ಬಿಡದಿ ಟೌನ್‌ಶಿಪ್‌ಗೆ 18,000 ಕೋಟಿ; ಬೆಂಗಳೂರು-ಬೀದರ್ ಮಧ್ಯೆ ಮತ್ತೆ ವಿಮಾನ ಯಾನಕ್ಕೆ ಸಂಪುಟ ಒಪ್ಪಿಗೆ

1 Min Read

– ಹೈಸ್ಪೀಡ್ ರೈಲು ಕಾರಿಡಾರ್‌ ಯೋಜನೆಗೆ ಒಪ್ಪಿಗೆ
– ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ 600 ಕೋಟಿ

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವತಿಯಿಂದ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದಲ್ಲಿ ಬಿಡದಿ ಟೌನ್‌ಶಿಪ್‌ಗೆ ಸರ್ಕಾರ ಒಪ್ಪಿಗೆ ನೀಡಿದೆ.

ಗುರುವಾರ ನಡೆದ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. 18,133 ಕೋಟಿ ರೂ. ವೆಚ್ಚದಲ್ಲಿ ಬಿಡದಿ ಟೌನ್‌ಶಿಪ್ ಅನುಷ್ಠಾನಗೊಳಿಸಲು ಕ್ಯಾಬಿನೆಟ್ ಆಡಳಿತಾತ್ಮಕ ಅನುಮೋದನೆ ಕೊಟ್ಟಿದೆ. 9 ಗ್ರಾಮಗಳ ಸುಮಾರು 7,481 ಎಕರೆ ಪ್ರದೇಶದಲ್ಲಿ ಈ ಟೌನ್‌ಶಿಪ್ ನಿರ್ಮಾಣಕ್ಕೆ ಸರ್ಕಾರ ಉದ್ದೇಶಿಸಿದೆ. ರೈತರ ತೀವ್ರ ವಿರೋಧದ ಮಧ್ಯೆ ಸರ್ಕಾರ ಟೌನ್‌ಶಿಪ್ ನಿರ್ಮಾಣಕ್ಕೆ ಮುಂದಾಗಿದೆ.

ಇನ್ನು, ಬೆಂಗಳೂರು-ಹೈದ್ರಾಬಾದ್ ನಡುವಿನ ಹೈಸ್ಪೀಡ್ ರೈಲು ಕಾರಿಡಾರ್ ಅನುಷ್ಠಾನಕ್ಕೆ ಕ್ಯಾಬಿನೆಟ್ ತಾತ್ವಿಕ ಅನುಮೋದನೆ ನೀಡಿದೆ. 607 ಕಿ.ಮೀ. ಉದ್ದದ ಕಾರಿಡಾರ್‌ನಲ್ಲಿ 15 ನಿಲ್ದಾಣಗಳು ಇರಲಿವೆ. ಬೆಂಗಳೂರು-ಬೀದರ್, ಬೆಂಗಳೂರು-ಕಲಬುರಗಿ ಮಾರ್ಗಗಳಲ್ಲಿ ವಿಮಾನ ಸೇವೆಗಳ ನಿರ್ವಹಣೆಗೆ ಸರ್ಕಾರ ಹಣಕಾಸು ಪ್ರೋತ್ಸಾಹಧನವನ್ನ ಒದಗಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ.

ಹಣಕಾಸಿನ ಸಮಸ್ಯೆಯಿಂದಾಗಿ ಮೊನ್ನೆಯಷ್ಟೇ ಬೆಂಗಳೂರು-ಬೀದರ್ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಒಂದು ವರ್ಷಕ್ಕೆ 29.47 ಕೋಟಿ ರೂ. ಪ್ರೋತ್ಸಾಹಧನವನ್ನು `ವಿಜಿಎಫ್’ ರೂಪದಲ್ಲಿ ಒದಗಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಇನ್ನು, ಅಲ್ಪಸಂಖ್ಯಾತರು ವಾಸಿಸುವ ಕಾಲೋನಿಗಳ ಅಭಿವೃದ್ಧಿಗೆ 600 ಕೋಟಿ ರೂ. ಮೊತ್ತದ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಜೊತೆಗೆ, ವಿಜಯಪುರದಲ್ಲಿ ಬೆಂಗಳೂರು ಮಾದರಿ 228 ಕೋಟಿ ವೆಚ್ಚದಲ್ಲಿ ಕೆಎಸ್‌ಡಿಎಲ್ ಉತ್ಪಾದನಾ ಘಟಕ ಸ್ಥಾಪನೆಗೆ ತೀರ್ಮಾನಿಸಲಾಗಿದೆ.

Share This Article