ್ಷ್ಯವನ್ನು ನೀಡಲಿ. ಸಿಎಂ ನಮ್ಮನ್ನು ಮಾತುಕತೆಗೆ ಕರಿಯುವುದರ ಬಗ್ಗೆ ಸ್ಪಷ್ಟತೆಯಿಲ್ಲ. ಆದರೆ ಭ್ರಷ್ಟಾಚಾರ ಕಡಿಮೆ ಮಾಡಿ ಅಂತ ಸಿಎಂಗೆ ಹೇಳುತ್ತೇವೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

MONEY

ಕೋರ್ಟ್ ಮೊರೆ: ಭ್ರಷ್ಟಾಚಾರಕ್ಕೆ ಕುರಿತಂತೆ ಕೋರ್ಟ್ ಮೊರೆಯೂ ಹೋಗಲಾಗುವುದು. ನೀರಾವರಿ, ಲೊಕೋಪಯೋಗಿ ಇಲಾಖೆ, ಬಿಬಿಎಂಪಿಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಆಗುತ್ತಿದೆ. ಪ್ರತಿ ಜಿಲ್ಲೆಯಲ್ಲೂ ಗುತ್ತಿಗೆದಾರರಲ್ಲದ ನೂರು ಜನರಿಗೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರರೂ ತಪ್ಪು ಮಾಡಿದ್ದಾರೆ. ಅದನ್ನು ಸರಿಪಡಿಸುವ ಕೆಲಸಕ್ಕೆ ಈಗ ಯತ್ನಿಸುತ್ತಿದ್ದೇವೆ. ಭ್ರಷ್ಟಾಚಾರದಲ್ಲಿ ಗುತ್ತಿಗೆದಾರರು ಭಾಗಿಯಾಗಿದರೆ ಅವರ ವಿರುದ್ಧವೂ ಕ್ರಮ ಆಗಲಿ. ಯಾವುದೇ ರೀತಿಯ ಶಿಕ್ಷೆ ಕೊಟ್ಟರೂ ಸ್ವೀಕಾರಲು ಸಿದ್ಧವಾಗಿದ್ದೇವೆ ಎಂದು ಸವಾಲು ಹಾಕಿದರು.

ಐಟಿ ದಾಳಿಗೆ ಮನವಿ ಪತ್ರ ಪರೋಕ್ಷ ಕಾರಣ: ರಾಜ್ಯದ ಹಲವೆಡೆ ಗುತ್ತಿಗೆದಾರರ ಮೇಲೆ ಇತ್ತೀಚೆಗೆ ನಡೆದ ಐಟಿ ದಾಳಿ ವಿಚಾರವಾಗಿ ಮಾತನಾಡಿದ ಅವರು, ಐಟಿ ದಾಳಿ ನಾವು ಪ್ರಧಾನಿಯವರಿಗೆ ಪತ್ರ ಬರೆದ ನಂತರ ಆಗಿದೆ. ಗುತ್ತಿಗೆದಾರರ ಮೇಲಿನ ಐಟಿ ದಾಳಿಗೆ ನಮ್ಮ ಪತ್ರವೂ ಪರೋಕ್ಷ ಕಾರಣ ಎಂದರು.

ನಮ್ಮ ಮನವಿಗೆ ಸರ್ಕಾರ ಒಪ್ಪದಿದ್ದರೆ, ನಾವು ಲಂಚ ಪಡೆದವರ ಹೆಸರು ಬಹಿರಂಗಪಡಿಸುತ್ತೇವೆ. ಗುತ್ತಿಗೆಗಳಲ್ಲಿ ಕಮಿಷನ್ ಪಡೆದ ಮಂತ್ರಿಗಳು, ಶಾಸಕರು, ಅಧಿಕಾರಿಗಳ ಹೆಸರು ಬಹಿರಂಗಪಡಿಸುತ್ತೇವೆ. ಒಂದೊAದು ಜಿಲ್ಲೆಯಲ್ಲಿ ಲಂಚ ಪಡೆದ ಐದಾರು ಜನರ ಹೆಸರು ಬಹಿರಂಗ ಮಾಡುತ್ತೇವೆ. ಜನವರಿ ಅಂತ್ಯದಲ್ಲಿ ಕಮೀಷನ್ ತಿಂದವರ ಹೆಸರು ಬಹಿರಂಗ ಮಾಡುತ್ತೇವೆ ಎಂದು ಕೆಂಪಣ್ಣ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಬೆಳಗಾವಿಯಿಂದ ‘ಸುಶಾಸನ ಸಂಗಮ’ಕ್ಕೆ ವಾರಾಣಸಿಗೆ ಹೊರಟ ಸಿಎಂ ಬೊಮ್ಮಾಯಿ

ರಾಜಕಾರಣಿಗಳ ಒತ್ತಡ: ಕಮಿಷನ್ ಪಡೆದ ರಾಜಕಾರಣಿಗಳು ನಮ್ಮ ಮೇಲೆ ಬೇರೆ ಥರದ ಒತ್ತಡ ಹಾಕುತ್ತಿದ್ದಾರೆ. ಜನವರಿ 3 ರವರೆಗೆ ನಾವು ಕಮೀಷನ್ ಪಡೆದ ಯಾವ ರಾಜಕಾರಣಿ, ಅಧಿಕಾರಿ ಹೆಸರೂ ಹೇಳಲ್ಲ. ನಮ್ಮ ಹೋರಾಟ ವ್ಯವಸ್ಥೆಯ ಚೌಕಟ್ಟಿನೊಳಗೆ ನಡೆಯಲಿದೆ ಎಂದು ಹೇಳಿದರು. ಇದನ್ನೂ ಓದಿ: ಫ್ರೆಂಡ್ಸ್ ಗ್ಯಾಂಗ್ ಜೊತೆ ರಾಯನ್ ರಾಜ್‌ ಸರ್ಜಾ

ರಾಜ್ಯದಲ್ಲಿ ಹೊರ ರಾಜ್ಯದ ಗುತ್ತಿಗೆದಾರರ ಹಾವಳಿ ಹೆಚ್ಚಾಗುತ್ತಿದೆ. ಆಂಧ್ರದ ಗುತ್ತಿಗೆದಾರರಿಂದ ನಮ್ಮ ಸ್ಥಳೀಯ ಗುತ್ತಿಗೆದಾರರಿಗೆ ಸಮಸ್ಯೆ ಹೆಚ್ಚಾಗುತ್ತಿದೆ. ಆಂಧ್ರದವರು ಸೂಟ್ ಕೇಸ್‌ಗಳಲ್ಲಿ ಕಮಿಷನ್ ಕೊಡುತ್ತಾರೆ. ಹಾಗಾಗಿ ಅವರಿಗೆ ಹೆಚ್ಚು ಗುತ್ತಿಗೆ ಸಿಗುತ್ತದೆ ಎಂದರು. ಇದನ್ನೂ ಓದಿ: ಬಳ್ಳಾರಿ ಉಸ್ತುವಾರಿ ಬದಲಾಗದಿದ್ದರೆ ಜನವರಿಯಲ್ಲಿ ಸತ್ಯಾಗ್ರಹ ಆರಂಭಿಸುತ್ತೇನೆ: ಸೋಮಶೇಖರ್ ರೆಡ್ಡಿ

ಗುತ್ತಿಗೆದಾರ ಮಂಜುನಾಥ್ ಮಾತನಾಡಿ, ಯೋಜನೆಗಳ ಗುತ್ತಿಗೆ ಕೊಡುವುದು ಮ್ಯಾಚ್ ಫಿಕ್ಸಿಂಗ್ ಥರವಾಗಿದೆ. ಗುತ್ತಿಗೆ ಕೊಡುವಾಗಲೇ ಯಾರಿಗೆ ಕೊಡಬೇಕು ಅಂತ ಮಂತ್ರಿಗಳು, ಶಾಸಕರು ಫಿಕ್ಸ್ ಮಾಡ್ಕೊಂಡಿರುತ್ತಾರೆ. ಅದಕ್ಕೆ ತಕ್ಕಂತೆ ಗುತ್ತಿಗೆ ನಿಯಮಗಳನ್ನು ಬದಲಾಯಿಸಲಾಗುತ್ತದೆ ಎಂದು ಆರೋಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *