– ತಂದೆ ಫೋನ್ ಕಸಿದುಕೊಂಡಿದ್ಕೆ ಖಿನ್ನತೆಗೊಳಗಾಗಿದ್ದ ಯುವಕ
ಚೆನ್ನೈ: ಚೀನಾ ಆ್ಯಪ್ ಹಿನ್ನೆಲೆ ಭದ್ರತೆಯ ದೃಷ್ಟಿಯಿಂದ ಭಾರತ ಪಬ್ ಜಿ ಗೇಮ್ನ್ನು ದೇಶದಲ್ಲಿ ನಿಷೇಧಿಸಲಾಗಿದೆ. ನಿಷೇಧಿತ ಗೇಮ್ ಆಡಬೇಡ ಎಂದು ತಂದೆ ಹೇಳಿದ್ದಕ್ಕೆ 12ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ತಮಿಳುನಾಡಿನ ವನಿಯಂಬಾಡಿ ಪಟ್ಟಣದಲ್ಲಿ ಘಟನೆ ನಡೆದಿದ್ದು, 12ನೇ ತರಗತಿ ವಿದ್ಯಾರ್ಥಿ ಶ್ರೀನಿವಾಸ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಕೊರೊನಾ ವೈರಸ್ ಹಿನ್ನೆಲೆ ಲಾಕ್ಡೌನ್ ಬಳಿಕ ವಿದ್ಯಾರ್ಥಿ ಮನೆಯಲ್ಲೇ ಇರುತ್ತಿದ್ದರಿಂದ ಪಬ್ ಜಿ ಗೇಮ್ನಲ್ಲಿಯೇ ಆಡುವುದರಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದ. ಹೀಗಾಗಿ ಪಬ್ ಜಿ ಹುಚ್ಚು ಹಿಡಿದಿತ್ತು. ಇದನ್ನೂ ಓದಿ: ಪಬ್ ಜಿ ಹುಚ್ಚು- ಅಜ್ಜನ 2.34 ಲಕ್ಷ ಪೆನ್ಶನ್ ಹಣ ಲಪಟಾಯಿಸಿದ ಮೊಮ್ಮಗ
ವಿದ್ಯಾರ್ಥಿಯ ತಂದೆ ಪೆರುಮಲ್ ಬೆಳ್ಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ. ಚೀನಾ ಮೂಲದ ಆ್ಯಪ್ ಎನ್ನುವ ಕಾರಣಕ್ಕೆ ಭದ್ರತೆ ದೃಷ್ಟಿಯಿಂದ ಇತ್ತೀಚೆಗೆ ಭಾರತದಲ್ಲಿ ಪಬ್ ಜಿಯನ್ನು ನಿಷೇಧಿಸಲಾಗಿದೆ. ಹೀಗಾಗಿ ವಿದ್ಯಾರ್ಥಿ ತಂದೆ ಪಬ್ ಜಿ ಆಡಬೇಡ ಎಂದು ಬುದ್ಧಿ ಹೇಳಿದ್ದಾರೆ. ಇಷ್ಟಕ್ಕೇ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪಬ್ ಜಿ ಆಡುತ್ತಲೇ ಹೆಚ್ಚು ಕಾಲ ಕಳೆಯುತ್ತಿದ್ದ ಮಗನಿಗೆ ಪೆರುಮಲ್ ಬುದ್ಧಿ ಮಾತು ಹೇಳಿ, ಗೇಮ್ ಆಡಬೇಡ ಎಂದಿದ್ದರು. ಅಲ್ಲದೆ ಅವನ ಕೈಯ್ಯಲ್ಲಿದ್ದ ಫೋನ್ನ್ನು ಸಹ ಕಸಿದುಕೊಂಡು, ಬೈದಿದ್ದರು. ಇದರಿಂದ ಖಿನ್ನತೆಗೊಳಗಾದ ವಿದ್ಯಾರ್ಥಿ ಶ್ರೀನಿವಾಸ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಘಟನೆಯಿಂದಾಗಿ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿದ್ದು, ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಸದ್ಯ ಯುವಕನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.