ಕ್ರಿಕೆಟ್ ಪ್ರಿಯರಿಗೆ ಶಾಕ್ ಕೊಟ್ಟ ಸೌರವ್ ಗಂಗೂಲಿ

Public TV
1 Min Read

ಮುಂಬೈ: ಕೊರೊನಾ ಕಾಟದಿಂದಾಗಿ ಮುಂದೂಡಲ್ಪಟ್ಟ 14ನೇ ಆವೃತ್ತಿಯ ಐಪಿಎಲ್‍ನ ಉಳಿದ ಪಂದ್ಯಗಳು ಭಾರತದಲ್ಲಿ ನಡೆಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಕ್ರಿಕೆಟ್ ಪ್ರಿಯರಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಶಾಕ್ ನೀಡಿದ್ದಾರೆ.

ಈ ಕುರಿತು ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಸೌರವ್ ಗಂಗೂಲಿ, ಈಗಾಗಲೇ 14ನೇ ಆವೃತ್ತಿ ಐಪಿಎಲ್‍ನ ಮುಂದೂಡಲ್ಪಟ್ಟ ಪಂದ್ಯಗಳು ಇನ್ನು ಭಾರತದಲ್ಲಿ ನಡೆಸಲು ಸಾಧ್ಯವಿಲ್ಲ. ಏಕೆಂದರೆ ಭಾರತದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಅದಲ್ಲದೇ ಪಂದ್ಯಗಳನ್ನು ಆಯೋಜನೆ ಮಾಡಲು ಸಾಕಷ್ಟು ಅಡೆತಡೆಗಳಿವೆ ಮತ್ತು 14 ದಿನಗಳ ಕ್ವಾರಂಟೈನ್‍ಗೆ ಆಟಗಾರರನ್ನು ಒಳಪಡಿಸುವುದು ಕಷ್ಟಸಾಧ್ಯ. ಇದರೊಂದಿಗೆ ಈಗಾಗಲೇ ನಿಗದಿಯಾಗಿರುವ ಅಂತರಾಷ್ಟ್ರೀಯ ಪಂದ್ಯಾಟಗಳನ್ನು ನಡೆಸಬೇಕಾಗಿದೆ ಹಾಗಾಗಿ ಉಳಿದ ಪಂದ್ಯಗಳನ್ನು ನಡೆಸುವುದು ದೂರದ ಮಾತಾಗಿದೆ ಎಂದಿದ್ದಾರೆ.

ಭಾರತ ತಂಡ ಮುಂದೆ ಐಸಿಸಿಯ ಟೆಸ್ಟ್ ಚಾಂಪಿಯನ್‍ಶಿಪ್ ಪಂದ್ಯಕ್ಕಾಗಿ ಇಂಗ್ಲೆಂಡ್‍ಗೆ ತೆರಳಲಿದೆ ಬಳಿಕ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಅದಾದ ಬಳಿಕ ಮತ್ತೆ ಜುಲೈನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ ಅಲ್ಲಿ ಏಕದಿನ ಮತ್ತು ಟಿ20 ಸರಣಿಯಲ್ಲಿ ಭಾಗವಹಿಸಲಿರುವ ಕಾರಣ ಐಪಿಎಲ್‍ಗೆ ದಿನನಿಗದಿ ಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಇದೆಲ್ಲದರ ನಡುವೆ ಐಪಿಎಲ್‍ನ ಉಳಿದ ಪಂದ್ಯಗಳನ್ನು ನಡೆಸಲು ಇಂಗ್ಲೆಂಡ್, ಶ್ರೀಲಂಕಾ ಸಹಿತ ಕೆಲವು ಕ್ರಿಕೆಟ್ ಮಂಡಳಿಗಳು ಮುಂದೆ ಬಂದಿವೆ. ಆದರೆ ಬಿಸಿಸಿಐ ಮಾತ್ರ ಇದ್ಯಾವುದಕ್ಕೂ ಒಲವು ತೋರಿಸಿದಂತೆ ಕಾಣಿಸುತ್ತಿಲ್ಲ. ಹಾಗಾಗಿ 14ನೇ ಆವೃತ್ತಿಯ ಮುಂದಿನ ಪಂದ್ಯಗಳು ನಡೆಯುವುದು ಅನುಮಾನವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *