ಪೊಲೀಸರ ಜೊತೆ ಬೈಕ್ ಸವಾರನ ವಾಗ್ವಾದ – ಪಿಎಸ್‍ಐ ಕಮಲಾರಿಂದ ಕಪಾಳ ಮೋಕ್ಷ

Public TV
1 Min Read

– ಹಾವೇರಿಯಲ್ಲಿ ಹೊರಗೆ ಬಂದವರಿಗೆ ಬೈಕ್ ತಳ್ಳೋ ಶಿಕ್ಷೆ

ಗದಗ/ಹಾವೇರಿ: ಲಾಕ್‍ಡೌನ್ ಘೋಷಣೆಯಾಗಿದ್ರೂ ಅನಗತ್ಯವಾಗಿ ಹೊರಗೆ ಬಂದವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ. ಗದಗನಲ್ಲಿ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದ ಬೈಕ್ ಸವಾರನಿಗೆ ಪಿಎಸ್‍ಐ ಕಮಲಾ ದೊಡ್ಡಮನಿ ಕಪಾಳಮೋಕ್ಷ ಮಾಡಿದ್ದಾರೆ. ಇತ್ತ ಹಾವೇರಿಯಲ್ಲಿ ಹೊರಗೆ ಬಂದವರಿಗೆ ಬೈಕ್ ತಳ್ಳುವ ಶಿಕ್ಷೆ ನೀಡಲಾಗುತ್ತಿದೆ.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಅನಗತ್ಯವಾಗಿ ಹೊರ ಬಂದವ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾನೆ. ಕೇಳಿದರೆ ನಾನು ಕಂಟ್ರಾಕ್ಟರ್. ಹಳ್ಳಿಯಿಂದ ಬರಬೇಕು, ಕೆಲಸಕ್ಕೆ ಹೋಗಬೇಕು ಗಾಡಿ ಹಿಡಿಬೇಡಿ ದಾರಿ ಬಿಡಿ ಎಂದು ವಾದಿಸಿದ್ದಾನೆ. ಅಲ್ಲದೇ ಯಾವುದೋ ರಾಜಕೀಯ ನಾಯಕರಿಗೆ ಕರೆ ಮಾಡಿ ಪೊಲೀಸರಿಗೆ ಕೊಡಲು ಹೋಗಿದ್ದಾನೆ. ಇದರಿಂದ ಕೆಂಡಾಮಂಡಲವಾದ ಪಿಎಸ್‍ಐ ಕಮಲಾ ದೊಡ್ಡಮನಿ ಅವರು ಕಪಾಳಕ್ಕೆ ಹೊಡೆದಿದ್ದಾರೆ.

ಈ ಸಂದರ್ಭದಲ್ಲಿ ಮತ್ತೆ ಬೈಕ್ ಸವಾರ ವಾಗ್ವಾದ ನಡೆಸಿದ್ದಾನೆ. ಇದರಿಂದ ಪೊಲೀಸರು ಸವಾರನನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಇಲ್ಲಿಯ ಭೂಮರಡ್ಡಿ ಸರ್ಕಲ್ ನಲ್ಲಿ ನಡೆದಿದೆ. ಸಿಬ್ಬಂದಿಗಳ ಮೇಲೆಯೂ ಈ ವ್ಯಕ್ತಿ ತನ್ನ ದರ್ಪ ತೋರಿಸಲು ಪ್ರಯತ್ನಿಸಿದ್ದನು.

ಹಾವೇರಿಯಲ್ಲಿ ಬೈಕ್ ತಳ್ಳುವ ಶಿಕ್ಷೆ: ಹಾವೇರಿಯ ರಾಣೇಬೆನ್ನೂರಿನಲ್ಲಿ ಅನಗತ್ಯವಾಗಿ ಹೊರಗೆ ಬೈಕ್ ನಲ್ಲಿ ಓಡಾಡ್ತಿದ್ದವರ ಕೀಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ಬೈಕ್ ಸವಾರರು ತಮ್ಮ ಬೈಕ್ ಗಳನ್ನ ಠಾಣೆವೆರೆಗೂ ತಳ್ಳಿಕೊಂಡು ಹೋಗಿ ದಂಡ ಕಟ್ಟಿ ಹೋಗುವ ಶಿಕ್ಷೆ ನೀಡಿದ್ದಾರೆ. ರಾಣೇಬೆನ್ನೂರು ಪೊಲೀಸರ ಡಿಫರೆಂಟ್ ಶಿಕ್ಷೆಗೆ ಬೈಕ್ ಸವಾರರು ಸುಸ್ತೋ ಸುಸ್ತು ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *