ಹಸಿರು ಶಾಲು, ಬಾವುಟ ಇಟ್ಟು ರೈತನಾಯಕನಿಗೆ ಪೂಜೆ – 11ನೇ ದಿನದ ಪ್ರಯುಕ್ತ ಹಲವು ಕಾರ್ಯಕ್ರಮ

Public TV
1 Min Read

ಮಂಡ್ಯ: ಅಕಾಲಿಕ ನಿಧನ ಹೊಂದಿದ ರೈತನಾಯಕ, ಹೋರಾಟಗಾರ ಮತ್ತು ಶಾಸಕ ಕೆ.ಎಸ್. ಪುಟ್ಟಣ್ಣಯ್ಯನವರ 11ನೇ ದಿನದ ಕಾರ್ಯಕ್ರಮ ಇಂದು ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕ್ಯಾತನಹಳ್ಳಿ ಗ್ರಾಮದ ಅವರ ತೋಟದಲ್ಲಿನ ಪುಟ್ಟಣ್ಣಯ್ಯ ಸಮಾಧಿಯ ಬಳಿ ಪುಟ್ಟಣ್ಣಯ್ಯ ಪತ್ನಿ ಸುನಿತಾ ಪುಟ್ಟಣ್ಣಯ್ಯ, ಪುತ್ರ ದರ್ಶನ್ ಪುಟ್ಟಣ್ಣಯ್ಯ, ಪುತ್ರಿಯರಾದ ಸ್ಮಿತಾ, ಅಕ್ಷತಾ ಹಾಗೂ ಕುಟುಂಬಸ್ಥರು ತೆರಳಿ ಸಾಂಕೇತಿಕವಾಗಿ ಪೂಜೆ ಸಲ್ಲಿಸಿದ್ದಾರೆ. ಪುಟ್ಟಣ್ಣಯ್ಯ ಅವರ ಫೋಟೋವನ್ನು ಹಸಿರು ಶಾಲಿನ ಮೇಲೆ ಇಟ್ಟು, ಸಮಾಧಿ ಮೇಲೆ ಹಸಿರು ಬಾವುಟ ನೆಟ್ಟು ಪೂಜೆ ಸಲ್ಲಿಸಲಾಗಿದೆ. ಅಷ್ಟೇ ಅಲ್ಲದೇ ತಂದೆ ಸಮಾಧಿ ಬಳಿ ಅವರ ಮಗ ಮತ್ತು ಹೆಣ್ಣು ಮಕ್ಕಳು ಗಿಡ ನೆಟ್ಟು ಗೌರವ ಸಲ್ಲಿಸಿದ್ದಾರೆ.

`ತಿಥಿ ಬಿಡಿ ಸಸಿ ನೆಡಿ’ ಎಂಬ ಪುಟ್ಟಣ್ಣಯ್ಯ ಅವರ ಮಾತಿನಂತೆ ನಡೆಯುವ ಸಲುವಾಗಿ ಇಂದು ಹನ್ನೊಂದನೇ ದಿನದ ಕಾರ್ಯದ ನಿಮಿತ್ತ ವಿವಿಧ ಸಾಮಾಜಿಕ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಕ್ಯಾತನಹಳ್ಳಿ ಗ್ರಾಮದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ರಕ್ತದಾನ ಶಿಬಿರದಲ್ಲಿ ಮಿಮ್ಸ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದಿಂದ ರಕ್ತ ಪಡೆಯಲಾಯಿತು. ಇದನ್ನು ಓದಿ: ರಾಜ್ಯದ 30 ಜಿಲ್ಲೆಗಳ ಮಣ್ಣಿನಿಂದ ಪುಟ್ಟಣ್ಣಯ್ಯ ಅವರ ಅಂತ್ಯಕ್ರಿಯೆ

ಪುಟ್ಟಣ್ಣಯ್ಯ ಅಭಿಮಾನಿಗಳು, ಕಾರ್ಯಕರ್ತರು ಸ್ವಯಂ ಪ್ರೇರಿತವಾಗಿ ಆಗಮಿಸಿ ರಕ್ತದಾನ ಮಾಡಿದ್ದಾರೆ. ಸಂಜೆ ಪುಟ್ಟಣ್ಣಯ್ಯ ಅವರ ಗೌರವಾರ್ಥ ಹಲವು ಜನ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ನಾಟಕ ಹಾಗೂ ಸಸಿ ವಿತರಣೆ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ. ಇದನ್ನು ಓದಿ: ರೈತ ಮುಖಂಡ, ಮೇಲುಕೋಟೆ ಶಾಸಕ ಪುಟ್ಟಣ್ಣಯ್ಯ ವಿಧಿವಶ- ಅಂತಿಮ ದರ್ಶನ ಪಡೆದ ನಟ ದರ್ಶನ್

Share This Article
Leave a Comment

Leave a Reply

Your email address will not be published. Required fields are marked *