ಕಾಡಾನೆಗಳ ಉಪಟಳಕ್ಕೆ ಕಂಗಾಲಾದ ಕೊಡಗಿನ ರೈತರು

Public TV
1 Min Read

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಾಡಾನೆ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂತಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು ಕೃಷಿಕರು ಕಂಗಾಲಾಗಿದ್ದಾರೆ. ಗ್ರಾಮದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ಕಾಫಿ, ಬಾಳೆ ತೋಟಗಳಿಗೆ ನುಗ್ಗಿ ಫಸಲನ್ನು ತಿಂದು ನಾಶಪಡಿಸುತ್ತಿದೆ.

ಕಳೆದ ರಾತ್ರಿ ಸೋಮವಾರಪೇಟೆ ತಾಲೂಕಿನ ಕೂತಿ ಗ್ರಾಮದ ಕೆ.ಡಿ ಗಿರೀಶ್ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಕಾಫಿ ಗಿಡಗಳನ್ನು ಹಾಗೂ ಫಸಲು ಬಿಟ್ಟಿದ್ದ ಬಾಳೆ ಗಿಡಗಳನ್ನು ನಾಶ ಪಡಿಸಿವೆ. ಅಲ್ಲದೆ ಅಕ್ಕಪಕ್ಕದ ಗ್ರಾಮಸ್ಥರ ಕಾಫಿಗಿಡ, ಬಾಳೆ, ರಾಸಾಯನಿಕ ಗೊಬ್ಬರ ತುಂಬಿದ ಚೀಲಗಳನ್ನು ಹಾಳುಗೆಡವಿ ಸಾಕಷ್ಟು ನಷ್ಟ ಉಂಟಾಗುವಂತೆ ಮಾಡಿದೆ. ಇದನ್ನೂ ಓದಿ: ಕೋಣಗಳು ಕಾದಾಡಿದ್ದಕ್ಕೆ ಬಡಿದಾಡಿಕೊಂಡ ಮಾಲೀಕರು – ಆಸ್ಪತ್ರೆಗೆ ದಾಖಲು

ಕೆಲ ದಿನಗಳಿಂದ ಗ್ರಾಮದಲ್ಲಿ ಕಾಣಿಸಿಕೊಂಡಿರುವ 4 ರಿಂದ 5 ಆನೆಗಳಿರುವ ಹಿಂಡು, ಕೂತಿ ಮತ್ತು ನಗರಳ್ಳಿ ಭಾಗದಲ್ಲಿ ಸಂಚರಿಸುತ್ತಿವೆ. ಇದಲ್ಲದೇ ಜಿಲ್ಲೆಯ ಹಲವು ಜನರ ಪ್ರಾಣವನ್ನು ಕೂಡ ಆನೆ ಬಲಿ ಪಡೆದಿದೆ. ಮಾಲೀಕರು ಹಾಗೂ ಕಾರ್ಮಿಕರು ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನಿರಂತರ ದಾಳಿ ನಡೆಸುವ ಆನೆಗಳನ್ನು ಕಾಡಿಗಟ್ಟಬೇಕೆಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ. ಈ ಹಿಂದೆ ಹಲವು ಬಾರಿ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಕೂಡ ಕಾಡಾನೆಗಳನ್ನು ಅರಣ್ಯ ಪ್ರದೇಶಕ್ಕೆ ಓಡಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವಿಫಲವಾಗಿದ್ದಾರೆ ಎಂದು ದೂರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *